ಲೇಖನ
– ಡಾ.ಶಶಿಕಾಂತ ಪಟ್ಟಣ
ರಾಮದುರ್ಗ – ಪುಣೆ
ಉದಯರಶ್ಮಿ ದಿನಪತ್ರಿಕೆ
ಕನ್ನಡ ಸಾಹಿತ್ಯ ಸಾರಸ್ವತ ಲೋಕದ ದೈತ್ಯ ಪ್ರತಿಭೆ ದೇಸಿ ಪ್ರಜ್ಞೆಯ ಭಾರತೀಯ ಸಂಸ್ಕೃತಿ ಚಿಂತಕ ನವ್ಯ ಸಾಹಿತ್ಯದ ಪ್ರತಿಪಾದಕ ಪಿ ಲಂಕೇಶ ಕರ್ನಾಟಕದ ಪ್ರಬುದ್ಧ ಪ್ರಾಮಾಣಿಕ ಪತ್ರಕರ್ತರು, ಸಾಹಿತಿ, ಕವಿ, ಲೇಖಕ ಮತ್ತು ಕಾದಂಬರಿಕಾರರು.
ತಮ್ಮ ಬರವಣಿಗೆಯ ಮೂಲಕ ಸಮಾಜದಲ್ಲಿ ಸಾಮರಸ್ಯ ಬದಲಾವಣೆ ಕ್ರಾಂತಿಯನ್ನು ತರಬಹುದು ಎಂದು ತೋರಿಸಿ ಕೊಟ್ಟ ಶ್ರೇಷ್ಠ ಕವಿ ವಾಗ್ಮಿ ವಿಮರ್ಶಕ ಮತ್ತು ಚಿಂತಕರು.
ಆಂಗ್ಲ ಮಾಧ್ಯಮ ಶಿಕ್ಷಕರಾದ ಬಿ ಎಂ ಶ್ರೀ ಶಂಕರ ಮೊಕಾಶಿ ಪುಣೇಕರ ಶಾಂತಿನಾಥ ದೇಸಾಯಿ ಚಂಪಾ ಅವರಂತೆ ಪಿ ಲಂಕೇಶ ಒಬ್ಬ ಶ್ರೇಷ್ಠ ಇಂಗ್ಲೀಷ್ ಭಾಷೆ ಪ್ರಾಧ್ಯಾಪಕರು. ಯುವ ಜನರ ಬರವಣಿಗೆ ದಿಕ್ಕನ್ನೇ ಬದಲಾಯಿಸಿದ ಕ್ರಾಂತಿಕಾರ ಲೇಖಕ ಸಾಹಿತಿ.

ಪಾಳ್ಯದ ಲಂಕೇಶ್, ಅಥವಾ ಪಿ. ಲಂಕೇಶ್ ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು. ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಇದು ಪತ್ರಿಕೋದ್ಯೋಗಿಯಾಗಿ ಹೆಸರು ಮಾಡಿರುವ ಲಂಕೇಶರು ಪ್ರಸಿದ್ದಿ ಪಡೆದದ್ದು ನಾಟಕಕಾರರಾಗಿ. ನಾಟಕ ಕ್ಷೇತ್ರಕ್ಕೆ ಅವರು ಕೊಟ್ಟಿರುವ ನಾಟಕಗಳು ಅನೇಕ.
ಪಿ.ಲಂಕೇಶ್ ಅವರು ತಾವು
ಲೇಖಕ, ಸಂಪಾದಕ, ನಿರ್ಮಾಪಕ, ಕವಿ, ನಾಟಕಕಾರ, ಅಧ್ಯಾಪಕ,ನಟ ಜೊತೆಗೆ ತಾವೊಬ್ಬ ಹೊಸ ತಲೆಮಾರಿನ ಭರವಸೆಯ ಸಾಹಿತಿ ಚಿಂತಕ ಎಂದು ಸಾಧಿಸಿ ತೋರಿಸಿದರು. ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿದ ಕನ್ನಡದ ಏಕ ಮೇವ ಸಾಹಿತಿ ಪಿ ಲಂಕೇಶ.
ಕುಟುಂಬ ವಿವರ
ಮಡದಿ ಇಂದಿರಾ ಲಂಕೇಶ್, ಮಕ್ಕಳು ಗೌರಿ ಲಂಕೇಶ್, ಕವಿತಾ ಲಂಕೇಶ್ ಮತ್ತು ಪುತ್ರ ಇಂದ್ರಜಿತ್ ಲಂಕೇಶ್
ಜನನ, ವಿದ್ಯಾಭ್ಯಾಸ
ಇವರು ೮ ಮಾರ್ಚ್ , ೧೯೩೫ ರಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು.
ಕನ್ನಡದ ಪ್ರಸಿದ್ಧ ಸಾಹಿತಿ ಮತ್ತು ಪತ್ರಕರ್ತ ಪಿ. ಲಂಕೇಶ್ ಅವರ ತಂದೆ ಪಿ. ಮಾರಪ್ಪ ಮತ್ತು ತಾಯಿ ಗುರುಬಸಮ್ಮ.
ಶಿಕ್ಷಣ
ಶಿವಮೊಗ್ಗದಲ್ಲಿ ಪ್ರೌಢಶಾಲೆ ಹಾಗೂ ಇಂಟರ್ ಮೀಡಿಯೇಟ್ (ಸಹ್ಯಾದ್ರಿ ಕಾಲೇಜ್) ಓದಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ( ಆನರ್ಸ್ ) ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿಯನ್ನು ಪಡೆದರು.
ವೃತ್ತಿ ಜೀವನ
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ೧೯೫೯ರಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ೧೯೬೨ರ ವರೆಗೆ ಅಲ್ಲಿಯೇ ಮುಂದುವರೆಸಿರಿದರು.
೧೯೬೨ ರಿಂದ ೧೯೬೫ರವರೆಗೆ ಬೆಂಗಳೂರು ಸೆಂಟ್ರೆಲ್ ಕಾಲೇಜ್ ಮತ್ತು ಸರ್ಕಾರಿ ಕಾಲೇಜಿನಲ್ಲಿ, ೧೯೬೬ರಿಂದ ೧೯೭೮ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು.
೧೯೭೯ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಇಂದು ಪತ್ರಿಕೋದ್ಯೋಗಿಯಾಗಿ ಹೆಸರು ಮಾಡಿರುವ ಲಂಕೇಶರು ಪ್ರಸಿದ್ದಿ ಪಡೆದದ್ದು ನಾಟಕಕಾರರಾಗಿ. ನಾಟಕ ಕ್ಷೇತ್ರಕ್ಕೆ ಅವರು ಕೊಟ್ಟಿರುವ ನಾಟಕಗಳು ಅನೇಕ. ಗ್ರೀಕ್ ರಂಗಭೂಮಿಯ ರುದ್ರನಾಟಕ ‘’ಈಡಿಪಸ್’’ ಕಲಾಕ್ಷೇತ್ರದ ಬಯಲು ರಂಗಭೂಮಿಯಲ್ಲಿ ಅತ್ಯಂತ ಯಶಸ್ವಿಯಾಗಿದ್ದಕ್ಕೆ ಅವರ ಸಮರ್ಥ ಭಾಷಾಂತರವೂ ಒಂದು ಕಾರಣ. ಅಲ್ಲದೆ,ಅವರದೇ ಸ್ವಂತ ನಾಟಕಗಳಾದ ‘’ತೆರೆಗಳು’’, ’’ಸಂಕ್ರಾಂತಿ’’,ಇವು ನಾಟಕ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು.ಶ್ರೀಯುತರ ಪ್ರತಿಭೆ ಕೇವಲ ನಾಟಕ ಕ್ಷೇತ್ರಕ್ಕೆ ಮೀಸಲಾದದ್ದಲ್ಲ.
‘ಮುಸ್ಸಂಜೆಯ ಕಥಾ ಪ್ರಸಂಗ’ ಹಾಗೂ ‘ಬಿರಿಕು’ ಅವರ ಕಾದಂಬರಿಗಳು. ‘’ಬಿರುಕು’’ ನಾಟಕವೂ ಆಯಿತು.’’ಅಕ್ಷರ ಹೊಸ ಕಾವ್ಯ’’ ಅವರು ಸಂಪಾದಿಸಿದ ಅಧುನಿಕ ಕಾವ್ಯಗಳ ಸಂಕಲನ.
‘ಪಲ್ಲವಿ’,’ಅನುರೂಪ’,’ಎಲ್ಲಿಂದಲೋ ಬಂದವರು’ ಇವು ಅವರು ನಿರ್ದೇಶಿಸಿದ ಚಿತ್ರಗಳು.ಯಶಸ್ವಿ ಸಣ್ಣ ಕಥೆಗಳನ್ನು,ಬಿಚ್ಚುಮನಸಿನ ಹಾಗೂ ಮೊನಚಿನ ವಿಮರ್ಶಾ ಲೇಖನಗಳನ್ನು ಲಂಕೇಶರು ಬರೆದಿದ್ದಾರೆ. ”ಪಲ್ಲವಿ” ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. ”ಅನುರೂಪ”ಕ್ಕೆಪ್ರಾಂತೀಯ ಪ್ರಶಸ್ತಿ ಲಭಿಸಿದೆ. ಇವರು ಉತ್ತಮ ಬರಹಗಾರರು ಮತ್ತು ನಾಟಕ ಕಾರರು.
ಲಂಕೇಶ್ ಪತ್ರಿಕೆ
ವಿಮರ್ಶೆಗಳು, ಅಂಕಣಗಳು ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಟ್ಯಾಬ್ಲಾಯ್ಡ್ ವಾರಪತ್ರಿಕೆ ಜನಪ್ರಿಯವಾಯಿತು. ಹೊಸ ಸಾಹಿತಿಗಳ ಸೃಷ್ಟಿಗೆ ಲಂಕೇಶ್ ಪತ್ರಿಕೆ ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ ಚಂಪಾ ಪೂರ್ಣ ಚಂದ್ರ ತೇಜಸ್ವಿ ಚಂದ್ರಶೇಖರ ಕಂಬಾರ ಡಾ. ಸಿ ಎಸ್ ದ್ವಾರಕಾನಾಥ್, ರವೀಂದ್ರ ರೇಷ್ಮೆ, ಸಿರೂರು ರೆಡ್ಡಿ, ಪ್ರೊ. ಬಿ ವಿ ವೀರಭದ್ರಪ್ಪ, ಬಿ. ಕೃಷ್ಣಪ್ಪ, ಪುಂಡಲೀಕ ಶೇಠ್, ಕೋಟಗಾನಹಳ್ಳಿ ರಾಮಯ್ಯ, ಅಬ್ದುಲ್ ರಶೀದ್, ನಟರಾಜ್ ಹುಳಿಯಾರ್, ಹೆಚ್.ಎಲ್. ಕೇಶವಮೂರ್ತಿ, ಬಿ.ಚಂದ್ರೇಗೌಡ, ಬಾನು ಮುಸ್ತಾಕ್, ವೈದೇಹಿ, ಸಾರಾ ಅಬೂಬುಕರ್, ಇನ್ನೂ ಅನೇಕರು ಲಂಕೇಶ್ ಪತ್ರಿಕೆಯಲ್ಲಿ ತಮ್ಮ ಸಾಹಿತಿಕ ಕೊಡುಗೆ ನೀಡಿದರು.
ಕೃತಿಗಳು
ಲಂಕೇಶರ ಮೊದಲ ಕಥಾಸಂಕಲನ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ೧೯೬೩ರಲ್ಲಿ ಪ್ರಕಟವಾಯಿತು
ನಾಟಕಗಳು
ಬಿರುಕು (೧೯೭೩)
ಈಡಿಪಸ್ ಮತ್ತು ಅಂತಿಗೊನೆ (೧೯೭೧)
ಗುಣಮುಖ (೧೯೯೩)
ನನ್ನ ತಂಗಿಗೊಂದು ಗಂಡು ಕೊಡಿ (೧೯೬೩)
ತೆರೆಗಳು (೧೯೬೪)
ಟಿ. ಪ್ರಸನ್ನನ ಗೃಹಸ್ಥಾಶ್ರಮ (೧೯೬೪)
ಕ್ರಾಂತಿ ಬಂತು ಕ್ರಾಂತಿ (೧೯೬೫)
ಸಂಕ್ರಾಂತಿ (೧೯೭೧)
ಕಥಾ ಸಂಗ್ರಹ
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ೧೯೬೩
ನಾನಲ್ಲ ೧೯೭೦
ಉಮಾಪತಿ ಯ ಸ್ಕಾಲರ್ ಶಿಪ್ ಯಾತ್ರೆ ೧೯೭೩
ಕಲ್ಲು ಕರಗುವ ಸಮಯ ೧೯೯೦
ಉಲ್ಲಂಘನೆ ೧೯೯೬
ಮಂಜು ಕವಿದ ಸಂಜೆ ೨೦೦೧
ಸಮಗ್ರ ಕಥೆಗಳು (ಸಮಗ್ರ ಸಂಕಲನ)
ಕಾದಂಬರಿಗಳು
ಬಿರುಕು (೧೯೬೭)
ಮುಸ್ಸಂಜೆಯ ಕಥಾಪ್ರಸಂಗ (೧೯೭೮)
ಅಕ್ಕ (೧೯೯೧)
ಅಂಕಣ ಬರಹಗಳ ಸಂಗ್ರಹ
ಪ್ರಸ್ತುತ (೧೯೭೦)
ಕಂಡದ್ದು ಕಂಡಹಾಗೆ (೧೯೭೫)
ಟೀಕೆ ಟಿಪ್ಪಣಿ – ೧ (೧೯೯೭)
ಟೀಕೆ ಟಿಪ್ಪಣಿ – ೨ (೧೯೯೭)
ಟೀಕೆ ಟಿಪ್ಪಣಿ – ೩ (೨೦೦೮)
ರೂಪಕ ಲೇಖಕರು (೨೦೦೮)
ಸಾಹಿತಿ ಸಾಹಿತ್ಯ ವಿಮರ್ಶೆ (೨೦೦೮)
ಮರೆಯುವ ಮುನ್ನ – ಸಂಗ್ರಹ ೧ (೨೦೦೯)
ಈ ನರಕ ಈ ಪುಲಕ (೨೦೦೯)
ಮರೆಯುವ ಮುನ್ನ – ಸಂಗ್ರಹ ೨ (೨೦೧೦)
ಮರೆಯುವ ಮುನ್ನ – ಸಂಗ್ರಹ ೩
ಮನಕೆ ಕಾರಂಜಿಯ ಸ್ಪರ್ಶ (೨೦೧೦)
ಆಟ-ಜೂಜು-ಮೋಜು!
ಪಾಂಚಾಲಿ
ಕವನ ಸಂಗ್ರಹಗಳು
ಬಿಚ್ಚು
ನೀಲು ಕಾವ್ಯ – ಸಂಗ್ರಹ ೧
ನೀಲು ಕಾವ್ಯ – ಸಂಗ್ರಹ ೨
ನೀಲು ಕಾವ್ಯ – ಸಂಗ್ರಹ ೩
ಚಿತ್ರ ಸಮೂಹ (ಸಮಗ್ರ ಸಂಕಲನ)
ಅಕ್ಷರ ಹೊಸ ಕಾವ್ಯ
ಪಾಪದ ಹೂಗಳು
ತಲೆಮಾರು
ಆತ್ಮಕಥೆ
ಹುಳಿ ಮಾವಿನಮರ (ಇದರಲ್ಲಿ ಮಾವಿನ ಮರದ ಜೀವನ ಘಟ್ಟಗಳಂತೆ ತಮ್ಮ ಜೀವನ ಕಥನವನ್ನು ನಿರೂಪಿಸಿದ್ದಾರೆ)
ಚಲನಚಿತ್ರ ರಂಗ
ನಿರ್ದೇಶಕನಾಗಿ ಪಲ್ಲವಿ, ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ ‘ಅತ್ಯುತ್ತಮ ನಿರ್ದೇಶಕ’ ಎಂದು ಪ್ರಶಸ್ತಿ ಲಭಿಸಿದೆ.
ಅನುರೂಪ
ಖಂಡವಿದೆ ಕೊ ಮಾಂಸವಿದೆ ಕೊ
ಎಲ್ಲಿಂದಲೊ ಬಂದವರು
ಮುಸ್ಸಂಜೆಯ ಕಥಾ ಪ್ರಸಂಗ.
ನಟನಾಗಿ ಕಾರ್ಯ
ಲಂಕೇಶ್ ಅವರು ಸಂಸ್ಕಾರ ಚಲನಚಿತ್ರದಲ್ಲಿ ನಾರಣಪ್ಪನ ಪಾತ್ರವನ್ನು ಅಭಿನಯಿಸಿದ್ದಾರೆ. ಜೊತೆಗೆ ‘ಎಲ್ಲಿಂದಲೋ ಬಂದವರು’ ಚಲನಚಿತ್ರದಲ್ಲೂ ನಟಿಸಿದ್ದಾರೆ.
ಪ್ರಶಸ್ತಿ/ಪುರಸ್ಕಾರ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೩ –
‘ಕಲ್ಲು ಕರಗುವ ಸಮಯ’ – ಸಣ್ಣ ಕತೆಗಳ ಸಂಗ್ರಹ
ಪಲ್ಲವಿ- ಕನ್ನಡ ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ ‘ಅತ್ಯುತ್ತಮ ನಿರ್ದೇಶಕ’ ಎಂದು ರಾಷ್ಟ್ರಪ್ರಶಸ್ತಿ ಲಭಿಸಿದೆ (೧೯೭೭).
ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ೧೯೮೬
ಬಿ.ಎಚ್. ಶ್ರೀಧರ ಪ್ರಶಸ್ತಿ
ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ
ಆರ್ಯಭಟ ಸಾಹಿತ್ಯ ಪ್ರಶಸ್ತಿ
ಹೀಗೆ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿ ಪ್ರತಿಯೊಂದು ಕ್ಷೇತ್ರದಲ್ಲಿ ಹೊಸತನವನ್ನು ಮೂಡಿಸಿದ ಭರವಸೆಯ ಪರಿಪೂರ್ಣ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಾಹಿತಿ ಲೇಖಕ ಕವಿ ನಾಟಕಕಾರ ನಿರ್ದೇಶಕ ಮತ್ತು ಪತ್ರಕರ್ತ. ತಮ್ಮ ಜೀವಿತ ೬೪ ವರ್ಷಗಳ ಅವಧಿಯಲ್ಲಿ ನವ್ಯ ಸಾಹಿತ್ಯದ ಅಗ್ರ ಪಂಕ್ತಿಯಲ್ಲಿ ಶೋಭಾಯಮಾನವಾಗಿ ಶಾಶ್ವತವಾಗಿ ವಿರಾಜವಾದ ಅಪ್ಪಟ ದೇಸಿ ಪ್ರಜ್ಞೆಯ ಭಾರತೀಯ ಸಂಸ್ಕೃತಿ ಚಿಂತಕ ಸಾಹಿತಿ ಪಿ ಲಂಕೇಶ ಅವರು ೨೫ ಜನೆವರಿ ೨೦೦೦ ರಂದು ಬಯಲಲ್ಲಿ ಬಯಲಾದರು.


