ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹ್ಮದ್ ಆಶಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ ೬ ವರ್ಷದ ಮಕ್ಕಳ ಸಮಗ್ರ ಸಮೀಕ್ಷೆ ನಡೆಸುವಂತೆ ಸಿಇಓ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಹೇಳಿದರು.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿರುವ ೬ ವರ್ಷದ ಮಕ್ಕಳ ಸಂಖ್ಯೆ ಇದೆ, ಆದರೆ ಶಾಲೆಯಿಂದ ಅನೇಕ ಮಕ್ಕಳು ಹೊರಗುಳಿದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ರಾಜ್ಯದಲ್ಲಿರುವ ಆರು ವರ್ಷದ ಮಕ್ಕಳ ಸಂಖ್ಯೆ ದತ್ತಾಂಶಗಳ ಸಂಗ್ರಹಣೆಯೇ ಇಲ್ಲ, ಕಳೆದ ಒಂದು ವರ್ಷದಿಂದ ಈ ನಿಖರವಾದ ದತ್ತಾಂಶ ಸಂಗ್ರಹಣೆ ಪ್ರಯತ್ನ ನಡೆಸಲಾಗುತ್ತಿದೆ, ೧೦೦ ಮಕ್ಕಳು ೬ ವರ್ಷದವರು ಇದ್ದರೆ ಅದರಲ್ಲಿ ಶಾಲೆಗೆ ಸೇರಿದ ಮಕ್ಕಳ ಸಂಖ್ಯೆ ೮೦ ಇರಬಹುದು, ಶಾಲೆಯಲ್ಲಿರುವ ಮಕ್ಕಳು ಹೊರತುಪಡಿಸಿ ೬ ವರ್ಷದ ಮಕ್ಕಳ ಸಂಖ್ಯೆ ಇಲ್ಲಿಯವರೆಗೂ ಲಭ್ಯವಾಗಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಕೂಡಲೇ ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮನ್ವಯ ಸಭೆ ನಡೆಸಿ ಈ ನಿಖರವಾದ ದತ್ತಾಂಶ ಸಂಗ್ರಹಣೆಗೆ ಅಗತ್ಯ ಕಾರ್ಯಯೋಜನೆ ರೂಪಿಸಿ ಎಂದು ಹೇಳಲಾಗಿದ್ದು, ಜಿಲ್ಲೆಯಲ್ಲಿ ೩ ತಿಂಗಳಲ್ಲಿ ಈ ದತ್ತಾಂಶ ಸಂಗ್ರಹಣೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದು ಒಂದು ರೀತಿ ಪೈಲಟ್ ಪ್ರಾಜೆಕ್ಟ್ ರೀತಿಯಲ್ಲಿ ಈ ದತ್ತಾಂಶ ಸಂಗ್ರಹಣೆಯ ಕಾರ್ಯ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಿಇಓ ರಿಷಿ ಆನಂದ, ಅಲ್ಪಸಂಖ್ಯಾತ ಇಲಾಖೆಯ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಎಪ್ಲಾಯಿಮೆಂಟ್ ಪ್ಲಾಟ್ಫಾರ್ಮ್
ಉದ್ಯೋಗ ಕಲ್ಪಿಸುವ ಕಾರ್ಯಕ್ಕೂ ಆಯೋಗ ವಿಶೇಷ ಮುತವರ್ಜಿ ಹಾಗೂ ಈ ನಿಟ್ಟಿನಲ್ಲಿ ವಿಶೇಷ ಹೆಜ್ಜೆ ಇರಿಸಿದೆ, ಅಲ್ಪಸಂಖ್ಯಾತ ಆಯೋಗ ಉದ್ಯೋಗ ಮೇಳವನ್ನು ಪ್ರಥಮ ಬಾರಿಗೆ ಆಯೋಜಿಸಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಹೇಳಿದರು.
ಬೆಂಗಳೂರಿನಲ್ಲಿ ವಿಶ್ವವಿದ್ಯಾಲಯವೊಂದರ ಸಹಯೋಗದಲ್ಲಿ ೨೦೦ ಕ್ಕೂ ಹೆಚ್ಚು ಕಂಪನಿಗಳನ್ನು ಆಹ್ವಾನಿಸಲಾಗಿದ್ದು, ಸಾವಿರಾರು ಉದ್ಯೋಗಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಆದೇಶ ಪತ್ರ ಒದಗಿಸುವ ಕೆಲಸ ಮಾಡಲಾಗಿದ್ದು, ಉದ್ಯೋಗ ಮಾಹಿತಿ ಒದಗಿಸುವ ಎಂಪ್ಲಾಯಿಮೆಂಟ್ ಪ್ಲಾಟ್ಫಾರ್ಮ್ ರೂಪಿಸುವ ಕೆಲಸ ಮಾಡಲಾಗಿದೆ ಎಂದರು.

