ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸುಧಾರಕರಾಗಿ ಡಾ.ಬಾಬು ಜಗಜೀವನ ರಾಮ ದೇಶದ ಇತಿಹಾಸದಲ್ಲಿ ಅಮೂಲ್ಯವಾದ ಸ್ಥಾನವನ್ನು ಹೊಂದಿದ್ದಾರೆ. ದಲಿತ ಸಮುದಾಯದ ಹಕ್ಕುಗಳಿಗಾಗಿ ಅವರು ಹೋರಾಡಿ ಸಮಾನತೆ ಮತ್ತು ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದರು ಎಂದು ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಸುನಂದಾ ಎಸ್. ಶಿರೂರ ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಜಮಖಂಡಿಯಲ್ಲಿ ಸಾಂಸ್ಕೃತಿಕ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬಾಬು ಜಗಜೀವನ ರಾಮ ಇವರ ಜನ್ಮ ದಿನದ ಪ್ರಯುಕ್ತ ಸಮತಾ ದಿನವನ್ನು ಆಚರಿಸಿ, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಬಾಬು ಜಗಜೀವನ ರಾಮ ಅವರ ಜೀವನವು ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದು, ಈ ಕಾರಣದಿಂದಲೇ ಅವರ ಜನ್ಮ ದಿನವನ್ನು ಸಮತಾ ದಿನವೆಂದು ಆಚರಿಸಲಾಗುತ್ತದೆ ಎಂದು ವಿವರಿಸಿದರು.
ಆರ್. ಎಸ್. ಜಾಧವ ಅವರು ಮಾತನಾಡಿ, ಭಾರತದ ರಾಜಕೀಯ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ವಿವಿಧ ಕೇಂದ್ರ ಸಚಿವ ಸ್ಥಾನಗಳನ್ನು ಅಲಂಕರಿಸಿದರು. ಕೃಷಿ, ರಕ್ಷಣಾ ಹಾಗೂ ಕಾರ್ಮಿಕ ಕ್ಷೇತ್ರಗಳಲ್ಲಿ ಅವರ ಸಾಧನೆಗಳು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿವೆ ಎಂದರು.
ಎಸ್. ಪಿ. ಸಜ್ಜನ ಪ್ರಾರ್ಥಿಸಿದರು. ಆರ್. ಬಿ. ಶಿತೋಳೆ ವಂದಿಸಿದರು. ಪಿ. ಬಿ. ಚಾಂದಕವಟೆ, ಶ್ರೀಮತಿ ಸುನಂದಾ ಸಣ್ಣಕ್ಕಿ, ಸಂತೋಷ ಯಡಹಳ್ಳಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

