ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಇಂದು ಪಾಲಕರು ತಮ್ಮ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಕಲಿಸದೇ ಲಕ್ಷ್ಯ ವಹಿಸಿ ಕಲಿಸುವಂತಾಗುವ ಜೊತೆಗೆ ತಾಯಂದಿಯರು ಮೊಬೈಲ್ ತ್ಯಾಗ ಮಾಡಿ ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸುವಂತಾಗಬೇಕೆಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ನಂದಿ ಬಡಾವಣೆಯ ಮಾರುತಿ ದೇವಸ್ಥಾನದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆಯ ಸಹಯೋಗದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಚಿಕ್ಕಮಕ್ಕಳನ್ನು ಆದಷ್ಟು ಮೊಬೈಲ್ ದಿಂದ ದೂರವಿಡಬೇಕು.ಇಂದು ಮೊಬೈಲ್ ಬಳಕೆ ಹೆಚ್ಚಾಗಿ ಬಳಕೆ ಮಾಡಿದ ಪರಿಣಾಮ ನಿಮ್ಹಾನ್ಸ್ ನಲ್ಲಿ ಹೆಚ್ಚು ಮಕ್ಕಳನ್ನು ಕಾಣುವಂತಾಗಿದೆ. ಮಕ್ಕಳ ಜೀವನ ಶುದ್ಧರಾಗಿಬೇಕಾದರೆ ಮೊದಲು ಪಾಲಕರು ಮಕ್ಕಳು ಇರುವಾಗ ಮೊಬೈಲ್ ತ್ಯಾಗ ಮಾಡಬೇಕು. ಇಂದು ಮಕ್ಕಳು ಹಠ ಮಾಡಬಾರದು ಎಂಬ ಕಾರಣಕ್ಕೆ ಪಾಲಕರೇ ಮೊಬೈಲು ಗೀಳು ಮಕ್ಕಳಿಗೆ ಅಂಟಿಸುತ್ತಿರುವುದು ವಿಷಾದನೀಯ. ಇದು ನಿಲ್ಲಬೇಕಿದೆ. ಮೊಬೈಲ್ ಬಳಕೆ ಸದುಪಯೋಗವಾಗುವಂತಿರಬೇಕು. ಇಂದು ಕೊಲ್ಲಿ ಯುದ್ಧ ಪರಿಣಾಮ ಇಲ್ಲಿಯೂ ಆಗುತ್ತಿರುವದನ್ನು ನಾವು ನೋಡುತ್ತಿದ್ದೇವೆ. ಮುಂದಿನ ದಿನಮಾನಗಳು ಹೇಗೆ ಇರುತ್ತವೆ ಎಂಬುವದನ್ನು ಗೊತ್ತಾಗುವದಿಲ್ಲ. ಅದಕ್ಕಾಗಿ ಎಲ್ಲರೂ ಉತ್ತಮ ಜೀವನ ಮಾಡಲು ಬೇಕಾದ ಅಂಶಗಳನ್ನು ಅರಿತು ಅದರಂತೆ ನಡೆಯಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಮಾಜಿ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿ, ಕುಟುಂಬ ಮತ್ತು ಸಮಾಜ ನಿರ್ವಹಣೆಯಲ್ಲಿ ಮಹಿಳೆಯರು ಇಂದು ಮುಂದಿದ್ದಾರೆ. ಎಲ್ಲ ಮಹಿಳೆಯರು ಉತ್ತಮ ನಡೆ-ನುಡಿಯಿಂದ ಜೀವನ ಸಾಗಿಸುವಂತಾಗಬೇಕೆಂದರು.
ಉಪನ್ಯಾಸ ನೀಡಿದ ಜನಪದ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ಮಾತನಾಡಿ, 12 ನೇ ಶತಮಾನದ ಬಸವಾದಿ ಶರಣರು ಇಂದಿಗೂ ಪ್ರಸ್ತುತವಾಗಿದ್ದಾರೆ. ಶರಣರು ದಾಸೋಹ, ಕಾಯಕ, ಸಮಾನತೆಗೆ ಆದ್ಯತೆ ನೀಡಿದ್ದರು. 434 ವಚನಗಳನ್ನು ರಚನೆ ಮಾಡಿರುವ ಅಕ್ಕಮಹಾದೇವಿ ಜೀವನ ಸಂದೇಶ ಎಲ್ಲ ಮಹಿಳೆಯರಿಗೂ ಮಾದರಿಯಾಗಿದೆ ಎಂದರು.
ಶಿಕ್ಷಕಿ ಸರ್ವಮಂಗಳಾ ಕಡಿವಾಲ ಮಾತನಾಡಿ, ಮಹಿಳೆಯರು ಜಗತ್ತಿನ ಶಕ್ತಿ. ಈ ಶಕ್ತಿಗೆ ಸುರಕ್ಷತೆ, ರಕ್ಷಣೆ ಸಿಗುವ ಜೊತೆಗೆ ಅವಕಾಶ, ಭದ್ರತೆ ಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ, ಮುಖ್ಯಶಿಕ್ಷಕಿ ಕಮಲಾ ಪದರಾ ಮಾತನಾಡಿದರು.
ಕದಳಿ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಆಶಯ ನುಡಿಯನ್ನಾಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಶಶಿಕಲಾ ದೇಗಿನಾಳ, ಲಕ್ಷ್ಮೀಬಾಯಿ ಹಳ್ಳಿ, ಪುಷ್ಪಾ ಕುಲಕರ್ಣಿ, ನಿರ್ಮಲಾ ಅಂಗಡಿ, ಮಹಾದೇವಿ ಕೊಪ್ಪದ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.
ಅಂಧ ಸಂಗೀತ ಕಲಾವಿದರಾದ ಕಲ್ಮೇಶ ಶಿರಗೂರು, ಅಶೋಕ ಜುಗತಿ ಪ್ರಾರ್ಥಿಸಿದರು. ಶರಣ ಬಸ್ತಾಳ ವಚನಗೀತೆ ಹಾಡಿದರು. ಸಂಗೀತಾ ಬಾಗೇವಾಡಿ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಪಿ.ಎಸ್.ಬಾಗೇವಾಡಿ ವಂದಿಸಿದರು.

