ನಗರಸಭೆ ಹಾಗೂ ವಿಡಿಎ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಪ್ರಶ್ನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ನಡೆದ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ವಿದ್ಯುತ್ ಅವಘಢ ಸಂಭವಿಸಿದ ಘಟನೆಗೆ ಯಾರು ಹೊಣೆ? ಎಂದು ನಗರಸಭೆ ಹಾಗೂ ವಿಡಿಎ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಪ್ರಶ್ನಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಲ್ಕೈದು ವರ್ಷಗಳ ಹಿಂದೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲು ನೂರಾರು ಕೋಟಿ ರೂ. ತಂದಿದ್ದೇನೆ ಎಂದು ಜಂಬ ಕೊಚ್ಚಿಕೊಂಡ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಕಾರ್ಯ ಮಾಡಿದ್ದರೆ ಜೀವ ಉಳಿಯುತ್ತಿತ್ತಲ್ಲವೇ? ಕೇವಲ ಮಾತನಾಡುವುದು ಮಾತ್ರ ನಮ್ಮ ಶಾಸಕರಿಗೆ ಗೊತ್ತಿದೆ ಎಂದು ಪರಶುರಾಮಸಿಂಗ್ ರಜಪೂತ ಕಿಡಿಕಾರಿದ್ದಾರೆ.
ಈ ವಿಷಯದಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ, ಆದರೆ ಓರ್ವ ಯುವಕ ಅಸುನೀಗಿರುವುದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ, ಹೆತ್ತ ಮಗುವನ್ನು ಕಳೆದುಕೊಂಡ ಪಾಲಕರ ರೋಧನ ನೋಡಲಾಗುತ್ತಿಲ್ಲ, ಕೇವಲ ಹೇಳಿಕೆ ನೀಡುವಲ್ಲಿಯೇ ನಮ್ಮ ಶಾಸಕರು ಕಾಲಹರಣ ಮಾಡುವಲ್ಲಿ ತೊಡಗಿದ್ದಾರೆ, ನೂರಾರು ಕೋಟಿ ರೂ. ತಂದು ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆ ಮಾಡುವೆ ಎಂದು ಜಂಬ ಕೊಚ್ಚಿಕೊಂಡಿದ್ದರು, ಅದನ್ನು ಪೂರ್ಣಗೊಳಿಸಲು ಎಷ್ಟು ವರ್ಷ ಬೇಕಿತ್ತು? ಹೇಳಿಕೆ ನೀಡುವುದನ್ನು ಬಿಟ್ಟು ತಮ್ಮ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಿದರೆ ಜೀವ ಉಳಿಯುತ್ತಿತ್ತು ಎಂದು ಹೇಳಿದ್ದಾರೆ.
ಸರ್ಕಾರ ಸಹ ಈ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೂ ಪತ್ರ ಬರೆಯುವೆ ಎಂದು ರಜಪೂತ ಹೇಳಿದ್ದಾರೆ.