ಪ್ರಶಸ್ತಿ ಪುರಸ್ಕೃತ ಕಂಪೂನವರ ಗೆ “ಉದಯರಶ್ಮಿ” ಸಂಪಾದಕ ಇಂದುಶೇಖರ ಮಣೂರ & ಪತ್ರಿಕಾ ಬಳಗದಿಂದ ಅಭಿನಂದನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಡಿಯಲ್ಲಿ ಲಿಂಗಸುಗೂರು ಸಿದ್ರಾಮಪ್ಪ ಹೆಸರಿನಲ್ಲಿ ಅವರ ಪುತ್ರ ಶಿವರಾಜ ಕೆಂಭಾವಿಯವರು ಹೊಸದಾಗಿ ಸ್ಥಾಪನೆ ಮಾಡಿರುವ ಲಿಂಗಸುಗೂರು ಸಿದ್ರಾಮಪ್ಪ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಏಷ್ಯಾನೆಟ್ ಸುವರ್ಣ ನ್ಯೂಸ್ ಟಿವಿ ಜಿಲ್ಲಾ ಹಿರಿಯ ವರದಿಗಾರ ಷಡಕ್ಷರಿ ಬಸವರಾಜು ಕಂಪೂನವರ ಅವರು ಆಯ್ಕೆಯಾಗಿದ್ದಾರೆ.
ಬೀದರ್ನಲ್ಲಿ ಏ.11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಹಿರಿಯ ವರದಿಗಾರ ಷಡಕ್ಷರಿ ಬಸವರಾಜು ಕಂಪೂನವರ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾನಿಪ ರಾಜ್ಯ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಷಡಕ್ಷರಿ ಕಂಪೂನವರ ಅವರನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ಪದಾಧಿಕಾರಿಗಳು ಸೇರಿದಂತೆ “ಉದಯರಶ್ಮಿ” ಪತ್ರಿಕಾ ಬಳಗ ಅಭಿನಂದಿಸಿದ್ದಾರೆ.

ಷಡಕ್ಷರಿ ನಡೆದುಬಂದ ದಾರಿ
ಹಿರಿಯ ವರದಿಗಾರ ಷಡಕ್ಷರಿ ಬಸವರಾಜು ಕಂಪೂನವರ ಅವರು ಅಥಣಿ ದರ್ಶನ ವಾರಪತ್ರಿಕೆಯಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ ನಂತರ SSCN NEWS, ATN NEWS, ಕಸ್ತೂರಿ ನ್ಯೂಸ್ 24, ಪ್ರಜಾ ಟಿವಿ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿ 2018ರಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಸ್ಟಿಂಗ್ ಆಪರೇಷನ್ಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತ ವರದಿ ಮಾಡಿದ್ದು, ಅಮೋನಿಯಂ ನೈಟ್ರೇಟ್ ಕಳ್ಳ ಮಾರಾಟ ದಂಧೆ, ನಕಲಿ ಆಧಾರ್, ಪಾನ್ಕಾರ್ಡ್ ಜಾಲ, ಅಕ್ರಮ ಗರ್ಭಪಾತ ದಂಧೆ, ಡ್ರಗ್ಸ್ ಮತ್ತು ಕಂಟ್ರಿ ಪಿಸ್ತೂಲ್ ಮಾರಾಟ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ಸ್ಟಿಂಗ್ ಆಪರೇಷನ್ ಮೂಲಕ ವಡಕ್ಷರಿ ಅವರು ಬಯಲಿಗೆಳೆದಿದ್ದಾರೆ.

ಪ್ರಶಸ್ತಿ – ಪುರಸ್ಕಾರ
ಹಿರಿಯ ವರದಿಗಾರ ಷಡಕ್ಷರಿ ಬಸವರಾಜು ಕಂಪೂನವರ ಅವರು ಮಾಧ್ಯಮ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಈವರೆಗೆ ಹಲವು ಪ್ರಶಸ್ತಿ – ಪುರಸ್ಕಾರಗಳ ಗೌರವಕ್ಕೆ ಪಾತ್ರರಾಗಿದ್ದಾರೆ.
2022 ಮತ್ತು 2023 ರಲ್ಲಿ ಟಿಎನ್ಐಟಿ ಮೀಡಿಯಾ ಅವಾರ್ಡ್, ಸುವರ್ಣ ನ್ಯೂಸ್ ಉತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ, 2019ರಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಶಸ್ತಿ, 2018ರಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

