ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್ ಎಮ್ ಇಟ್ಟಿ
ಜಮಖಂಡಿ: ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆಯಿಂದ ಮಣ್ಣಿನ – ಫಲವತ್ತತೆ ಹಾಳಾಗುವುದರ ಜೊತೆಗೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬುದನ್ನು ಮನಗಂಡಿರುವ ರೈತರು, ಈಗ ಮಣ್ಣಿನ ಫಲವತ್ತತೆ ಹೆಚ್ಚಿಸುವ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಒದಗಿಸುವ ಸಗಣಿ ಗೊಬ್ಬರ ಬಳಕೆ ಮಾಡಲು ಮುಂದಾಗುತ್ತಿದ್ದಾರೆ.
ಪ್ರತಿ ವರ್ಷ ರೈತರು ಯುಗಾದಿ ನಂತರ ಹೊಲಗಳನ್ನು ಹಸನು ಮಾಡಿ ಸಗಣಿ ಗೊಬ್ಬರ ಹಾಕುವುದು ವಾಡಿಕೆ. ಅದರಂತೆ ಸಧ್ಯ ಯುಗಾದಿ ಹಬ್ಬ ಮುಗಿದಿರುವುದರಿಂದ ರೈತರು ಹೊಲಗಳಿಗೆ ಸಗಣಿ ಗೊಬ್ಬರ ಹಾಕಿ, ಬಿತ್ತನೆಗೆ ಅಣಿ ಮಾಡಿ ಮಳೆಗಾಗಿ ಕಾಯುತ್ತಾರೆ.
ಹಿಂದೆ ಊರುಗಳಲ್ಲಿ ತಿಪ್ಪೆಗಳು ಇರುತ್ತಿದ್ದವು. ರೈತರು ಜಾನುವಾರುಗಳ ಸಗಣಿ, ಮೂತ್ರ ಸೇರಿದಂತೆ ಮತ್ತಿತರ ಕಸ-ಕಡ್ಡಿಗಳನ್ನು ಪ್ರತಿನಿತ್ಯ ತಿಪ್ಪೆಗೆ ಹಾಕುತ್ತಿದ್ದರು. ತಿಪ್ಪೆಯಲ್ಲಿನ ತ್ಯಾಜ್ಯವನ್ನು ರೈತನ ಮಿತ್ರ ಎಂದೇ ಹೇಳಲಾಗುವ ಎರೆ ಹುಳುಗಳು ತಿಂದು ಉತ್ತಮವಾದ ಗೊಬ್ಬರವನ್ನು ತಯಾರಿಸುತ್ತಿದ್ದವು. ಹೀಗೆ ತಯಾರಾದ ಗೊಬ್ಬರವನ್ನು ಪ್ರತಿ ವರ್ಷ ರೈತರು ಹೊಲಗಳಿಗೆ ಹಾಕುತ್ತಿದ್ದರು. ಇಂಥ ಗೊಬ್ಬರ ಭೂಮಿಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತಿತ್ತು.
ಬಹಳಷ್ಟು ಜನರು ತಮ್ಮ ಮನೆಗಳಲ್ಲಿದ ದನಕರುಗಳ ಸಾಕಾಣಿಕೆ ಕಡಿಮೆ ಯಾಗಿರುವುದರಿಂದ ತಿಪ್ಪೆಗಳು ಕಡಿಮೆಯಾಗಿವೆ. ಹೀಗಾಗಿ ಸಗಣಿ ಗೊಬ್ಬರಕ್ಕೆ ಬೇಡಿಕೆ ಬಂದಿದ್ದು, ಅದರ ಬೆಲೆ ಗಗನಕ್ಕೇರಿದೆ. ಮೊದಲು ಒಂದು ಟ್ರ್ಯಾಕ್ಟರ್ ಸಗಣಿ ಗೊಬ್ಬರಕ್ಕೆ 1 ಸಾವಿರ ದಿಂದ ₹1,500 ಇತ್ತು. ಈಗ, ₹3 ಸಾವಿರದಿಂದ ₹3.500 ವರೆಗೆ ಮಾರಾಟವಾಗುತ್ತಿದೆ.
ಸಾವಯವ ಗೊಬ್ಬರ ಬಳಕೆಯಾಗಲಿ
ರೈತರು ಸಾವಯವ ಹಾಗೂ ಸಗಣಿ ಗೊಬ್ಬರ ಬಳಸುವುದರಿಂದ ಭೂಮಿಯಲ್ಲಿ ಲಘು ಪೋಷಕಾಂಶಗಳು ಹೆಚ್ಚಾಗಿ, ಭೂಮಿಯ ಫಲವತ್ತತೆ ಜಾಸ್ತಿಯಾಗುತ್ತದೆ. ಜತೆಗೆ ಭೂಮಿಯಲ್ಲಿ ಹೆಚ್ಚು ನೀರು ಇಂಗಿಸುವ ಕೆಲಸ ಮಾಡುತ್ತದೆ. ಹೀಗಾಗಿ ರೈತರು ಹೆಚ್ಚಾಗಿ ಸಾವಯವ ಹಾಗೂ ಸಗಣಿ ಗೊಬ್ಬರ ಬಳಸಬೇಕು ಎಂದು ಜಮಖಂಡಿ ತಾಲ್ಲೂಕು ಸಾವಳಗಿ ವಲಯ ಕೃಷಿ ಅಧಿಕಾರಿ ರವೀಂದ್ರ ತುಳಸಿಗೇರಿ ಸಲಹೆ ನೀಡಿದರು.
“ಹಿಂದಕ ಹಳ್ಳ್ಯಾಗ ಎಲ್ಲಾರ ಮನ್ಯಾಗ ಸಾಮಾನ್ಯವಾಗಿ ಮೂರು ನಾಲ್ಕು ದನಕರುಗಳು ಇರತ್ತಿದ್ದವು. ಮನ್ಯಾಗ 8-10 ಎತ್ತು. ದನಕರಗಳು ಇರತಿದ್ದು, ಆದ್ರ ಈಗ ಎಲ್ಲಾರೂ ದನಕರ ಸಾಕೋದ ಬಿಟ್ಟಾರ. ಹಿಂಗಾಗಿ ತಿಪ್ಪಿನೂ ಇಲ್ಲ ಸಗಣಿ ಗೊಬ್ಬರನೂ ಇಲ್ಲರೀ.”
– ಸುರೇಶ ದಾನಗೌಡ
ಚಿಕ್ಕಪಡಸಲಗಿ ಗ್ರಾಮದ ಪ್ರಗತಿಪರ ರೈತ

