ಜಿಪಂನಲ್ಲಿ ಸಿಎಸ್ ಆರ್ ಅನುದಾನದಡಿ ಸಲಕರಣೆ ವಿತರಣೆ | ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಬಣ್ಣನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪವರ್ ಗ್ರೀಡ್ ಸಂಸ್ಥೆ ನಮ್ಮ ದೇಶದಲ್ಲಿರುವ ಹೆಮ್ಮೆಯ ಸಂಸ್ಥೆ, ಈ ಸಂಸ್ಥೆ ಸ್ಪರ್ಧಾತ್ಮಕವಾಗಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲ ಹೇಳಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಪವರ್ಗ್ರಿಡ್ ಕಾರ್ಪೋರೆಷನ್ ಆಫ್ ಇಂಡಿಯಾ ಲಿಮಿಟೆಡ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಿ.ಎಸ್.ಆರ್ ಅನುದಾನದಡಿ ಆರೋಗ್ಯ, ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳಿಗೆ ಸಾಧನ-ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪವರ್ ಗ್ರೀಡ್ ಸಿಎಸ್ಆರ್ ಅನುದಾನದಡಿ ಆರೋಗ್ಯ ಇಲಾಖೆ ಸಲಕರಣೆಗಳು, ಶಿಕ್ಷಣ ಇಲಾಖೆಗೆ ೨೫೦೦ ಮೇಜುಗಳ ವಿತರಣೆ ಸೇರಿದಂತೆ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ವಿದ್ಯುತ್ ವ್ಯವಸ್ಥೆ ಅಳವಡಿಕೆ, ಪ್ರವಾಸೋದ್ಯಮ ಇಲಾಖೆ ಎಸ್ ಸಿಪಿಟಿ, ಎಸ್ಪಿ ಯೋಜನೆಯಡಿ ಆರು ಫಲಾನುಭವಿಗಳಿಗೆ ಮೊಬೈಲ್ ಕ್ಯಾಂಟೀನ್ ವಿತರಿಸಿ ಅವರು ಮಾತನಾಡಿದರು.
ಪವರ್ ಗ್ರೀಡ್ ಸಂಸ್ಥೆ ನೀಡುವ ಸಿಎಸ್ ಆರ್ ಅನುದಾನ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ಕುರಿತು ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಸೂಚಿಸಿದ್ದು, ಅನುದಾನ ಸರಿಯಾಗಿ ಸದ್ಭಳಕೆಗೆ ಹೇಳಿದ್ದಾಗಿ ತಿಳಿಸಿದರು.
ಇದೇ ವೇಳೆ ವಿಜಯಪುರ ಜಿಲ್ಲೆಗೆ ಅನುದಾನ ನೀಡಿದ ಪವರ್ ಗ್ರೀಡ್ ಸಂಸ್ಥೆಯ ಅಧಿಕಾರಿಗಳನ್ನು ಅಭಿನಂದಿಸಿದರು.
ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪವರ್ ಗ್ರೀಡ್ ಸಂಸ್ಥೆಯು ಈ ಜಿಲ್ಲೆಗೆ ಸಿಎಸ್ ಆರ್ ಅನುದಾನ ನೀಡಿದ್ದು ದೊಡ್ಡ ಕೊಡುಗೆಯಾಗಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ನಮ್ಮೊಂದಿಗೆ ಸದಾ ಕೈಜೋಡಿಸುತ್ತಿದೆ. ಇತ್ತೀಚೆಗಷ್ಟೇ ಜಿಂದಾಲ್ ಸಂಸ್ಥೆಯೊಂದಿಗೆ ಸಮಾಲೋಚಿಸಿದ್ದು, ಜಿಲ್ಲೆಯಲ್ಲಿ ೧೦೦ ವರ್ಷ ಪೂರೈಸಿದ ಸುಮಾರು ೨೫೮ ಶತಮಾನದ ಶಾಲೆಗಳ ಅಭಿವೃದ್ದಿಗೆ ಕೈಜೋಡಿಸಲು ಕೋರಿದೆ. ಅನುದಾನ ದೊರಕಿದ ಆ ಅನುದಾನದಿಂದ ಸ್ಮಾರ್ಟ್ ಕ್ಲಾಸ್, ಶಾಲಾ ಕೊಠಡಿ, ದುರಸ್ತಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಲೆಗಳನ್ನು ಉನ್ನತೀಕರಿಸಲಾಗುವುದು ಎಂದು ಅವರು ಹೇಳಿದರು.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಿಇಒ ಅವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸರ್ಕಾರ ಈದಿಸೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಆದಾಗ್ಯೂ ಪವರ್ ಗ್ರೀಡ್ನಂತ ಸಂಘ-ಸಂಸ್ಥೆಗಳ ಹಾಗೂ ದಾನಿಗಳ ಕೊಡುಗೆ ನಮ್ಮಲ್ಲಿ ದೊಡ್ಡದಿದೆ. ಸಿಎಸ್ ಆರ್ ಫಂಡ್ ದೊಡ್ಡದು. ಹೀಗೆ ಸರ್ಕಾರ ಹಾಗೂ ಸಾರ್ವಜನಿಕರು ಒಗ್ಗೂಡಿದಾಗ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಸಹಾಯ ಸಹಕಾರ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಮುಖ್ಯ ಯೋಜನಾಧಿಕಾರಿ ಸಿ.ಬಿ ಕುಂಬಾರ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಪವರ ಗ್ರಿಡ್ನ ಸಿ.ಜಿ.ಎಮ್ ಪ್ರೋಜೆಕ್ಟ ಮ್ಯಾನೇಜರ ಶಕುಂತಲಾ ಸಾಹೂ, ಜಿ.ಎಮ್ ಎಚ್.ಆರ್ ತನ್ವೀರ.ಎಮ್, ಕನ್ಸಲಂಟ ಭೀಮಾಶಂಕರ ತುಗದೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಫಲಾನುಭವಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಪವರ್ ಗ್ರೀಡ್ ಸಂಸ್ಥೆಯ ಸಿಎಸ್ ಆರ್ ಅನುದಾನ
ಪವರ್ ಗ್ರೀಡ್ ಸಂಸ್ಥೆಯು ತನ್ನ ಸಿಎಸ್ ಆರ್ ಅನುದಾನಡಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೆಡಿಕಲ್ ಸಲಕರಣೆ ೧೯.೪ ಲಕ್ಷ ರೂ., ಶಿಕ್ಷಣ ಇಲಾಖೆಯ ೧೪೫ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ೨೫೦೦ ಬೆಂಚ್ ವಿತರಣೆ, ೧.೮೨ ಕೋಟಿ ರೂ. ಅನುದಾನದಡಿ, ಜಿಲ್ಲಾ ಕ್ರೀಡಾಂಗಣಕ್ಕೆ ಸೋಲಾರ್ ರೋಪ್ ಅಳವಡಿಸಲು ೧೯.೪೪ ಲಕ್ಷ ರೂ. ಅನುದಾನ ನೀಡಿದ್ದಾರೆ.ಜಿಲ್ಲಾ ಪಂಚಾಯಿತಿಯಡಿ ವಿಶೇಷಚೇತನರಿಗೆ ೩.೭೦ ಲಕ್ಷ ರೂ.ಗಳ ಸಾಧನ-ಸಲಕರಣೆ ಕೊಡುಗೆ ನೀಡಿದ್ದಾರೆ.
ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ೪೦ ಲಕ್ಷ ರೂ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ನೀಡಿದ್ದನ್ನು ಸಚಿವ ಎಂ.ಬಿ.ಪಾಟೀಲ ಸ್ಮರಿಸಿದರು.

“ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ದೊರಕುವ ನಿಟ್ಟಿನಲ್ಲಿ ತುಂಬಾ ಕೆಲಸಗಳಾಗುತ್ತಿವೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಗ್ರಿಡ್ ಸಂಸ್ಥೆಯಿಂಮದ ಸಿ.ಎಸ್.ಆರ್ ಅನುದಾನದಡಿ ತಿಕೋಟಾ ಹಾಗು ಬಬಲೇಶ್ವರ ಭಾಗದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ವೈದ್ಯಕೀಯ ಸಲಕಣೆ, ನಗರದ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಸೋಲಾರ್ ರೂಪ್ ಟಾಪ್ ಪೆನೆಲ್ಗಳ ಅಳವಡಿಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಿ ಜಿಲ್ಲೆಯ ಸರ್ವೋತ್ತಮ ಬೆಳವಣಿಗೆಗೆ ಸಹಕಾರ ನೀಡುವಂತೆ ಕೋರುವೆ.”
– ಡಾ.ಆನಂದ.ಕೆ
ಜಿಲ್ಲಾಧಿಕಾರಿ, ವಿಜಯಪುರ

“ಜಿಲ್ಲೆಯಲ್ಲಿರುವ ವಿಕಲಚೇತನರಿಗೆ ವಿಕಲಚೇತ ಸಾಧನ ಸಲಕರಣೆಗಳನ್ನು ೨೦೨೫-೨೬ನೇ ಸಾಲಿನ ಜಿಲ್ಲಾ ಪಂಚಾಯತಿಯ ಅನಿರ್ಭಂದಿತ ಅನುದಾನದಡಿ ರೂ.೩೨.೮೭ ಲಕ್ಷ ಮತ್ತು ವಿಕಲಚೇತನರ ಇಲಾಖೆಯ ಅನುದಾನದಡಿ ರೂ.೩.೭೦ ಲಕ್ಷಗಳು ಒಟ್ಟು ಅನುದಾನ ರೂ.೩೬.೫೭ ಲಕ್ಷಗಳ ಮೌಲ್ಯದ ಸಾಧನ ಸಲಕರಣೆಗಳನ್ನು ವಿತರಣೆ ಮಾಡುವುದು ಮತ್ತು ಶಿಕ್ಷಣ ಇಲಾಖೆಯಡಿ ಜಿಲ್ಲೆಯಲ್ಲಿರು ಎಲ್ಲಾ ಗಡಿಭಾಗದ ೨೦ ಸರ್ಕಾರಿ ಪ್ರೌಢಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಪರಿಕರಗಳ ವಿತರಣೆಯನ್ನು ೨೦೨೫-೨೬ನೇ ಸಾಲಿನ ಜಿಲ್ಲಾ ಶೀರ್ಷಿಕೆ:೨೨೦೨ ರಡಿ ರೂ.೪೦.೦೦ ಲಕ್ಷ ಪಂಚಾಯತಿಯ ಅನುದಾನದಲ್ಲಿ ನೀಡುತ್ತಿದೆ ಹಾಗೂ ಪ್ರವಾಸೋದ್ಯಮ ಇಲಾಖೆಯಡಿ ೨೦೨೪-೨೫ನೇ ಸಾಲಿನ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿಯಲ್ಲಿ ಒಟ್ಟು ರೂ.೩೦.೦೦ ಲಕ್ಷಗಳ ಸಹಾಯದನದೊಂದಿಗೆ ೬-ಮೊಬೈಲ್ ಕ್ಯಾಂಟೀನ್ ವಾಹನ ವಿತರಣೆಯನ್ನು ಮಾಡಲಾಗುತ್ತಿದೆ.”
– ರಿಷಿ ಆನಂದ
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿಜಯಪುರ
" ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಅಲ್ಲಿಯ ಮಕ್ಕಳಿಗಾಗಿ ಶಿಕ್ಷಣ ಆರೋಗ್ಯ ಹಾಗೂ ಇತರೆ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರೊಂದಿಗೆ ಸಾಮಾಜಿಕ ಕಾರ್ಯಗಳನ್ನು ಏರ್ಪಡಿಸಿ ಜಿಲ್ಲೆಯ ಅಭಿವೃದ್ಧಿಗಾಗಿ ಸದಾ ಈ ಸಂಸ್ಥೆಯು ಎಂದೆಂದಿಗೂ ಕೈಜೋಡಿಸಲಿದೆ."– ಮುಕುಂದ ಶರದ್
ಪವರ್ಗ್ರೀಡ್ನ ಕಾರ್ಯನಿರ್ವಾಹಕ ನಿರ್ದೇಶಕರು

