ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: “ಕನ್ನಡ ರಂಗಭೂಮಿಗೆ ವಿಶಿಷ್ಟವಾದ ಪರಂಪರೆಯಿದೆ. ಇಂದಿನ ರಂಗಭೂಮಿ ದೃಶ್ಯಮಾಧ್ಯಮಗಳ ಪ್ರಭಾವದಿಂದ ಹಲವಾರು ಸಾಂಪ್ರದಾಯಿಕ ನಾಟಕಗಳು ನಶಿಸುತ್ತಿದ್ದರೂ, ಪ್ರೇಮಿಗಳ ಹೃದಯದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ,” ಎಂದು ಶ್ರೀ ಬಿ.ಆರ್. ಬನಸೋಡೆ ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಜಮಖಂಡಿಯಲ್ಲಿ ನಾಟಕ ಮತ್ತು ರಂಗಭೂಮಿ ಕಲೆ ವಿಭಾಗದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ “ಮಧುರಚೆನ್ನ” ಕುರಿತ ಏಕವ್ಯಕ್ತಿ ನಾಟಕವನ್ನು ಮೈಸೂರಿನ ಕವಿತಾ ಕಲಾ ತಂಡವು ಮನೋಜ್ಞವಾಗಿ ಪ್ರದರ್ಶಿಸಿತು.
ಮಧುರಚೆನ್ನರ ಜೀವನ, ಸಾಹಿತ್ಯ ಸಾಧನೆ ಹಾಗೂ ಅವರ ಚಿಂತನೆಗಳನ್ನು ಪ್ರತಿಬಿಂಬಿಸುವಂತೆ ನಾಟಕ ರೂಪುಗೊಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ನಾಟಕದ ಪ್ರಸ್ತುತಿಯನ್ನು ಮಧುರಚೆನ್ನರ ಮೊಮ್ಮಗ ಶ್ರೀ ಜಗದೇವ ಗಲಗಲಿ ಅವರು ಭಾವಪೂರ್ಣವಾಗಿ ನಿರ್ವಹಿಸಿದರು. ನಾಟಕದ ರಚನೆ ಮತ್ತು ನಿರ್ದೇಶನವನ್ನು ಶ್ರೀ ಗಣೇಶ ಅಮಿನಗಡ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣೇಶ ಅಮಿನಗಡ ಅವರು, “ಮಧುರಚೆನ್ನರ ಬದುಕು–ಬರಹ ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗುತ್ತದೆ. ಕನ್ನಡ ಭಾಷೆಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ,” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಸುನಂದ ಎಸ್. ಶಿರಂದ ಅವರು, ನಾಟಕಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಲಾ ಅಭಿರುಚಿ ಬೆಳೆಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು. ಉಪನ್ಯಾಸಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರನ್ನು ಅಭಿನಂದಿಸಿದರು.
ಕಾರ್ಯಕ್ರಮವು ಸಾಹಿತ್ಯ ಮತ್ತು ರಂಗಭೂಮಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಲ್ಲಿ ಯಶಸ್ವಿಯಾಯಿತು.

