ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಇಂದಿನ ಸಮಾಜದಲ್ಲಿ ಬಹಳಷ್ಟು ಜನ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ ಅಂತವರು ಅಂಗವಿಕಲತೆಯನ್ನು ಮೆಟ್ಟಿ ನಿಲ್ಲಬೇಕು. ಅಂಗವಿಕಲತೆ ಎನ್ನುವುದು ಶಾಪವಲ್ಲ ಅದನ್ನು ವರವಾಗಿ ಮಾಡಿಕೊಳ್ಳುವಂತಹ ಕಲೆಯನ್ನು ಎಲ್ಲರು ಬೆಳೆಸಿಕೊಳ್ಳಬೇಕು ಎಂದು ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಬಸವರಾಜ ಉಮರಾಣಿ ಹೇಳಿದರು.
ಅವರು ಪ್ರತಿಷ್ಠಿತ ಬಿ ಎಲ್ ಡಿ ಇ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಜಮಖಂಡಿಯಲ್ಲಿ ಶನಿವಾರ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿ ಮಾರ್ಗದರ್ಶನ ಮಾಡಿದರು.
ಇಂದು ಬಹಳಷ್ಟು ಜನ ನಾಟಕೀಯವಾಗಿ ಯಾವುದಾದರೂ ಒಂದು ನ್ಯೂನತೆ ಇದ್ದರೆ ಅದನ್ನೇ ದೊಡ್ಡದಾಗಿ ಮಾಡುತ್ತಾರೆ, ನಿಜವಾಗಿಯೂ ಅದು ನ್ಯೂನತೆ ಅಲ್ಲ, ಅದನ್ನು ಮರೆ ಮಾಚಿ ನಮ್ಮಿಂದ ಯಾರಿಗೂ ತೊಂದರೆ ಆಗದಂತೆ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೆ ಜೆ ಜೀರಗಾಳಿ ಮಾತನಾಡಿ, ಬಸವರಾಜ ಉಮರಾಣಿ ಅವರನ್ನು ಪ್ರಶಂಶಿಸಿ, ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಯಶಸ್ವಿಗೆ ಸತತ ಪರಿಶ್ರಮ ಮುಖ್ಯ ಎಂದು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಅತಿಥಿ ಪರಿಚಯವನ್ನು ಪ್ರೊ. ಪ್ರೇಮಾನಂದ ಹಿರೇಮಠ ನೆರವೇರಿಸಿದರು.
ಪ್ರೊ. ಎಲ್.ಎಮ್ ಮಾರ್ಕಪನಳ್ಳಿ ಹಾಗೂ ಪ್ರೊ. ಅಶ್ವಿನಿ ಅನಂತಪೂರ ಕಾರ್ಯಕ್ರಮದಲ್ಲಿ ಇದ್ದರು. ಪ್ರಶಿಕ್ಷಣಾರ್ಥಿಗಳಾದ ಮಾಳಿಂಗರಾಯ ರೇವಣ್ಣವರ ಸ್ವಾಗತಿಸಿದರು. ಶಿವಾನಂದ ಅವಟಿ ವಂದಿಸಿದರು.

