ಕಸದ ಕೊಂಪೆಯಾದ ಹೊರ್ತಿ ಯ ಐತಿಹಾಸಿಕ ಶಿವ ದೇವಸ್ಥಾನ | ಎಗ್ಗಿಲ್ಲದೆ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳು | ಗಾನಯೋಗಿ ಸಂಘದಿಂದ ಪುನಃ ಸ್ವಚ್ಚತಾ ಕಾರ್ಯ
ಉದಯರಶ್ಮಿ ದಿನಪತ್ರಿಕೆ
ವರದಿ: ರಾಜು ಕೆರುಟಗಿ
ವಿಜಯಪುರ: ಅದೊಂದು ಕಾಲದಲ್ಲಿ ಕಾಲಕಾಲಕ್ಕೆ ಪೂಜೆ-ಪುನಸ್ಕಾರಗಳೊಂದಿಗೆ ಸಹಸ್ರಾರು ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದ ದೇವಸ್ಥಾನವೊಂದು ಇದೀಗ ಕುಡುಕರ, ದುರ್ವ್ಯಸನಿಗಳ ಅಡ್ಡೆಯಾಗಿ ಮಾರ್ಪಟ್ಟು ನಮ್ಮ ಪರಂಪರೆಯನ್ನು ಅಣಕಿಸುವಂತಾಗಿದೆ.
ಜಿಲ್ಲೆಯ ಇಂಡಿ ತಾಲೂಕಿನ ಹೋರ್ತಿ ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿದ ಅಪರೂಪದ ನಕ್ಷತ್ರಾಕಾರದ ಶಿವ ದೇವಸ್ಥಾನವೊಂದಿದೆ. ಈ ದೇವಸ್ಥಾನದ ಇಂದಿನ ಪರಿಸ್ಥಿತಿ ಅತ್ಯಂತ ದಯನೀಯ ಮತ್ತು ವಿಷಾದಕರವಾಗಿದೆ.
ಈ ದೇವಸ್ಥಾನದ ಉನ್ನತ ಪರಂಪರೆ, ಇತಿಹಾಸ ಅರಿತವರು ಯಾರೇ ಆಗಿದ್ದರೂ ದೇಗುಲದ ಇಂದಿನ ದುಸ್ಥಿತಿ ಕಂಡು ಮರುಗದೇ ಇರರು.
ದೇವಸ್ಥಾನದ ಹೊರ ಮತ್ತು ಒಳ ಆವರಣದಲ್ಲೆಲ್ಲ ಬೀಯರ್ ಬಾಟಲಿಗಳು, ವ್ಹಿಸ್ಕಿ ಪ್ಯಾಕೆಟ್ಗಳು, ಪ್ಲಾಸ್ಟಿಕ್ ಗ್ಲಾಸ್ಗಳು, ನೀರಿನ ಖಾಲಿ ಬಾಟಲಿಗಳು ಮತ್ತು ಗುಟ್ಕಾ ಕಲೆಗಳು ಎಲ್ಲೆಡೆ ರಾರಾಜಿಸುತ್ತವೆ. ಕಸದ ರಾಶಿ ಕಣ್ಣಿಗೆ ರಾಚುತ್ತ ದೇವಸ್ಥಾನವು ತಿಪ್ಪೆಗುಂಡಿಯಂತಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಸುಮಾರು ಎರಡು-ಮೂರು ತಿಂಗಳುಗಳ ಹಿಂದೆ ದೇವಸ್ಥಾನವು ಇನ್ನಷ್ಟು ಮಲಿನಗೊಂಡು ಪಾಳುಬಿದ್ದ ಸ್ಥಿತಿಯಲ್ಲಿತ್ತು. ಆಗ ವಿಜಯಪುರದ “ಗಾನಯೋಗಿ ಸಂಘ”ದ ಸದಸ್ಯರು ದೇವಸ್ಥಾನವನ್ನು ಸ್ವಚ್ಚಗೊಳಿಸಿ, ಶಿವಲಿಂಗಕ್ಕೆ ಪೂಜೆಯನ್ನು ನೆರವೇರಿಸಿ, ಸಾರ್ವಜನಿಕರಲ್ಲಿ ಸ್ವಚ್ಚತೆ ಕಾಪಾಡುವಂತೆ ಮನವಿ ಮಾಡಿದ್ದರು. ಜೊತೆಗೆ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿ, ಕಿಡಿಗೇಡಿಗಳ ವಿರುದ್ಧ ನಿಗಾವಹಿಸಲು ವಿನಂತಿಸಿದ್ದರು.
ಈ ಸ್ವಚ್ಚತಾ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಆದರೆ, ಕೆಲ ತಿಂಗಳಲ್ಲೇ ದೇವಸ್ಥಾನದಲ್ಲಿ ಮತ್ತೆ ಅಸಭ್ಯ ಚಟುವಟಿಕೆಗಳು ಆರಂಭವಾಗಿ, ಮದ್ಯಪಾನ ಮತ್ತು ಧೂಮಪಾನ ಮಾಡುವವರ ಅಡ್ಡೆಯಾಗಿ ಮಾರ್ಪಟ್ಟಿದೆ. ಇದರಿಂದ ಬೇಸರಗೊಂಡ ಗಾನಯೋಗಿ ಸಂಘದ ಸದಸ್ಯರು ಮತ್ತೊಮ್ಮೆ ಕಾರ್ಯಪ್ರವೃತ್ತರಾಗಿ, ಸಂಘದ ಅಧ್ಯಕ್ಷ ಪ್ರಕಾಶ್ ಆರ್ ಕೆ ನೇತೃತ್ವದಲ್ಲಿ ಸದಸ್ಯರು ಸೇರಿ ದೇವಸ್ಥಾನವನ್ನು ಪುನಃ ಸ್ವಚ್ಚಗೊಳಿಸಿ ಮತ್ತೊಮ್ಮೆ ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಈ ವೇಳೆ ದೇವಸ್ಥಾನದಲ್ಲಿ ಜಾಗೃತಿ ನಾಮಫಲಕಗಳನ್ನು ಅಳವಡಿಸಿ, “ಇಂತಹ ಅಸಭ್ಯ ಚಟುವಟಿಕೆಗಳು ಮುಂದುವರಿದರೆ ಸಂಬಂಧಿತ ಇಲಾಖೆಗಳ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರಲ್ಲದೆ, ದೇವಸ್ಥಾನದ ಸ್ವಚ್ಚತೆ ಮತ್ತು ಪಾವಿತ್ರ್ಯವನ್ನು ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

“ಐತಿಹಾಸಿಕ ದೇವಸ್ಥಾನಗಳು ಮತ್ತು ಸ್ಮಾರಕಗಳು ನಮ್ಮ ಪೂರ್ವಜರು ನಮಗೆ ಬಿಟ್ಟು ಹೋದ ಅಮೂಲ್ಯವಾದ ಆಸ್ತಿ. ಅವುಗಳನ್ನು ನಾವು ಹಾಳು ಮಾಡಿದರೆ ನಷ್ಟವಾಗುವುದು ನಮಗೆ. ಇಂತಹ ಸ್ಮಾರಕಗಳನ್ನು ಉಳಿಸಿ ಮುಂದಿನ ಪೀಳಿಗೆಗಳಿಗೆ ಉಳಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.”
– ಪ್ರಕಾಶ ಆರ್.ಕೆ
ಅಧ್ಯಕ್ಷರು, ಗಾನಯೋಗಿ ಸಂಘ, ವಿಜಯಪುರ

ಸೂಕ್ಷ್ಮ ಕೆತ್ತನೆಗಳ ದೇವಸ್ಥಾನ
ಚಾಲುಕ್ಯರ ಕಾಲದ ಶತಮಾನಗಳ ಹಿಂದಿನ ಈ ದೇವಸ್ಥಾನವು ಕಪ್ಪು ಕಲ್ಲಿನಲ್ಲಿ ನಿರ್ಮಾಣಗೊಂಡಿದ್ದು, ಸುತ್ತಮುತ್ತಲೂ ಉಬ್ಬು ಶಿಲ್ಪಕಲೆಗಳು ಹಾಗೂ ಕಂಬಗಳಲ್ಲಿ ಸುಂದರವಾದ ನಕ್ಷೆಗಳು, ಸೂಕ್ಷ್ಮ ಕೆತ್ತನೆಗಳು ಅಚ್ಚಳಿಯದಂತೆ ಮೂಡಿವೆ. ಇದು ಅಂದಿನ ಶಿಲ್ಪಿಗಳ ಬುದ್ಧಿವಂತಿಕೆ ಮತ್ತು ಕಲಾತ್ಮಕತೆಯನ್ನು ಎತ್ತಿ ತೋರಿಸುತ್ತದೆ. ಈ ದೇವಸ್ಥಾನವು ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ಹೋಲುವಂತಿದೆ. ದೇವಸ್ಥಾನದಲ್ಲಿ ಶಿವಲಿಂಗವಿದ್ದು, ಅದು ಕಳ್ಳಕಾಕರು ಮತ್ತು ನಿಧಿಗಳ್ಳರ ಕಾಟದಿಂದ ಭಾಗಶಃ ಹಾನಿಗೊಳಗಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ದುಷ್ಕರ್ಮಿಗಳು ದೇವಸ್ಥಾನವನ್ನು ಅನೈತಿಕ ಚಟುವಟಿಕೆಗಳಿಗೆ ಬಳಸುತ್ತಿರುವುದು ವಿಷಾದಕರ ಸಂಗತಿಯಾಗಿದೆ.

ಗಾನಯೋಗಿ ಸಂಘದ ಸೇವಾನಿರತರು
ಪ್ರಕಾಶ ರಮೇಶ ಕಲಬುರ್ಗಿ (ಅಧ್ಯಕ್ಷರು), ಬಾಹುಬಲಿ ಶಾಂತಪ್ಪ ಶಿವಣ್ಣವರ (ಉಪಾಧ್ಯಕ್ಷರು), ವಿಕಾಸ ಸುರೇಶ ಕಂಬಾಗಿ (ಕಾರ್ಯದರ್ಶಿ), ಸಂತೋಷ ಮಂಗಲಸಿಂಗ ಚವ್ಹಾಣ, ರವಿ ರತ್ನಾಕರ, ರಾಜಕುಮಾರ ವಿಜಯಕುಮಾರ್ ಹೊಸಟ್ಟಿ, ವಿಠ್ಠಲ ಸಂಗಪ್ಪ ಗುರುವಿನ, ಮಹೇಶ ರಾಮಣ್ಣ ಕುಂಬಾರ, ವೀರೇಶ ಅಪ್ಪಾಸಾಹೇಬ ಸೊನ್ನಲಗಿ, ರಾಜು ಮಲ್ಲಿಕಾರ್ಜುನ ಕೆರುಟಗಿ, ಸಚಿನ ಹರಿದಾಸ ವಾಲಿಕಾರ (ಸದಸ್ಯರು)

