ನಿವರಗಿಯ ಸರ್ಕಾರಿ ಹಾಸ್ಟೇಲ್ನಲ್ಲಿ ದಾರುಣ ಘಟನೆ | ಡೆತ್ನೋಟ್ ಬರೆದು ಸಾವಿಗೆ ಶರಣು
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ನಿವರಗಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹೆಡ್ ಕುಕ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ವಸತಿ ನಿಲಯದ ವಾರ್ಡನ್ ಮಲ್ಲಪ್ಪ ಎಸ್. ವಾಲೀಕಾರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಹಾಸ್ಟೇಲ್ ವಾರ್ಡನ್ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಭಗವಾನಸಿಂಗ್ ಕಿಶನಸಿಂಗ್ ಪರದೇಶಿ (58) ಎಂದು ಗುರುತಿಸಲಾಗಿದೆ. ಇವರು ಸುಮಾರು 23 ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಹೆಡ್ ಕುಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕುಟುಂಬದೊಂದಿಗೆ ನಿವರಗಿಯಲ್ಲಿ ವಾಸವಾಗಿದ್ದು, ಪತ್ನಿ ಅನಿತಾ ಹಾಗೂ ಮಗ ಕಿಶನಸಿಂಗ್ ಕೂಡ ಇದೇ ಹಾಸ್ಟೇಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಮೃತರ ಪತ್ನಿ ಅನಿತಾ ಪರದೇಶಿ ನೀಡಿದ ದೂರಿನ ಪ್ರಕಾರ,ಹಾಸ್ಟೇಲ್ ವಾರ್ಡನ್ ಮಲ್ಲಪ್ಪ ಎಸ್. ವಾಲೀಕಾರ ಕಳೆದ ಜನೇವರಿಯಲ್ಲಿ ಡೆಪ್ಯುಟೆಷನ್ ಮೇಲೆ ಲೋಣಿ ಬಿಕೆ ಗ್ರಾಮದಲ್ಲಿರುವ ಹಾಸ್ಟೆಲ್ಗೆ ವರ್ಗಾವಣೆ ಗೊಂಡು ಅಲ್ಲಿನ ವಾರ್ಡನ್ ಆದ ಶಿವಾನಂದ ಅಂಗಡಿ ಅವರು ನೀವರಗಿ ಹಾಸ್ಟೇಲ್ಗೆ ಬಂದಿದ್ದರು ಅವರು ಕೇವಲ ಸಹಿಮಾಡಿ ಹೊಗುತ್ತಿದ್ದು , ವಾರ್ಡನ್ ಮಲ್ಲಪ್ಪ ಎಸ್. ವಾಲೀಕಾರ ಅವರ ಮಾತಿನಂತೆ ನಡೆಯಿರಿ ಎಂದು ನಮಗೆ ಆದೇಶಿಸಿದ್ದರು ಅದರಂತೆ ನಾವು ಹಾಸ್ಟೇಲ್ ವಾರ್ಡನ್ ಮಲ್ಲಪ್ಪ ಎಸ್. ವಾಲೀಕಾರ ಅವರ ಸೂಚನೆ ಪಾಲಿಸುತ್ತಿದ್ದೆವು, ಹಾಸ್ಟೇಲ್ ವಾರ್ಡನ್ ಮಲ್ಲಪ್ಪ ಎಸ್. ವಾಲೀಕಾರ ಕಳೆದ ಒಂದು ವರ್ಷದಿಂದ ವಿವಿಧ ಕಾರಣಗಳಿಗೆ ನಿರಂತರ ಒತ್ತಡ ಹಾಗೂ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆಹಾರ ಸಾಮಗ್ರಿ, ದಿನಸಿ ಖರೀದಿ, ವಿದ್ಯಾರ್ಥಿಗಳ ಕೂದಲು ಕಟಿಂಗ್ ವೆಚ್ಚ ಸೇರಿದಂತೆ ಹಲವು ವಿಷಯಗಳಲ್ಲಿ ಅನಗತ್ಯ ಒತ್ತಡ ಹಾಕುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಇದಲ್ಲದೆ, “ನೀವು ನನ್ನ ಮಾತಿನಂತೆ ಕೆಲಸ ಮಾಡದಿದ್ದರೆ ಕೆಲಸ ಬಿಟ್ಟು ಹೋಗಿ, ಎಲ್ಲಿ ಆದರು ಹೋಗಿ ಉರುಲು ಹಾಕಿಕೊಂಡು ಸಾಯಿರಿ ಮಕ್ಕಳ್ಯಾ” ಎಂಬ ರೀತಿಯ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದು, ಅವಮಾನಕಾರಿ ಮತ್ತು ಪ್ರಚೋದನಾತ್ಮಕ ಮಾತುಗಳನ್ನು ಆಡುತ್ತಿದ್ದರೆಂದು ಆರೋಪಿಸಲಾಗಿದೆ. ಈ ಮಾತುಗಳಿಂದ ಮಾನಸಿಕವಾಗಿ ನೊಂದ ಭಗವಾನಸಿಂಗ್ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 8ರಂದು ನಡೆದ ಘಟನೆಯಲ್ಲಿ ಕೂದಲು ಕತ್ತರಿಸುವ ವೆಚ್ಚದ ವಿಚಾರವಾಗಿ ವಾರ್ಡನ್ ಮತ್ತು ಮೃತರ ನಡುವೆ ವಾಗ್ವಾದ ನಡೆದಿದ್ದು, ಅದರಿಂದ ಮಾನಸಿಕವಾಗಿ ಬೇಸರಗೊಂಡಿದ್ದ ಭಗವಾನಸಿಂಗ್ ಅವರು ಮರುದಿನ ಏಪ್ರಿಲ್ 9ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಸಂಭವಿಸಿದ್ದು, ಹಾಸ್ಟೇಲ್ನಲ್ಲಿಯೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ಮೃತರು ತಮ್ಮ ಕಿಸೆಯಲ್ಲಿ ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ವಾರ್ಡನ್ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿರುವುದಾಗಿ ಕುಟುಂಬದವರು ಹೇಳಿದ್ದಾರೆ.
ಈ ಘಟನೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 50/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಕಲಂ 108 ಹಾಗೂ 352 ಅನ್ವಯ ಪ್ರಕರಣ ದಾಖಲಿಸಿಕೊಂಡು, ಪಿ.ಎಸ್.ಐ ಸೋಮೇಶ ಗೆಜ್ಜಿ ಅವರು ತನಿಖೆ ಮುಂದುವರೆಸಿದ್ದಾರೆ.

