ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ವಿಶ್ವ ಆರೋಗ್ಯ ದಿನದ ಉದ್ದೇಶ ಜನರಿಗೆ ಕಾಲಕ್ಕೆ ಅನುಗುಣವಾಗಿ ಆರೋಗ್ಯದ ಮಾಹಿತಿಯನ್ನು ನೀಡುವುದು, ಮತ್ತು ಜನರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಗೋಪಿನಾಥ್ ತಿಳಿಸಿದರು.
ಹಾರ್ಟ್ ಸಂಸ್ಥೆ ಮೈಸೂರು ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನದ ಕುರಿತು ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಮತ್ತು ತಾಲೂಕು ನೋಡಲ್ ಅಧಿಕಾರಿ ಡಾ. ಬೃಂದಾ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಜ್ಞಾನದ ಸಹಕಾರವನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ವಿಶ್ವ ಸಂಸ್ಥೆ ಒಂದೊಂದು ಘೋಷವಾಕ್ಯವನ್ನು ಇಟ್ಟುಕೊಂಡು ಆಚರಣೆ ಮಾಡಲಾಗುತ್ತದೆ. ಇವಾಗ ನಾವು ಬೇಸಿಗೆ ಕಾಲದಲ್ಲಿ ಇದ್ದೇವೆ. ಈ ಸಮಯದಲ್ಲಿ ತುಂಬಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದರ ಬಗ್ಗೆ ಸದಾ ಜಾಗೃತಿಯಿಂದ ಇರಬೇಕು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವನ ಶೈಲಿಯಲ್ಲಿ ಬದಲಾವಣೆ ಕಂಡು ಬಂದಿದ್ದು, ತಿನ್ನುವ ಆಹಾರ, ತೊಡುವ ಬಟ್ಟೆ ಎಲ್ಲವು ಬದಲಾವಣೆಯಾಗಿದೆ. ಈ ವರ್ಷದ ಘೋಷವಾಕ್ಯ ಆರೋಗ್ಯಕ್ಕಾಗಿ ಒಟ್ಟಾಗಿ ವಿಜ್ಞಾನದೊಂದಿಗೆ ನಿಲ್ಲು ಎಂಬ ಸಂದೇಶದೊಂದಿಗೆ ಗ್ರಾಮೀಣ ಭಾಗದಲ್ಲಿ ಜೀವನ ಶೈಲಿಯಲ್ಲಿ ಬದಲಾವಣೆ ತರಲು ಮಾಹಿತಿಯನ್ನು ನೀಡಿ ಸಮುದಾಯದಲ್ಲಿ ಜಾಗೃತಿಗೊಳಿಸಲು ನಮ್ಮ ಆರೋಗ್ಯ ಇಲಾಖೆ ಸದಾ ಕಾರ್ಯಾನ್ಮುಖರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಶರತ್ ಹೆಚ್.ಎಸ್., ಡಾ.ಚಂದ್ರಕಲಾ, ಡಾ. ಹರ್ಷ, ಡಾ. ಕೀರ್ತಿ, ಡಾ. ಮನೋಹರ್, ಡಾ.ಪಾರ್ಥಸಾರಥಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಆಶಾ ಕಾರ್ಯಕರ್ತೆಯರು , ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಇದ್ದರು.

