ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಅಮಾಯಕ ಸರಾಫ ವರ್ತಕರಿಗೆ ಇತ್ತೀಚಿನ ದಿನಗಳಲ್ಲಿ ಪೊಲೀಸರ ಕಿರುಕುಳ ಹೆಚ್ಚಾಗಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಸರಾಫ್ ವರ್ತಕರ ಸಂಘದ ಸದಸ್ಯರು ಚಡಚಣ ಉಪತಹಶೀಲದಾರ ಹುಸನಪ್ಪ ಹೊಸಮನಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಸೋಮಶೇಖರ ಕಂಬಾರ ಮಾತನಾಡಿ, ಪಟ್ಟಣವು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇದ್ದು, ಆ ರಾಜ್ಯದ ಕಳ್ಳರು ಯಾವುದೋ ಸ್ಥಳದಲ್ಲಿ ಬಂಗಾರವನ್ನು ಕಳವು ಮಾಡಿ ಅದನ್ನು ಎಲ್ಲಿ ಮಾರಾಟ ಮಾಡಿರುತ್ತಾರೆ ಎಂಬುದು ನಮಗೆ ಗೊತ್ತಿರುವದಿಲ್ಲ. ಆದರೆ, ಯಾವುದೇ ಪೊಲೀಸರು ಕಳ್ಳರೊಂದಿಗೆ ಏಕಾ ಏಕಿ ಬಂದು ಕಳ್ಳರು ತೋರಿಸಿದ ಅಂಗಡಿಗೆ ನುಗ್ಗಿ ಅಂಗಡಿ ಮಾಲಿಕರನ್ನು ದರೋಡೆಕೋರರ ತರಹ ನೀನು ಅಂಗಡಿಯನ್ನು ಬಂದ ಮಾಡಿ ನಮ್ಮ ಜೊತೆ ಠಾಣೆಗೆ ಬಾ ಎಂದು ಕಳ್ಳನ ಜೊತೆಗೆ ಅಪರಾಧಿ ತರಹ ಅವರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿ, ಪೊಲೀಸ್ ಠಾಣೆಯಲ್ಲಿ ಕಳ್ಳನು ಎಷ್ಟು ಬಂಗಾರ ಹೇಳುತ್ತಾನೋ ಅಷ್ಟನ್ನು ಸರಾಫ ವರ್ತಕರಿಗೆ ಬಲವಂತವಾಗಿ ಒಪ್ಪಿಸಿ ಅಷ್ಟು ಬಂಗಾರವನ್ನು ತೆಗದುಕೊಳ್ಳುತ್ತಾರೆ. ಇದಕ್ಕೆ ಯಾವುದೇ ರೀತಿಯ ಎಫ್.ಐ.ಆರ್. ಅಥವಾ ಪ್ರಕರಣ ದಾಖಲಿಸಿದ ಪುರಾವೆಗಳನ್ನು ಸಹ ನೀಡುವದಿಲ್ಲ. ಹೀಗೆ ಬಲವಂತವಾಗಿ ಅಮಾಯಕ ಸರಾಫ್ ವರ್ತಕರಿಂದ ಕಾನೂನು ಬಾಹೀರವಾಗಿ ಬಂಗಾರವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಾಲೂಕಿನಾದ್ಯಂತ ಸರಾಫ (ಬಂಗಾರ) ವರ್ತಕರು ಭಯದ ವಾತಾರವರಣದಲ್ಲಿ ಬದುಕುವ ಪರಿಸ್ಥತಿ ನಿರ್ಮಾಣವಾಗಿದೆ.
ಪ.ಪಂ. ಸದಸ್ಯ ಚೇತನ ನಿರಾಳೆ ಮಾತನಾಡಿ, ಪೊಲೀಸರು ಅಮಾಯಕ ಸರಾಫ ವರ್ತಕರ ಮೇಲೆ ಈ ರೀತಿ ದೌರ್ಜನ್ಯವೆಸಗುತ್ತಿರುವದು ಖಂಡನೀಯ. ಯಾರೋ ಕಳ್ಳರು ಹೇಳಿದ ಮಾತನ್ನು ನಂಬಿ ಯಾವುದೇ ತನಿಖೆ ಮಾಡದೇ ಏಕಾ ಏಕಿ ಅಂಗಡಿಗೆ ಬಂದು ಸರಾಫ ವರ್ತಕರನ್ನು ಘೋಷಿತ ಆರೋಪಿಗಳ ತರಹ ಪೊಲಿಸ್ ಠಾಣೆಗೆ ಕರೆದುಕೊಂಡು ಹೋಗಿ ಬಂಗಾರ ವಸೂಲಿ ಮಾಡುತ್ತಿದ್ದಾರೆ. ಇಂತಹ ದೌರ್ಜನ್ಯವನ್ನು ನಾವು ಇಲ್ಲಿಯವರೆಗೆ ಸಹನೆಯಿಂದ ಸಹಿಸಿಕೊಂಡಿದ್ದೇವೆ. ಆದರೆ ನಮ್ಮ ಸಹನೆಯ ಕಟ್ಟೆ ಒಡೆದಿದ್ದು, ಇನ್ನು ಮುಂದೆ ನಾವು ಯಾವುದೇ ರೀತಿಯ ದೌರ್ಜನ್ಯವನ್ನು ಸಹಿಸಿಕೊಳ್ಳಲ್ಲ ಎಂದ ಅವರು, ಪೊಲೀಸರು ಇಂತಹ ಕಾನೂನು ಬಾಹೀರ ಕೆಲಸಗಳನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದೇ ಹೋದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿ.ಡಿ. ಪಾವಲೆ ಸೇರಿದಂತೆ ಮತ್ತಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಕಾಶ ಬಂಡರಕವಟೆ, ಆರ್.ಜಿ.ಪಾವಲೆ, ಎಸ್.ಜಿ.ಪಾವಲೆ, ಉಮೇಶ ಪತ್ತಾರ, ಐ.ಸಿ.ಪತ್ತಾರ, ಪಿಂಟು ಪತ್ತಾರ, ಮೌನೇಶ ಪತ್ತಾರ, ಧಾನೇಶ ಪೋತದಾರ, ಪ್ರವೀಣಗೌಡ ಪಾಟೀಲ, ಮಲ್ಲಿಕಾರ್ಜುನ ಬಂಡರಕವಟೆ, ಟಿ.ವಿ.ಪವಾರ, ರಾಜೇಶ ವರ್ಣೇಕರ ಸೇರಿದಂತೆ ನೂರಾರು ಸರಾಫ ವರ್ತಕರು ಇದ್ದರು.

