ನಾಡಿನ ಕಾರ್ಯನಿರತ ಪತ್ರಕರ್ತರ ಭರವಸೆಯ ಬೆಳಕು KUWJ | ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಕರೆ
ಉದಯರಶ್ಮಿ ದಿನಪತ್ರಿಕೆ
ಶತಮಾನೋತ್ಸವದ ಕಡೆಗೆ ಚಲಿಸುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಲವತ್ತನೆ ರಾಜ್ಯಸಮ್ಮೇಳನ ಈ ಬಾರಿ ಮಹಾಮಾನವತಾವಾದಿ, ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನ ಶರಣಭೂಮಿ ಬೀದರ್ ನಲ್ಲಿ ಏಪ್ರಿಲ್ 11 &12 ರಂದು ನಡೆಯುತ್ತಿದೆ.
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಮೊದಲ ದೇಣಿಗೆಯಿಂದ ಡಿ.ವಿ.ಗುಂಡಪ್ಪ (ಡಿವಿಜಿ) ಅವರಿಂದ ಸ್ಥಾಪಿತಗೊಂಡ ಮೈಸೂರು ಪತ್ರಕರ್ತರ ಸಂಘವು 1956ರಲ್ಲಿ ಏಕೀಕರಣದ ಬಳಿಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂದಾಗಿ ಕಾರ್ಯನಿರತ ಪತ್ರಕರ್ತರ ಹಿತರಕ್ಷಣೆ ಮತ್ತು ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.
ಸಂಘ ನಡೆದು ಬಂದ ಹಾದಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಆದರೆ ಕಳೆದ 10 ವರ್ಷಗಳಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತನ್ನ ಮೂಲ ಉದ್ದೇಶವನ್ನು ಈಡೇರಿಸಿಕೊಳ್ಳುವ ಹೆಜ್ಜೆಗಳಿಗೆ ಶಕ್ತಿ ಸಂಚಯವನ್ನು ಮಾಡಿಕೊಂಡಿದೆ.
ಸಂಘವು ರಚನಾತ್ಮಕ ಮತ್ತು ಕ್ರೀಯಾತ್ಮಕವಾಗಿ ತನ್ನ ಸಂಘಟನಾ ಚಟುವಟಿಕೆಗಳನ್ನು ನಡೆಸುವ ಮೂಲಕ ಪತ್ರಕರ್ತರ ವೃತ್ತಿಪರ ಸಮಸ್ಯೆಗಳು, ಮತ್ತು ಅವರ ಕುಟುಂಬದ ಸಂಕಷ್ಟಗಳಿಗೆ ಆಪತ್ಕಾಲದ ಆಸರೆ ಆಗಿದೆ.
ಮತ್ತು ಕಾರ್ಯನಿರತ ಪತ್ರಕರ್ತರಿಗೆ ಒಂದು ಭರವಸೆಯಂತೆ ಬೆಳೆಯತೊಡಗಿದೆ.
ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನಗಳನ್ನು ನಡೆಸುವ ಮೂಲಕ ಪತ್ರಕರ್ತರ ಸಮಸ್ಯೆಗಳನ್ನು, ವೃತ್ತಿಪರ ಸವಾಲುಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳುವುದಲ್ಲದೆ. ವೃತ್ತಿಕೌಶಲ್ಯದ ಉನ್ನತೀಕರಣಕ್ಕಾಗಿ ಅನೇಕ ಕಾರ್ಯಕ್ರಮ , ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ವರ್ಷ ಪೂರ್ತಿ ಕೆಯುಡಬ್ಲ್ಯೂಜೆ ಅಂಗಳದಲ್ಲಿ ನಡೆಯುವ ಕಾರ್ಯಕ್ರಮಗಳೇ ಸಾಕ್ಷಿ.
ಕೋವಿಡ್ ಕಾಲದಲ್ಲಿ ಪತ್ರಕರ್ತರಿಗೆ ಮತ್ತು ಅವರ ಕುಟುಂಬಕ್ಕೆ ಕೆಯುಡಬ್ಲ್ಯೂಜೆ ದೊಡ್ಡ ಆಸರೆಯಾಗಿ ನಿಂತು ಸಂಘಟನಾತ್ಮಕ ಹೊಣೆಗಾರಿಕೆಯನ್ನು ನಿಭಾಯಿಸಿದ ತೃಪ್ತಿ ನನ್ನದಾಗಿದೆ.
ಬಸ್ ಪಾಸ್, ಪಿಂಚಣಿ, ಪತ್ರಿಕಾ ಭವನಗಳು, ಪತ್ರಕರ್ತರಿಗೆ ನಿವೇಶನ, ಆರೋಗ್ಯವಿಮೆ.. ಇಂತಹ ಮೂಲಭೂತ ಸೌಲಭ್ಯಗಳಿಗಾಗಿ ಸರ್ಕಾರದ ಗಮನಸೆಳೆದು ಸಾಧಿಸಿಕೊಳ್ಳುವಲ್ಲಿ ಸಂಘದ ಬದ್ದತೆ ಪ್ರಶ್ನಾತೀತ.
ಬದ್ದತೆ ಮತ್ತು ಹೊಣೆಗಾರಿಕೆಯ ಎಚ್ಚರ ವಿದ್ದಾಗ ಮಾತ್ರ ಎಲ್ಲವೂ ಸಾಧ್ಯ ಎಂಬುದಕ್ಕೆ ಕೆಯುಡಬ್ಲ್ಯೂಜೆ ದಿನದಿಂದ ದಿನಕ್ಕೆ ತನ್ನ ಸಂಘಟನಾ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದೇ ನಿದರ್ಶನ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಚುನಾವಣೆ ಪ್ರಕ್ರಿಯೆಯಲ್ಲಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಘಟಕಗಳು ಆಯ್ಕೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ ಮತ್ತು ಇದು ಸಂಘದ ಆಂತರಿಕ ಶಕ್ತಿ.
ದಶಕಗಳ ಹಿಂದೆ ಪ್ರತಿವರ್ಷ ಒಂದು ದಿನಕ್ಕೆ ಸೀಮಿತವಾಗಿ ನಡೆಯುತ್ತಿದ್ದ ಪತ್ರಕರ್ತರ ರಾಜ್ಯಸಮ್ಮೇಳನಗಳು ಕಳೆದ 10 ವರ್ಷಗಳಿಂದ ಎರಡು ದಿನಗಳ ಕಾಲ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಯುತ್ತಾ ಬಂದಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಸಮ್ಮೇಳನಗಳು ಆಯಾ ಜಿಲ್ಲೆಯ ಪ್ರಗತಿ, ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಸಮ್ಮೇಳನದ್ದಾಗಿರುತ್ತದೆ.
ರಾಜ್ಯದಲ್ಲಿ 31 ಜಿಲ್ಲೆಗಳನ್ನು ಒಳಗೊಂಡು ಸುಮಾರು 10 ಸಾವಿರ ಕಾರ್ಯನಿರತ ಪತ್ರಕರ್ತರ ಸದಸ್ಯತ್ವ ಹೊಂದಿರುವ ಕೆಯುಡಬ್ಲ್ಯೂಜೆ ರಾಜ್ಯದಲ್ಲೆ ಸರ್ಕಾರದ ಮಾನ್ಯತೆ ಪಡೆದ ಏಕೈಕ ಬೃಹತ್ ಪತ್ರಕರ್ತರ ಸಂಘಟನೆಯಾಗಿದೆ.
ಸರ್ಕಾರ ಮತ್ತು ಕಾರ್ಯನಿರತ ಪತ್ರಕರ್ತರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿರುವ ಸಂಘ ಯಾವುದೇ ಸಂಘಟನೆಗೆ ಮಾದರಿಯಾಗಲಿದೆ ಎಂಬುದರಲ್ಲಿ ಅತಿಶಯೋಕ್ತಿಯೇನಿಲ್ಲ.
ಇದೀಗ ಬೀದರ್ ನಲ್ಲಿ 40ನೇ ರಾಜ್ಯಸಮ್ಮೇಳನ ಕ್ಕೆ ಕ್ಷಣ ಗಣನೆ ಆರಂಭವಾಗಿದೆ.
ಏ.11ಮತ್ತು 12 ರಂದು ನಡೆಯಲಿರುವ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಸೇರಿದಂತೆ ಅನೇಕ ಗಣ್ಯರು, ಹಿರಿಯ ಪತ್ರಕರ್ತರು ಸಮ್ಮೇಳನದ ಸೊಬಗು ಹೆಚ್ಚಿಸಲಿದ್ದಾರೆ.
ಪತ್ರಿಕೋದ್ಯಮದ, ಪತ್ರಕರ್ತರ ಕುರಿತಾದ ಗುಣಾತ್ಮಕ ವಿಚಾರಸಂಕಿರಣಗಳು, ಸಮಾಲೋಚನೆಗಳು ಸಮ್ಮೇಳನದ ಭಾಗವಾಗಿವೆ. ಕೆಯುಡಬ್ಲ್ಯೂಜೆ ಕೇವಲ ಸಂಘಟನೆಯಲ್ಲ. ಅದೊಂದು ಭರವಸೆ.
ಸುದ್ದಿ ಮನೆಯ ಪತ್ರಕರ್ತರೆಲ್ಲರೂ ಬಸವನ ನಾಡಿಗೆ ಬನ್ನಿ.. ಯಶಸ್ಸಿಗೆ ಕೈ ಜೋಡಿಸಿ.

– ಶಿವಾನಂದ ತಗಡೂರು
ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು (ಕೆಯುಡಬ್ಲ್ಯೂಜೆ)

