ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಮಕ್ಕಳ ಬದುಕಿನಲ್ಲಿ ಪಾಲಕರು ಆಕರ್ಷಣೆಯನ್ನು ಉಂಟು ಮಾಡುವವರಾಗಿರಬೇಕು ವಿಪರ್ಯಾಸವೆಂದರೆ ಇಂದು ಮಕ್ಕಳನ್ನು ಆಕರ್ಷಿಸುತ್ತಿರುವುದು ಮೊಬೈಲ್ ಫೋನುಗಳು.
ನಾವು ಚಿಕ್ಕಂದಿನಲ್ಲಿ ಆಯಸ್ಕಾಂತ ಮತ್ತು ಕಾಂತ ಕ್ಷೇತ್ರದ ಕುರಿತು ಹೇಳುವಾಗ ಒಂದು ಹಾಳೆಯ ಮೇಲೆ ಆಯಸ್ಕಾಂತದ ಪುಟ್ಟ ತುಂಡನ್ನು ಇಟ್ಟು ಕಾಗದದ ಮತ್ತೊಂದು ಭಾಗದಲ್ಲಿ ಪುಟ್ಟ ಗುಂಡು ಸೂಜಿಯನ್ನು ಇಲ್ಲವೇ ಪಿನ್ನನ್ನು ಇಟ್ಟು ಆಯಸ್ಕಾಂತವನ್ನು ಸರಿಸುತ್ತಾ ಹೋದಾಗ ಗುಂಡು ಸೂಜಿಯು ಆಯಸ್ಕಾಂತದ ಆಕರ್ಷಣೆಗೆ ಒಳಗಾಗಿ ಸರಿಯುತ್ತದೆ ಎಂಬುದನ್ನು ನಮ್ಮ ಪಠ್ಯದಲ್ಲಿ ಓದುತ್ತಿದ್ದೆವಲ್ಲದೇ ಪ್ರಾಯೋಗಿಕವಾಗಿ ಮಾಡುತ್ತಿದ್ದೆವು ಕೂಡ.
ಇಂದಿನ ಕಾಲದಲ್ಲಿ ಅಪ್ಪ-ಅಮ್ಮ ಆಯಸ್ಕಾಂತವಾಗಿಲ್ಲ ಬದಲಾಗಿ ಮೊಬೈಲ್ ಅವರಿಗೆ ಆಕರ್ಷಣೆಯನ್ನು ಉಂಟುಮಾಡುತ್ತಿವೆ. ಶಾಲೆಯಿಂದ ಬರುವ ಮಕ್ಕಳು ತಮ್ಮ ಪಾಲಕರಿಗೆ ಶಾಲೆಯಲ್ಲಿ ನಡೆದ ಎಲ್ಲ ವಿಷಯಗಳನ್ನು ಹೇಳಿ ವಿಚಾರವಿನಿಮಯ ಮಾಡಿ ಕೊಳ್ಳಬೇಕಾದ ಸಮಯದಲ್ಲಿ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಿದ್ದಾರೆ ಎಂದರೆ ಪಾಲಕರು ಎಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಕುರಿತು ನಾವು ಯೋಚಿಸಬೇಕಾಗಿದೆ.
ಇತ್ತೀಚೆಗೆ ಬಿಜಾಪುರ ಜಿಲ್ಲೆಯ ಒಂದು ಪುಟ್ಟ ತಾಲೂಕಿಗೆ ಕಾರ್ಯಕ್ರಮಕ್ಕೆ ನಾನು ಹೋದಾಗ ಅಲ್ಲಿ ಒಂದನೇ ತರಗತಿಯ ಮಕ್ಕಳೊಂದಿಗೆ ನಾನು ಬಹಳ ಹೊತ್ತು ಮಾತನಾಡಿದೆ. ಅಲ್ಲಿ ಪಾಲಕರೂ ಇದ್ದರು… ಪಾಲಕರ ಬಳಿ ಮೊಬೈಲ್ ಕೂಡ ಇತ್ತು., ಆದರೆ ಆ ಒಂದು ಗಂಟೆಯ ಕಾಲ ಮಕ್ಕಳು ಮೊಬೈಲ್ ಮುಟ್ಟಲಿಲ್ಲ, ಬದಲಾಗಿ ನನ್ನೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು. ಇದರ ಅರ್ಥ ಇಷ್ಟೇ ಮಕ್ಕಳಿಗೆ ಆಕರ್ಷಣೆ ಆಗುವಂತೆ ನಾವು ನಮ್ಮ ಮಾತುಕತೆಯನ್ನು ವಿಚಾರಧಾರೆಗಳನ್ನು ಪ್ರಸ್ತುತಪಡಿಸುತ್ತಿರಬೇಕು ಅಂದಾಗ ಮಾತ್ರ ಮಕ್ಕಳು ಮೊಬೈಲ್ ಸ್ಕ್ರೀನ್ ನಿಂದ ಹೊರಗೆ ನಮ್ಮೊಂದಿಗೆ ಬೆರೆಯುತ್ತಾರೆ, ಬದುಕಿನ ಪಾಠಗಳನ್ನು ಕಲಿಯುತ್ತಾರೆ. ಮಾತಿನ ಮೂಲಕ ಅತ್ಯುತ್ತಮವಾದುದನ್ನು ನಾವು ಮಕ್ಕಳಿಗೆ ತೋರಿಸಿದಾಗ ಖಂಡಿತವಾಗಿಯೂ ಅವರು ಮೊಬೈಲ್ ನಿಂದ ದೂರ ಉಳಿಯಲು ಸಾಧ್ಯ. ಅಕಸ್ಮಾತ್ ಮೊಬೈಲ್ ಮುಟ್ಟಿದರೂ ತಮಗೆ ಅವಶ್ಯಕವಿರುವ ಮಾಹಿತಿಯನ್ನು ಪಡೆದುಕೊಂಡು ಮತ್ತೆ ತಮ್ಮ ಕೆಲಸಕ್ಕೆ ಮರಳುವ ರೀತಿಯಲ್ಲಿ ಮಕ್ಕಳನ್ನು ನಾವು ಬೆಳೆಸಬಹುದು.
ಬದಲಾವಣೆಯ ನಿಟ್ಟಿನಲ್ಲಿ ಆಕರ್ಷಣೆಗಳು ಕೂಡ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ನಡೆದಿವೆ. ಚಿಕ್ಕಂದಿನಲ್ಲಿ ನಮ್ಮ ಮನೆಗಳಲ್ಲಿ ಬ್ಲಾಕ್ ಅಂಡ್ ವೈಟ್ ಟಿವಿಗಳು ಇದ್ದವು.. ಆಗ ನಮ್ಮ ಆಕರ್ಷಣೆ ಇದ್ದದ್ದು ಕಲರ್ ಟಿವಿ ಇರುವವರ ಮನೆಗಳತ್ತ. ಫೋನುಗಳೇ ಇಲ್ಲದ ಕಾಲದಲ್ಲಿ ಬೇರೆಯವರ ಮನೆಯ ಫೋನುಗಳು, ವಾಹನಗಳು ನಮ್ಮನ್ನು ಸೆಳೆಯುತ್ತಿದ್ದವು.

ಜೀವಂತ ವಸ್ತುಗಳಾದ ನಮ್ಮ ಮಕ್ಕಳನ್ನು ನಾವು ಮನೆಯಲ್ಲಿರುವ ನಿರ್ಜೀವ ವಸ್ತುಗಳನ್ನು ಸೂಕ್ಷ್ಮವಾಗಿ ಬಳಸಲು ಹೇಳುತ್ತೇವೆ. ಉದಾಹರಣೆಗೆ ಮೊಬೈಲ್ ಮುಟ್ಟಬೇಡ, ಬೀಳಿಸಬೇಡ, ಟಿವಿ ಹಾಳು ಮಾಡಬೇಡ, ರಿಮೋಟ್ ಕೆಡವಬೇಡ ಹೀಗೆ ಹತ್ತು ಹಲವು ನಿರ್ಬಂಧಗಳನ್ನು ಹೇರುತ್ತಾ ಹೋಗುತ್ತೇವೆ. ನಿರ್ಜೀವ ವಸ್ತುಗಳ ಮೇಲೆ ತೋರಿಸುವ ನಮ್ಮ ಕಾಳಜಿ ಮತ್ತು ಪ್ರೀತಿ ಸಜೀವವಾಗಿರುವ ಮಕ್ಕಳ ಮೇಲೆ ಬಹುದೊಡ್ಡ ಪರಿಣಾಮವನ್ನು ಬೀರುತ್ತದೆ ಎಂಬುದರ ಅರಿವು ನಮಗೆ ಇಲ್ಲವಾಗುತ್ತದೆ.
ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುಗಳಾಗಿ ಪಾಲಕರು ಬದಲಾಗಬೇಕು ಮತ್ತಷ್ಟು ತಮ್ಮ ಆಕರ್ಷಣೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಮಕ್ಕಳಿಗೆ ಮತ್ತಷ್ಟು ಗಮನವನ್ನು ನೀಡಬೇಕು.
ಶಾಲೆಯಿಂದ ಮನೆಗೆ ಬರುವ ಮಗುವಿಗೆ ಮನೆಗೆ ಬರುತ್ತಲೇ ಕೈಕಾಲು ಮುಖ ತೊಳೆದು ಬಾ ಎಂದು ಆಜ್ಞೆ ನೀಡಿ ನಾವು ಸೀರಿಯಲ್ ನೋಡುತ್ತಾ ಕುಳಿತುಕೊಳ್ಳುವುದು ಅಲ್ಲ. ಬದಲಾಗಿ ಮಗುವಿನ ಎಲ್ಲ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವ ತಾಳ್ಮೆಯನ್ನು ಹೊಂದಿದ್ದು ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಬೇಕು. ಆಗ ಮಾತ್ರ ಮಕ್ಕಳು ನಮ್ಮೆಡೆ ಆಕರ್ಷಿತರಾಗುತ್ತಾರೆ.
ಆದ್ದರಿಂದ ಪಾಲಕರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದಾಗ ಮಕ್ಕಳ ಮೊಬೈಲ್ ಆಕರ್ಷಣೆ ಕಡಿಮೆ ಆಗುತ್ತದೆ. ಸಮಯ ಸಂದರ್ಭಕ್ಕನುಸಾರವಾಗಿ ತಮ್ಮ ಅವಶ್ಯಕತೆಗಳಗೆ ಬೇಕಿರುವಷ್ಟೇ ಮೊಬೈಲನ್ನು ಬಳಕೆ ಮಾಡಿಕೊಳ್ಳುವುದನ್ನು ಕಲಿಯುತ್ತಾರೆ.. ಕಲಿಯಬೇಕು ಕೂಡ. ಮಕ್ಕಳು ಹಠ ಮಾಡಿ ಅತ್ತ ಕೂಡಲೇ ಅವರ ಕೈಯಲ್ಲಿ ಮೊಬೈಲ್ ಕೊಡುವುದಂತೂ ಖಂಡಿತವಾಗಿಯೂ ಬೇಡ.
ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ಮಕ್ಕಳೇ ಒಂದು ಆಕರ್ಷಣೆಯಾಗಿದ್ದಾರೆ.. ಪಾಲಕರು ಮಕ್ಕಳು ಹೇಳುವ ಎಲ್ಲ ಮಾತುಗಳಿಗೂ ಅಸ್ತು ಎನ್ನುವಂತಾಗಬಾರದು. ಈಗಾಗಲೇ ಸಾಕಷ್ಟು ಕಳೆದುಕೊಂಡಿರುವ ನಾವುಗಳು ಇನ್ನಷ್ಟು ಕಳೆದುಕೊಳ್ಳುವುದು ಬೇಡ.
ಪ್ರತಿದಿನ ನಿಗದಿತವಾದ ಅತ್ಯುತ್ತಮ ಗುಣಮಟ್ಟದ ಸಮಯವನ್ನು ಮಕ್ಕಳಿಗೆ ನೀಡಿ ಅವರ ಆಟೋಟಗಳಲ್ಲಿ ಪಾಲ್ಗೊಳ್ಳುವ ಪಾಲಕರು ಅಂತಿಮ ದಿನಗಳವರೆಗೂ ಈಗ ಇರುವುದನ್ನಾದರೂ ಉಳಿಸಿಕೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಪಾಲಕರು ಕನಿಷ್ಠ ಅರ್ಧ ಗಂಟೆಯ ಸಮಯವನ್ನು ತಮ್ಮ ಮಕ್ಕಳಿಗಾಗಿ ಅರಿತುಕೊಳ್ಳಲೇಬೇಕು. ಕೇವಲ 30 ನಿಮಿಷಗಳ ಸಮಯ ನಿಮ್ಮ ಮಕ್ಕಳಿಗೆ ಅವರ ಇಡೀ ಬದುಕನ್ನು ಬದಲಿಸಲು ಸಾಧ್ಯವಾಗಬಹುದು. ಕಡ್ಡಾಯವಾಗಿ ಇಂತಿಷ್ಟೇ ಎಂದು ಹೇಳದಿದ್ದರೂ ಅವಶ್ಯಕತೆಗೆ ಅನುಗುಣವಾಗಿ ಮಕ್ಕಳಿಗೆ ಸಮಯವನ್ನು ನೀಡಬೇಕು. ಅಂತಹ ಸಮಯ ಕೊಡುವ ವಿಚಾರವನ್ನು ನಾವು ಬೆಳೆಸಿಕೊಂಡದ್ದೆ ಆದರೆ ನಮ್ಮ ಮಕ್ಕಳ ಬದುಕು ಬಂಗಾರವಾಗುತ್ತದೆ. ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುವ ವ್ಯಕ್ತಿತ್ವವನ್ನು ಪಾಲಕರು ಹೊಂದಿರಬೇಕು.


