ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಸಾವಿರ ಹೆಜ್ಜೆಗಳ ಪಯಣ ಮೊದಲ ಹೆಜ್ಜೆಯಲ್ಲಿ ಶುರುವಾಗುತ್ತದೆ. ಅಂತೆಯೇ ಯಾವುದರಲ್ಲೇ ಆಗಲಿ ಗೆಲುವು ಪಡೆಯುವದರ ಮೂಲಮಂತ್ರ ಎಂದರೆ ಸಂಕಲ್ಪ. ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಎನ್ನುವ ಮಾತೊಂದಿದೆ. ರಸಭರಿತ ಮಾವುಗಳು ಕಣ್ಣಿಗೆ ಬಿದ್ದ ತಕ್ಷಣ ಮನಸ್ಸು ತಿನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತದೆ. ಹಾಗಂತ ಮಾವಿನ ಮರದ ಕೆಳಗೆ ಬಾಯಿ ತೆರೆದು ನಿಂತರೆ ಮಾವಿನ ಹಣ್ಣು ಬಾಯಿಗೆ ಬಂದು ಬೀಳುವುದಿಲ್ಲ. ಮರ ಏರಲೇಬೇಕು. ಅದರ ಹಣ್ಣುಗಳನ್ನು ಕಿತ್ತು ಸವಿಯಬೇಕು. ಇದರರ್ಥ ಹಣ್ಣು ಬೇಕೆಂದವನು ಮರವನ್ನು ಏರಲೇಬೇಕು.
ಮರ ಏರಬೇಕು

ಲಾಲ್ ಬಹದ್ದೂರ ಶಾಸ್ತ್ರೀಯವರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ತಮ್ಮ ಮುಂದೆ ಹೇಳಲೇಬೇಕು. ಅವರು ಚಿಕ್ಕವರಿದ್ದಾಗ ಗೆಳೆಯರೆಲ್ಲ ಕೂಡಿ ಮಾವಿನ ತೋಟಕ್ಕೆ ಲಗ್ಗೆಯಿಟ್ಟು ಹಣ್ಣನ್ನು ಸವಿಯಲು ನಿರ್ಧರಿಸಿದರು. ಅದರಂತೆ ತೋಟಕ್ಕೆ ನುಗ್ಗಿ ಹಣ್ಣನ್ನು ಕೀಳುತ್ತಿರುವಾಗ ತೋಟದ ಮಾಲಿಯು ಬಂದದ್ದು ಗೊತ್ತಾಗಿ ಎಲ್ಲ ಹುಡುಗರು ಕಾಲಿಗೆ ಬುದ್ಧಿ ಹೇಳಿದರು. ಆದರೆ ಬಾಲಕ ಶಾಸ್ತ್ರೀ ಮಾತ್ರ ಅಲ್ಲೇ ನಿಂತಿದ್ದ. ಬಾಲಕನನ್ನು ಮಾಲಿ ಬೈಯ್ಯತೊಡಗಿದ. ಬಾಲಕ ಮಾತ್ರ ಹೆದರಲಿಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಂಡ. ಮಾಲಿ ಬಂದನೆಂದು ಇತರರಂತೆ ಓಡದೇ ಸಂಕಲ್ಪ ಶಕ್ತಿಯಿಂದ ಹಿಂದೆ ಸರಿಯಲಿಲ್ಲ. ತೋಟದಲ್ಲಿ ಹಾಗೆ ನುಗ್ಗಿ ತಿನ್ನುವುದು ತಪ್ಪು ಎಂಬುದು ಅವರಿಗೆ ಗೊತ್ತಿರಲಿಲ್ಲ. ಆದರೆ ಗೊತ್ತಾದ ಮೇಲೆ ಆ ತಪ್ಪನ್ನೆಂದೂ ಮರಳಿ ಮಾಡಲಿಲ್ಲ. ಇದು ಅವರಲ್ಲಿಯ ಸಂಕಲ್ಪ ಶಕ್ತಿಯನ್ನು ಎತ್ತಿ ತೋರಿಸುತ್ತದೆ.
ಸಂಕಲ್ಪ ಎಂದರೇನು?
ಸಂಕಲ್ಪ ಎನ್ನುವುದು ಸಂಸ್ಕೃತ ಶಬ್ದ. ಅಂದರೆ ದೃಢ ನಿರ್ಧಾರ ತೆಗೆದುಕೊಳ್ಳುವುದು ಎಂದರ್ಥ. ಈ ನಿರ್ಧಾರ ಅಥವಾ ನಿರ್ಣಯ ಸಂಪೂರ್ಣ ಮನಸ್ಸಿನದಾಗಿರುತ್ತದೆ. ಇನ್ನೂ ಮುಂದುವರೆದು ಹೇಳಬೇಕೆಂದರೆ ಮುಂಬರುವ ಜೀವನದ ಬಗ್ಗೆ ಈಗಲೇ ಕೈಗೊಳ್ಳುವ ನಿರ್ಧಾರ.
ಯಾವಾಗ ಕೈಗೊಳ್ಳುತ್ತೇವೆ?
ಸಾಮಾನ್ಯವಾಗಿ ಶುಭಕಾರ್ಯ ಮಾಡುವಾಗ ದೇವರ ಮುಂದೆ ನಿಂತು ಸಂಕಲ್ಪ ಮಾಡುವ ಕ್ರಮವನ್ನು ನೋಡಿರುತ್ತೇವೆ. ಮುಂಜಾನೆ ಬೇಗ ಏಳುತ್ತೇನೆ. ವಾಕಿಂಗ್ ಹೋಗುತ್ತೇನೆ. ತೂಕ ಇಳಿಸುತ್ತೇನೆ. ಅಂದಿನ ಅಭ್ಯಾಸ ಅಂದೇ ಮುಗಿಸುತ್ತೇನೆ. ಹಣ ಗಳಿಸುತ್ತೇನೆ. ಚಟ ಬಿಡುತ್ತೇನೆ ಇತ್ಯಾದಿ. ನಾವು ಈ ಸಂಕಲ್ಪಗಳನ್ನು ಹೊಸ ವರ್ಷದ ಸಂದರ್ಭದಲ್ಲಿ ತೆಗೆದುಕೊಳ್ಳುತ್ತೇವೆ. ಹೆಚ್ಚಾಗಿ ಹೊಸ ವರ್ಷದ ದಿನದಿಂದ ಪ್ರಾರಂಭಿಸಬೇಕೆಂದು ಅಂದುಕೊಳ್ಳುತ್ತೇವೆ.
ಚಿಕ್ಕ ಯೋಜನೆ
ಈ ವರ್ಷ ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆಂಬ ಉದ್ದನೆಯ ಪಟ್ಟಿ ನಮ್ಮದು. ಅದನ್ನು ದೇವರ ಮುಂದಿಟ್ಟು ಇವೆಲ್ಲ ನಿರ್ವಿಘ್ನವಾಗಿ ನಡೆಯಬೇಕು ಎನ್ನುವ ಇಚ್ಛೆ ಬೇರೆ. ಯಾವುದೇ ವಿಘ್ನಗಳು ಬಾರದೇ ಸುಸೂತ್ರವಾಗಿ ಸಾಗುವಂತೆ ಮಾಡು ತಂದೆ ಎಂದು ಎರಡು ಕೈ ಜೋಡಿಸಿ ಭಕ್ತಿಯಿಂದ ಬೇಡುತ್ತೇವೆ. ಒಂದು ವಾರದಲ್ಲಿ ಪಟ್ಟಿಯಲ್ಲಿ ಕೆಲವೇ ಕೆಲವು ಉಳಿದುಕೊಳ್ಳುತ್ತವೆ. ಒಂದು ತಿಂಗಳು ಬಿಟ್ಟು ನೋಡಿದರೆ ಮತ್ತೆ ಅದೇ ರಾಗ ಅದೇ ಹಾಡು. ಹಾಗಾಗಬಾರದೆಂದರೆ ಸಂಕಲ್ಪವನ್ನು ನಿತ್ಯ ಹೇಗೆ ಗುರಿಯತ್ತ ಸಾಗುವಿರಿ ಎಂಬುದಕ್ಕೆ ಚಿಕ್ಕದಾದ ಯೋಜನೆ ತಯಾರಿಸಿಕೊಳ್ಳಿ ಅದರಂತೆ ಹೆಜ್ಜೆ ಇಡಿ.
ತ್ರಿವಿಕ್ರಮನ ಛಲ

ಹೀಗೇಕೆ ಹೇಳುತ್ತೇನೆಂದರೆ ಸಂಕಲ್ಪ ಮಾಡಿಕೊಂಡ ಮಾತ್ರಕ್ಕೆ ಅಂದುಕೊಂಡದ್ದು ಆಗಿಬಿಡುವುದಿಲ್ಲ. ಮನಸ್ಸಿನ ನಿರ್ಧಾರ ಜತೆಗೆ ದೈಹಿಕ ಪ್ರಯತ್ನವೂ ಕೈ ಜೋಡಿಸಿದಾಗ ಮಾತ್ರ ಸಂಕಲ್ಪ ಕೈಗೂಡುತ್ತದೆ. ಮನಸ್ಸಿನಲ್ಲಿ ಮಂಡಿಗೆ ತಿಂದರೆ ಪ್ರಯೋಜನವಿಲ್ಲ. ಅಂದುಕೊಂಡಿದ್ದನ್ನು ಸಾಧಿಸಲು ಪ್ರಯತ್ನ ಪಡಲೇಬೇಕು ಬೇರೆ ದಾರಿಯಿಲ್ಲ. ನಮ್ಮ ತಪ್ಪು ಹೆಜ್ಜೆಗಳನ್ನು ಮನಸ್ಸು ಗುರುತಿಸಿ ಪಿಸುಗುಟ್ಟುತ್ತಿರುತ್ತದೆ. ಅದರ ಮಾತಿಗೆ ನಾವು ಕಿವಿಗೊಡುವುದೇ ಇಲ್ಲ. ಕಿವಿಗೊಟ್ಟರೂ ಅದರತ್ತ ಚಿತ್ತ ಹರಿಯುವುದೇ ಇಲ್ಲ. ಆಂತರ್ಯದ ದನಿಗೆ ಕಿವಿಯಾಗಬೇಕು. ಹಾಗಾದಾಗ ಮಾತ್ರ ಸಂಕಲ್ಪ ಈಡೇರುತ್ತದೆ. ಸಂಕಲ್ಪದಲ್ಲಿ ನಿರ್ಧಿಷ್ಟತೆ ಸ್ಪಷ್ಟತೆ ಇರುತ್ತದೆ. ಮತ್ತು ಇದು ಸ್ಥಿರತೆಯನ್ನು ಬೇಡುತ್ತದೆ. ಸ್ಥಿರತೆ ಇರದಿದ್ದರೆ ಸಂಕಲ್ಪ ಕೈಕೊಡುವುದು ಖಚಿತ ಎನ್ನುವುದನ್ನು ಮರೆಯುವಂತಿಲ್ಲ. ತ್ರಿವಿಕ್ರಮನ ಛಲವಿದ್ದರೆ ಮಾತ್ರ ಸಂಕಲ್ಪದ ಬೆಳಕು ಹೊರಚೆಲ್ಲುವುದು.
ನಿರಂತರ ಶ್ರಮ
ಸತತ ಪ್ರಯತ್ನ ಸಾಧಕನ ಮಂತ್ರ ಪ್ರತಿದಿನ ಸಣ್ಣ ಹೆಜ್ಜೆ ಇಡುತ್ತ ಸಾಗಿದರೆ ದೊಡ್ಡ ಸಂಕಲ್ಪವನ್ನೂ ವಾಸ್ತವಕ್ಕೆ ತರಬಲ್ಲೆವು. ಸಂಕಲ್ಪದಿಂದ ಸಕಲವೂ ಸಾಧ್ಯ. ಅಸಾಧ್ಯವೂ ಸಾಧ್ಯ. ಸಂಕಲ್ಪ ಶಕ್ತಿಯನ್ನು ಚಾಲಕ ಶಕ್ತಿಯಾಗಿ ಪರಿಗಣಿಸಬಬಹುದು. ಅಂದ ಹಾಗೆ ಸಂಕಲ್ಪಕ್ಕೆ ಕೇವಲ ಬಯಕೆ ಇದ್ದರೆ ಸಾಲದು ಅದರ ಜತೆಗೆ ಪ್ರಯತ್ನವೂ ಬೇಕು. ಬೇಕಾಗಿದ್ದನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಾಗುವ ದಾರಿ ಎಷ್ಟೇ ದುರ್ಗಮವಾಗಿದ್ದರೂ ಹಿಂದೇಟು ಹಾಕುವಂತಿಲ್ಲ. ಆ ದೃಢ ನಿರ್ಧಾರವೇ ಸಂಕಲ್ಪ ಶಕ್ತಿಯಾಗಿ ಗುರಿ ಮುಟ್ಟುವತನಕ ಕೈ ಬಿಡದೇ ನಡೆಸುವುದು. ಸಂಕಲ್ಪ ಎನ್ನುವುದು ಮಾನಸಿಕವಾಗಿದ್ದರೂ ಅದು ದೈಹಿಕ ಶ್ರಮವನ್ನು ಬಯಸುತ್ತದೆ. ಈಜು ಕಲಿಯಬೇಕೆನ್ನುವನು ಕೆರೆಯ ದಂಡೆಯ ಮೇಲೆ ನಿಂತು ನೋಡಿದರೆ ಈಜು ಬಾರದು. ನೀರಿಗೆ ಇಳಿಯಲೇಬೇಕು ಕೈಕಾಲು ಬಡಿಯಲೇಬೇಕು. ನೀರಿಗಿಳಿದು ಕೈಕಾಲು ಬಡಿಯದಿದ್ದರೆ ಕ್ರಮಿಸಬೇಕಿದ್ದ ದೂರದ ಪಯಣ ಅಲ್ಲೇ ನಿಂತು ಹೋಗುತ್ತದೆ. ಸಂಕಲ್ಪಕ್ಕೆ ಇತಿಶ್ರೀ ಹಾಡಿದಂತಾಗುತ್ತದೆ.
ಮುನ್ನುಗ್ಗಬೇಕು
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ನೌಕರಿ ಪಡೆಯಬೇಕೆನ್ನುವ ವಿದ್ಯಾರ್ಥಿ ಓದದೇ ದೇವರಿಗೆ ಬೇಡಿಕೊಳ್ಳುತ್ತಿದ್ದರೆ ಅವನ ಆಸೆ ಈಡೇರದು. ಇದನ್ನೇ ಸರಳವಾಗಿ ಹೇಳಬೇಕೆಂದರೆ ಭಯಪಟ್ಟರೆ ಬಯಸಿದ್ದು ಸಿಗುವುದಿಲ್ಲ. ಕೇವಲ ಸಂಕಲ್ಪ ಮಾಡಿಕೊಂಡರೆ ಸಾಲದು. ಅದರ ಹಿಂದೆ ಪ್ರಯತ್ನವೆಂಬ ಅಸ್ತ್ರ ಹಿಡಿದು ಮುನ್ನುಗ್ಗಬೇಕು. ಸಂಕಲ್ಪ ದೃಢವಾಗಿದ್ದರೆ ಅವಕಾಶಗಳು ಮನೆ ಬಾಗಿಲಿಗೆ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.
ಕೊನೆ ಹನಿ
ಸಾಧನೆ ಮಾಡಲು ಇದೇ ಮಾಡಬೇಕೆಂದೇನೂ ಇಲ್ಲ. ಮನವು ಉಲ್ಲಾಸದಿಂದ ಮಾಡುವ ಕೆಲಸದಲ್ಲಿ ತೊಡಗುವಂತೆ ಮಾಡಬೇಕು. ಉತ್ತಮ ಹವ್ಯಾಸಗಳನ್ನು ಬಿಟ್ಟೂಬಿಡದೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಆಗ ಅದು ಎಲ್ಲರ ಗಮನ ಸೆಳೆಯುತ್ತದೆ. ಗೆಲುವಿಗೆ ಮುನ್ನುಡಿ ಬರೆಯುತ್ತದೆ. ಬರಬರುತ್ತ ಹೆಸರು ತಂದುಕೊಡುತ್ತದೆ. ಅನೇಕ ರಂಧ್ರಗಳಿಂದ ಕೂಡಿರುವ ಕೊಳಕನ್ನು ಜಾಣ್ಮೆಯಿಂದ ಬಳಸಿದರೆ ಮಧುರ ನಾದ ಹೊರಡಿಸಲು ಸಾಧ್ಯ. ಮನಸ್ಸು ಸಹ ಅಷ್ಟೇ. ಹಿಡಿತಕ್ಕೆ ತೆಗೆದುಕೊಂಡರೆ ಸಂಕಲ್ಪ ಸಿದ್ಧಿಯಾಗುವುದು. ಕೆಲವೊಮ್ಮೆ ಹೋಗುವ ದಾರಿ ಹಿಡಿಸದೇ ಇರಬಹುದು. ಮಾಡುವ ಕಾರ್ಯ ಮನಸ್ಸಿಗೆ ಕಷ್ಟ ಅನ್ನಿಸಬಹುದು. ನೀವು ಮಾಡಿದ ಸಂಕಲ್ಪ ವಜ್ರದ ಹಾಗಿದ್ದರೆ ಆಕಾಶಕ್ಕೆ ಏಣಿಯನ್ನು ಹಾಕಬಹುದು. ಕಡಲಾಳದಲ್ಲಿರುವ ಮುತ್ತು ರತ್ನಗಳನ್ನು ಹೆಕ್ಕಿ ತರಬಹುದು. ಹಾಗಾದರೆ ತಡವೇಕೆ ಸಂಕಲ್ಪ ಗಟ್ಟಿಯಾಗಿಸೋಣವಲ್ಲವೇ?


