ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಎ.ಕೆ.ನಂದಿ ಕಾಲೇಜಿನಲ್ಲಿ ಆಲಮೇಲ ತಾಲ್ಲೂಕಿನ 2027ರ ಮೊದಲ ಹಂತದ ಜನಗಣತಿ ಕಾರ್ಯದ ಮೇಲ್ವಿಚಾರಕರರಿಗೆ ಹಾಗೂ ಗಣತಿದಾರರಿಗೆ 3 ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು.
ಈ ವೇಳೆ ತರಬೇತಿ ಕೇಂದ್ರವನ್ನು ಭೇಟಿ ನೀಡಿ ಮಾತನಾಡಿದ ತಹಶಿಲ್ದಾರರರು ಎಮ್.ಅರಕೇರಿ ರವರು ದೇಶದ ಮಹತ್ವಾಕಾಂಕ್ಷೆ ಜನಗಣತಿ 2027 ರ ಮೊದಲ ಹಂತದ ಸಮೀಕ್ಷೆ ಎಪ್ರಿಲ್ 16 ರಿಂದ ಜನಗಣತಿ ಮನೆಗಳ ಭೌತಿಕ ಸ್ಥಿತಿಗತಿಗಳನ್ನು 33 ಸರಳ ಪ್ರಶ್ನೆಗಳೊಂದಿಗೆ ಇದೆ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಮನೆ ಮನೆಗೆ ತೆರಳಿ ಗಣತಿ ಕಾರ್ಯ ಪ್ರಾರಂಭಗೊಳ್ಳಲಿದೆ. ಈ ಮಹತ್ವದ ಕಾರ್ಯದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಬರುವ ಹತ್ತು ವರ್ಷಗಳಿಗೆ ಸರಕಾರದ ನೀತಿ ಆಯೋಗಗಳಿಗೆ, ವಿವಿಧ ಯೋಜನೆಗಳಿಗೆ ಮತ್ತು ದೇಶದ ಪ್ರಜೆಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಸರಿಯಾದ ಅಂಕಿ ಅಂಶಗಳನ್ನು ನೀಡಬೇಕು ಎಂದು ತಿಳಿಸಿದರು.
ಜನಗಣತಿ ಸಮೀಕ್ಷೆಗೆ ನಿಯುಕ್ತಿ ಆದ ಸಿಬ್ಬಂದಿ ಯಾರಾದರೂ ತರಬೇತಿಗೆ ಗೈರು ಉಳಿದರೆ ಅಂತಹವರ ವಿರುದ್ಧ ಕ್ರಮ ಕೈಗೊಂಡು ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು
ಈ ವೇಳೆ ಉಪ ತಹಶಿಲ್ದಾರ ಪುಲಕೇಶಿ ಮೂಕಿಹಾಳ, ತಹಶಿಲ್ದಾರ ಕಚೇರಿಯ ನಂದೀಶ ದಶವಂತ, ವಿನೋದ ಭಿಸ್ಸೆ, ಆಲಮೇಲ ತಾಲ್ಲೂಕಿನ ಸರಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಬಿರಾದಾರ, ಕ್ಷೇತ್ರ ತರಬೇತುದಾರ ಲಕ್ಷ್ಮೀಪುತ್ರ ಕಿರನಳ್ಳಿ ಸೋಮನಾಥ ಗಣಿ, ನಾಗರಾಜ ನಿಂಬರಗಿ, ಆರೀಫ ಮೇಲಿನಮನಿ, ಶಿಕ್ಷಣ ಸಂಯೋಜಕ ಎಮ್.ಪಿ.ಭಿಸ್ಸೆ ಮುಂತಾದವರು ಇದ್ದರು.

