ಉದಯರಶ್ಮಿ ದಿನಪತ್ರಿಕೆ
ಇಂಡಿ: ಕೇಂದ್ರದಲ್ಲಿ ಕೃಷಿ ಸಚಿವರಾಗಿ ಹಸಿರು ಕ್ರಾಂತಿಯನ್ನು ಯಶಸ್ವಿಗೊಳಿಸುವ ಮೂಲಕ ಆಹಾರ ಭದ್ರತೆಗೆ ಬುನಾದಿ ಹಾಕಿದವರು ಬಾಬು ಜಗಜೀವನರಾಮ ಎಂದು ಶ್ರೀ ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸತ್ಯಣ್ಣ ಹಡಪದ ಹೇಳಿದರು.
ನಗರದ ಬಾಬು ಜಗಜೀವನರಾಮ ಸಬಾಭವನದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬಾಬು ಜಗಜೀವನರಾಮರವರ ೧೧೯ ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಮಾನಸದಲ್ಲಿ ಬಾಬೂಜಿ ಎಂದೇ ಜನಪ್ರಿಯರಾಗಿರುವ ಬಾಬು ಜಗಜೀವನರಾಮ ಅವರು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ನ್ಯಾಯದ ಹರಿಕಾರ. ದೇಶದ ಅತ್ಯುನ್ನತ ಸಂಸದೀಯ ಪಟುಗಳಲ್ಲಿ ಒಬ್ಬರಾಗಿದ್ದರು. ದಲಿತ ಮತ್ತು ಶೋಷಿತ ವರ್ಗಗಳ ಏಳಿಗೆಗಾಗಿ ತಮ್ಮ ಇಡಿ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದರು.
ಮುಖಂಡ ಸುರೇಶ ನಡಗಡ್ಡಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಶರಣಪ್ಪ ಚಾಳಿಕಾರ ಮಾತನಾಡಿದರು.
ವೇದಿಕೆಯ ಮೇಲೆ ನಗರಸಭೆ ಆಯುಕ್ತ ಶಿವಾನಂದ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಯಿದಾ ಮುಜಾವರ, ತಾಪಂ ಯೋಜನಾಧಿಕಾರಿ ಪ್ರಕಾಶ ರಾಠೋಡ, ಶಿವು ಕಟ್ಟಿಮನಿ, ರವೀಂದ್ರ ನಾರಾಯಣಕರ, ಚಂದ್ರಶೇಖರ ಹೊಸಮನಿ , ಶಿವು ಬಗಲಿ, ಅಯೂಬ ನಾಟಿಕಾರ, ನಾಗೇಂದ್ರ ಮೇತ್ರಿ, ಮಲ್ಲು ಮಡ್ಡಿಮನಿ, ಪರಶುರಾಮ ಬಾವಿಕಟ್ಟಿ ಮತ್ತಿತರಿದ್ದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ೬೨೫ ಕ್ಕೆ ೬೨೫ ಅಂಕ ಪಡೆದ ರಕ್ಷಿತಾ ಕೊಡಹೊನ್ನ, ಕಿರಣ ಪವಾರ ಮತ್ತು ತನು ಚವ್ಹಾಣ ಇವರನ್ನು ಸನ್ಮಾನಿಸಲಾಯಿತು.

