ಚಡಚಣದಲ್ಲಿ ನಡೆದ ಟಾಸ್ಕಫೊರ್ಸ್ ಸಭೆಯಲ್ಲಿ ಶಾಸಕ ವಿಠ್ಠಲ ಕಟಕಧೋಂಡ ಅಧಿಕಾರಿಗಳಿಗೆ ಖಡಕ್ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನಲ್ಲಿ ಬೇಸಿಗೆ ವೇಳೆ ರೈತರು, ಜನಸಾಮಾನ್ಯರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವಿಠ್ಠಲ ಕಟಕಧೋಂಡ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಟಾಸ್ಕಫೊರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಕಟಕಧೋಂಡ ಅವರು, ಮುಂದಿನ ಎರಡು ತಿಂಗಳು ಕಡುಬೇಸಿಗೆ ಸಮಯವಾದ್ದರಿಂದ ಕಾಲುವೆಗಳಿಗೆ ಬಿಟ್ಟ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ರೈತರಿಗೆ ಮನವಿ ಮಾಡಿಕೊಂಡರು.
ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರ ಮನೋಜ ಕಡಬಳ್ಳಿ ಮಾತನಾಡಿ, ತಾಲೂಕಿನ ಎಲ್ಲ ಅಧಿಕಾರಿಗಳು ನಮ್ಮ ಕೆಬಿಜೆಎನ್ಎಲ್ಗೆ ಸಹಕಾರಕೊಟ್ಟು ಎಲ್ಲರು ಕೂಡಿ ಕೆಲಸ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ, ಚಡಚಣ ಭಾಗದ ಹಾವಿನಾಳ ಹಾಗೂ ಹತ್ತಳ್ಳಿ ಭಾಗದ ಕಾಲುವೆಗಳವರೆಗೆ ಮಾತ್ರ ನೀರು ಹರಿಸಲು ಸಾಧ್ಯವಾಗುತ್ತದೆ ಆದ್ದರಿಂದ ಸಹಕಾರ ನೀಡುವಂತೆ ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಡಿಎಸ್ಪಿ ಸದಾಶಿವ ಕಟ್ಟಿಮನಿ ಮಾತನಾಡಿ ನಮ್ಮ ಪೋಲಿಸ್ ಇಲಾಖೆಯ ಸಹಕಾರ ತಮ್ಮೊಂದಿಗೆ ಇರಲಿದೆ ಎಂದು ಹೇಳಿದರು.
ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ನಮ್ಮ ಸಹಕಾರ ಈ ಮೊದಲು ಕೊಟ್ಟಿದ್ದೆೇವೆ ಈಗಲೂ ಇದೆ ಎಂದು ಹೇಳಿದರು.
ಸಭೆಯಲ್ಲಿ ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಅಶೋಕಕುಮಾರ ರಾಠೋಡ, ಪ.ಪಂ. ಮುಖ್ಯಾಧಿಕಾರಿ ಬಿ.ಕೆ. ತಾವಸೆ, ಚಡಚಣ ಸಿಪಿಐ ಪರಶುರಾಮ ಮನಗೂಳಿ, ಪಿಎಸ್ಐ ಸೊಮೇಶ ಗೆಜ್ಜಿ, ಚಡಚಣ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ, ಶಿವದತ್ತ ಕೊಟ್ಟಲಗಿ, ಆಹಾರ ನಿರೀಕ್ಷಕ ಶಿವಾನಂದ ಕೋಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.
ಅಚ್ಚರಿ ಮೂಡಿಸಿದ ಟಾಸ್ಕಫೊರ್ಸ್ ಸಮಿತಿ ಸಭೆ
ಹೌದು, ಒಂದೆ ವಾರದಲ್ಲಿ ಎರಡನೆಯ ಟಾಸ್ಕಫೊರ್ಸ್ ಸಮಿತಿ ಸಭೆ ಇದಾಗಿದ್ದು ಎಲ್ಲರಲ್ಲಿ ಕೂತುಹಲ ಮೂಡಿಸುತ್ತಿದೆ.
ಕಾಲುವೆ ನೀರು ಕೊನೆಯ ಗ್ರಾಮವಾದ ದಸೂರ ಅವರೆಗೆ ಹೊಗದಿದ್ದರೂ ಸರಿ, ಹತ್ತಳ್ಳಿ ಬ್ಯಾರೇಜವರೆಗಾದರೂ ಕಾಲುವೆ ನೀರು ಹರಿಸಲೇಬೇಕೆಂಬ ನಿರ್ಧಾರ ತೆಗೆದುಕೊಂಡ ಶಾಸಕರ ಈ ನಡೆ ತಾಲೂಕಿನಾದ್ಯಂತ ರೈತರು ಹಾಗೂ ಜನಸಾಮಾನ್ಯರಲ್ಲಿ ಕೂತುಹಲ ಮತ್ತು ಅಚ್ಚರಿ ಮೂಡಿಸಿದೆ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಕಾಲುವೆಗೆ ನೀರು ಹರಿಸುವ ಜವಾಬ್ದಾರಿಯಾಗಿದ್ದು, ಕೆಬಿಜೆಎನ್ಎಲ್ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಲುವೆಗೆ ನೀರು ಹರಿಯುತ್ತಿಲ್ಲ ಎಂಬುದು ಸ್ಪಷ್ಟವಾಗಿ ತೋರುತ್ತಿದೆ. ಕೆಬಿಜೆಎನ್ಎಲ್ ಇಲಾಖೆಯ ಅಧಿಕಾರಿಗಳು ತಮ್ಮ ತಪ್ಪನ್ನು ತಾಲೂಕಿನ ಇನ್ನಿತರ ಇಲಾಖಾಧಿಕಾರಿಗಳ ಮೇಲೆ ಹಾಕಿ ಕೈ ಕಟ್ಟಿ ಕುಳಿತಿರುವುದಂತೂ ಅವರ ಮಾತಿನಿಂದಲೆ ತಿಳಿಯುತ್ತಿದೆ. ನಮ್ಮ ಏಳು ಜನ ಕೆಬಿಜೆಎನ್ಎಲ್ ಅಧಿಕಾರಿಗಳು ನಿಮ್ಮೊಂದಿಗೆ ಬರುತ್ತಾರೆ, ಪೋಲಿಸ್ ಹಾಗೂ ಕಂದಾಯ ಇಲಾಖೆಯವರು ಮುಂದಾಳತ್ವ ವಹಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿದೆ.
ಇನ್ನು ಕಾಲುವೆ ನೀರು ಹತ್ತಳ್ಳಿ ಬ್ಯಾರೇಜವರೆಗಾದರು ಬಂದು ತಲುಪುತ್ತವೆ ಎಂಬುದು ಕಾದು ನೋಡಬೇಕಾಗಿದೆ ಎಂದು ರೈತರು ಹಾದಿ ಕಾಯುತ್ತಿರುವದಂತೂ ಸತ್ಯ.

