ಉದಯರಶ್ಮಿ ದಿನಪತ್ರಿಕೆ
ಚಡಚಣ: ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ಅಡೆತಡೆ ಇಲ್ಲದೆ ನೀರು ಪೂರೈಸಲು ಗಮನ ಹರಿಸಬೇಕು. ಬೇಸಿಗೆ ಮುಗಿಯುವವರೆಗೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿದ್ದು ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಶೋಕಕುಮಾರ ರಾಠೋಡ ರವರು ಹೇಳಿದರು.
ಗುರುವಾರದಂದು ರೇವತಗಾಂವ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಧಿಡೀರ ಭೇಡಿ ನೀಡಿ ಮಾತನಾಡಿದ ಅವರು. ಲಕ್ಷಾಂತರ ರೂ.ಗಳ ವೆಚ್ಚಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಸಹ ರೇವತಗಾಂವ, ಹಾಲಳ್ಳಿ ಹಾಗೂ ಶಿರಾಡೋಣ ಗ್ರಾಮಗಳಲ್ಲಿ ಜನರ ಬಳಕೆಗೆ ಉಪಯೋಗವಿಲ್ಲದಂತಾಗಿದೆ. ಸಂಬಂಧಪಟ್ಟ ಗುತ್ತಿಗೆದಾರರು ಶುದ್ಧ ಕುಡಿಯುವ ನೀರಿನ ಘಟಕಗಳು ಹಸ್ತಾಂತರವನ್ನು ಮಾಡಿದ್ದರೂ ಅವುಗಳನ್ನು ಸಮಪರ್ಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದೀರಿ? ತಕ್ಷಣವೇ ದುರಸ್ಥಿಗೊಳಿಸಿ ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಿ ಎಂದು ಸೂಚಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಭ್ಯವಿರುವ ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸಿ. ಅಂತೆಯೇ ಬಹು ಹಳ್ಳಿ ಕುಡಿಯುವ ನೀರು, ಬಾವಿ, ಬೋರ್ವೆಲ್ ಹಾಗೂ ಪೈಪ್ಲೈನ್ಗಳ ದುರಸ್ಥಿ ಮಾಡಬೇಕಿದ್ದರೆ ತಕ್ಷಣವೇ ಕ್ರಮವಹಿಸಿ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ನಂತರ ವಿವಿಧ ಕಡತಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಪಿಡಿಓ ದೇವೇಂದ್ರ ವಾಗ್ಮೋಡೆ, ಕಾರ್ಯದರ್ಶಿ ಮಾದೇವ ಪೂಜಾರಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಎಸ್.ಎಂ.ಮಾಳಿ, ಮಾಜಿ ಗ್ರಾಪಂ ಸದಸ್ಯ ಮಹಾದೇವ ಅಂಕಲಗಿ, ವಿಜಯಕುಮಾರ ಹಿರೇಮಠ, ಲಾಯಪ್ಪ ಲೋಣಿ, ಸುರೇಶ ಹಕ್ಕೆ ಸೇರಿದಂತೆ ಗ್ರಾಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

