ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮ ಸಮಾಜದ ಹರಿಕಾರ, ಎಲ್ಲರಿಗೂ ಸಮಬಾಳು ಎನ್ನುವ ತತ್ವದಲ್ಲಿ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿ ಜಗತ್ತಿನ ಶ್ರೇಷ್ಠ ಸಂವಿಧಾನ ನೀಡಿದ ಹೆಮ್ಮೆಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಇದೇ ದಿ. ೧೧ ರಿಂದ ೧೪ ರವರೆಗೆ ಅಂಬೇಡ್ಕರ್ ಹಬ್ಬ-೨೦೨೬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯ ಡಾ. ಬಾಬು ರಾಜೇಂದ್ರ ನಾಯಕ್ ಹೇಳಿದರು.
ನಗರದ ಖಾಸಗಿ ಹೋಟೆಲನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಜಗತ್ತಿನ ಶ್ರೇಷ್ಠ ಗ್ರಂಥ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರ ಮನೆ -ಮನಗಳಿಗೂ ತಲುಪಿಸಬೇಕು. ಅವರ ಜಯಂತಿ ಕೇವಲ ಕಾರ್ಯಕ್ರಮವಾಗದೆ ಅವರ ವಿಚಾರ ಧಾರೆಗಳನ್ನು, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಜಯಂತಿ ಆಚರಣೆಗೆ ಸಿಮಿತವಾಗಿಲ್ಲ ಅವರು ಸರ್ವ ವ್ಯಾಪಿ, ಆ ನಿಟ್ಟಿನಲ್ಲಿಯೇ ಅಂಬೇಡ್ಕರ್ ಜಯಂತಿ ಇದೊಂದು ಸಂಗಮವಾಗಿದೆ. ಬಸವ ಬುದ್ದ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೆಲಕು ಹಾಕುವ ವಿಶೇಷ ಕಾರ್ಯಕ್ರಮವೇ ಈ ಅಂಬೇಡ್ಕರ್ ಹಬ್ಬ.
ವಿಜಯಪುರಕ್ಕೆ ಅಂಬೇಡ್ಕರ್ ಭೇಟಿ ನೀಡಿ ಇಲ್ಲಿನ ರಾಣಿ ಬಗಿಚಗೆ ಭೇಟಿ ನೀಡಿ ಈ ಭೂಮಿಯನ್ನು ಪವಿತ್ರಗೊಳಿಸಿದ್ದಾರೆ. ಎಲ್ಲರಿಗೂ ಶಿಕ್ಷಣ ದೊರಕಿಸಿ ಶೋಷಣೆಯಿಂದ ರಕ್ಷಣೆ ನೀಡುವ ಉದ್ದೇಶದಿಂದ ಹೋರಾಟ ಮಾಡಿದ ಫಾತಿಮಾ ಶೇಕ್ ಅವರನ್ನು, ಜ್ಯೋತಿಭಾ ಫುಲೆ, ಸಾವಿತ್ರಿ ಬಾಯಿ ಫುಲೆ ಅವರ ಚಿಂತನೆಗಳ ಮೆಲುಕು ಹಾಕುವ ಕಾರ್ಯಕ್ರಮ ಇದಾಗಲಿದೆ ಎಂದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, ಬಾಬ್ ಸಾಹೇಬ್ ಅಂಬೇಡ್ಕರ್ ೧೯೩೯ ರಲ್ಲಿ ಬರಡೋಲ್ ಹಾಗೂ ವಿಜಯಪುರಕ್ಕೆ ಭೇಟಿ ಮಾಡಿ ಇಲ್ಲಿ ಒಂದು ಕೋರ್ಟ್ ಕೇಸ್ ನಲ್ಲಿ ಭಾಗವಹಿಸಿ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ನಾವು ಮಕ್ಕಳಿಗೆ ಸಂವಿಧಾನ ಮಹತ್ವ ತಿಳಿಸಬೇಕು. ಸಂವಿಧಾನ ರಕ್ಷಣೆ ಅವಶ್ಯಕತೆ ಏಕಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಸಂವಿಧಾನ ಎಲ್ಲ ಸಮಾಜಗಳಿಗೂ ಸಂಬಂಧಿಸಿದ್ದು, ಈ ೨ ನೇ ವರ್ಷದ ಅಂಬೇಡ್ಕರ್ ಹಬ್ಬ – ೨೦೨೬ ಬಹಳಷ್ಟು ವಿಶೇಷತೆಯಿಂದ ಕೂಡಿದೆ.
ಸಾಮಾಜಿಕ ಹೋರಾಟಗಾರ ಎಂ.ಸಿ.ಮುಲ್ಲಾ ಮಾತನಾಡಿ, ಮಹಾನ್ ವ್ಯಕ್ತಿಗಳು ಸಮಸ್ತ ಸಮಾಜದ ಆಸ್ತಿ, ಕೆಲವರು ಒಂದೆ ಸಮಾಜಕ್ಕೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ ಇದು ಕಳವಳಕಾರಿ ಸಂಗತಿ ಅದು ಆಗಬಾರದು ಎಂದರು.
ದಿ. ೧೧ ರಂದು ಜ್ಯೋತಿಬಾ ಫುಲೆ ಅವರ ೧೯೯ ನೇ ಜಯಂತಿ ಆಚರಣೆ ಹಾಗೂ ಮಹಾತ್ಮಾ ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟನೆ ಮಾಡಲಿದ್ದಾರೆ. ಸಂಜೆ ೫ ಗಂಟೆಗೆ ಸಂಸ್ಕೃತಿಕ ಕಾರ್ಯಕ್ರಮವನ್ನು ಡಾ. ಬಾಬು ರಾಜೇಂದ್ರ ನಾಯಕ ಉದ್ಘಾಟಿಸಲಿದ್ದಾರೆ.
ದಿ. ಏಪ್ರಿಲ್ ೧೨ ರಂದು ಸಂಸ್ಕೃತಿಕ ನಾಯಕ ಬಸವಣ್ಣನವರ ವೈಚಾರಿಕ ಚಿಂತನಗೋಷ್ಠಿ ಕಾರ್ಯಕ್ರಮ ನಡೆಯಲಿದ್ದು ಕರ್ನಾಟಕ ವಿಧಾನ ಸಭೆ ಸಭಾಪತಿ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ಗ್ರಾಮೀಣಾಭಿರುದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ಅಂದು ಸಂಜೆ ೫ ಗಂಟೆಗೆ ಸಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ವನಶ್ರೀ ಬ್ಯಾಂಕ್ ಅಧ್ಯಕ್ಷ ರಾಕೇಶ ಕಲ್ಲೂರ್ ಉದ್ಘಾಟನೆ ಮಾಡಲಿದ್ದಾರೆ. ಕರಾಅಮವಿವಿ ಕುಲಸಚಿವ ಶಂಕರಗೌಡ ಸೋಮನಾಳ ಭಾಗವಹಿಸಲಿದ್ದಾರೆ.
ದಿ.ಏಪ್ರಿಲ್ ೧೩ ರಂದು ನಾವು-ನಮ್ಮ ಸಂವಿಧಾನ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟನೆ ನೆರವೇರಿಸಲಿದ್ದು, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.
ದಿ.ಏಪ್ರಿಲ್ ೧೪ ರಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೫ ನೇ ಜಯಂತಿ ಕಾರ್ಯಕ್ರಮ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆ. ಶಾಸಕ ವಿಠ್ಠಲ್ ಕಟಕದೊಂಡ, ಮಾಜಿ ಶಾಸಕ ರಾಜು ಅಲಗೂರ್, ಮಹಾನಗರ ಪಾಲಿಕೆ ಮಹಾಪೌರರಾದ ಎಂ.ಎಸ್.ಕರಡಿ, ಉಪಮಹಾಪೌರರಾದ ಸುಮಿತ್ರಾ ಜಾಧವ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿವಿಪಿ ಪ್ರಮುಖ ಶ್ರೀನಾಥ್ ಪೂಜಾರಿ, ಹಿರಿಯ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಅಬ್ದುಲ್ ರಜಾಕ್ ಹೊರ್ತಿ, ಎಂ.ಸಿ.ಮುಲ್ಲಾ, ಫಯಾಜ್ ಕಲಾದಗಿ, ಬಾಲಾಜಿ ಕಾಂಬ್ಳೆ, ಮಹದೇವ್ ರಾವಜಿ, ಮಹದೇವ್ ಛಲವಾದಿ ಮತ್ತಿತರರು ಉಪಸ್ಥಿತರಿದ್ದರು.

