ಹೊತ್ತಿಗೆ ಹೂರಣ(ಡಾ.ಶ್ರೀನಿವಾಸ ದೊಡ್ಡಮನಿ ಅವರ ಕೃತಿ ಅವಲೋಕನ)

ಲೇಖನ
– ಮಲಿಕ್ ಎಲ್ ಜಮಾದಾರ
ಉಪನ್ಯಾಸಕರು
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಈ ಜಗತ್ತಿನಲ್ಲಿ ತಾಯಿಯ ಹೊರತಾಗಿಲ್ಲ ಅದು ಜನ್ಮ ನೀಡಿದ ತಾಯಿ ಮತು ಎರಡನೇ ತಾಯಿಯೆಂದು ಕರೆಯಲ್ಪಡುವ ಭೂತಾಯಿ ಅಂತಹ ಭೂತಾಯಿ ಎಂಬ ನಾಟಕದ ಮೂಲಕ ಪ್ರಕೃತಿ ಪ್ರೇಮವನ್ನು ಬಿಂಬಿಸುವ ಕಾರ್ಯ ಲೇಖಕರು ಮಾಡಿದ್ದಾರೆ.ಈ ಭೂತಾಯಿ ನಾಟಕವು ನಮ್ಮ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಹಿಂದೆ ಸೂಕ್ತ ಮಾಧ್ಯಮವಾಗಿ ಅಭಿನಯವನ್ನು ರೂಢಿಸಿಕೊಂಡದ್ದು ಸಾಕ್ಷಿಯಾಗಿದೆ. ಅದೇ ಮುಂದೆ ನಾಟಕ ಪ್ರಕಾರವಾಗಿ ಸಾಹಿತ್ಯದಲ್ಲಿ ಬಳಕೆಯಾಯಿತು. ಸಾಹಿತ್ಯ ಪ್ರಕಾರದಲ್ಲಿ ಪರಿಚಿತವಾದ ನಾಟಕವೂ ಒಂದು ಕಾಲದಲ್ಲಿ ರಂಗಭೂಮಿಯಾಗಿ ಬೃಹದಾಕಾರದಲ್ಲಿ ಬೆಳೆದಿರುವುದನ್ನು ನಾವು ಕಾಣಬಹುದು. ಅದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಕಂಪನಿ ನಾಟಕ ಮಂಡಳಿಗಳು ರಂಗಭೂಮಿ ಕಾರ್ಯದಲ್ಲಿ ತೊಡಗಿರುವುದೇ ಸಾಕ್ಷಿ. ಅಂತಹ ಸಾಹಿತ್ಯ ಪ್ರಕಾರದಲ್ಲಿ ಆತ್ಮೀಯರಾದ ಸಹದ್ಯೋಗಿ ಡಾ.ಶ್ರೀನಿವಾಸ ದೊಡ್ಡಮನಿಯವರ ವಿರಚಿತ 'ಭೂತಾಯಿ' ಎಂಬ ನಾಟಕವನ್ನು ಬರೆದಿದ್ದಾರೆ. ಈ ನಾಟಕದಲ್ಲಿ ಒಟ್ಟು ಏಳು ದೃಶ್ಯಗಳು ಒಳಗೊಂಡಿದ್ದು,ಇವರ ನಾಟಕವು ಸಮಾಜದ ಸ್ವಾಸ್ಥ್ಯವನ್ನು ಗುರಿಯಾಗಿಟ್ಟುಕೊಂಡು ರಚಿಸಿರುವ ಕಥಾವಸ್ತು ಮಾನವ ಭೂಮಿಯ ಮೇಲೆ ಮತ್ತು ಸಮಾಜದಲ್ಲಿ ಸುಖಶಾಂತಿ ಸಮಾಧಾನದಿಂದ ಬದುಕಬೇಕಾದರೆ ಉತ್ತಮ ಪರಿಸರದ ಅವಶ್ಯಕತೆಯಿದೆ. ಅಂತಹ ಕಾಳಜಿಯನ್ನು ಈ ನಾಟಕದ ಮೂಲಕ ತಿಳಿಸಲು ಪ್ರಯತ್ನಿಸಿದ್ದಾರೆ ನಿಜಕ್ಕೂ ಶ್ಲಾಘನೀಯವಾದದ್ದು.
ಪಾತ್ರವರ್ಗ ಪರಿಚಯ:
ಶಿವ
ಪಾರ್ವತಿ
ನಾರದ
ವಾಯುರಾಜ
ವೃಕ್ಷರಾಜ
ಭೂತಾತಿ
ಗಣ ಸಮೂಹ
ಭೂತಾಯಿ ನಾಟಕದಲ್ಲಿ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಅಲ್ಲದೆ ನಾಟಕದ ಪಾತ್ರಗಳು ಪುರಾಣದ ಪಾತ್ರಗಳಂತೆ ಚಿತ್ರಿತವಾಗಿದ್ದು, ದೇವರುಗಳ ಕಲ್ಪನೆಯ ಮೂಲಕ, ಭೂಲೋಕದ ಪರಿಸರ ವ್ಯವಸ್ಥೆಯನ್ನು ಶಿವನ ಪಾತ್ರದ ಮೂಲಕ ತುಲನಾತ್ಮಕವಾಗಿ ವಿಮರ್ಶಿಸಿ ಮಾನವನ ದುರ್ವತ್ರನೆಯಿಂದ ಪರಿಸರದ ಮೇಲಾಗುವ ಅನಾಹುತಗಳ ಕುರಿತು ಮಾರ್ಮಿಕವಾಗಿ ತಿಳಿಸಲು ಯತ್ನಿಸಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ನಾಡಕವು ವಾಸ್ತವಿಕತೆಗೆ ಅನುಗುಣವಾಗಿ ರಚನೆಯಾಗಿದ್ದು ಇಂದಿನ ಆಧುನಿಕ ಯುಗದಲ್ಲಿ ಪರಿಸರದ ವಿನಾಶ ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ಮುಂದಿನ ದಿನಮಾನಗಳಲ್ಲಿ ಕುಡಿಯುವ ನೀರಿಗೂ ಪರಿತಪಿಸಬೇಕಾದ ದುಃಸ್ಥಿತಿಯು ಒದಗಬಹುದು ಎಂದು ಎಚ್ಚರಿಸಿದ್ದಾರೆ.
ಪ್ರಾಚೀನ ಕಾಲದಿಂದಲೂ ಮಾನವ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧವಿರುವುದು ಐತಿಹಾಸಿಕವಾಗಿ ತಿಳಿದು ಬರುತ್ತದೆ. ಮಾನವನು ಪಕೃತಿಯಾರಾಧಕನಾಗಿದ್ದ ಎಂಬುದಕ್ಕೆ ಅನೇಕ ನಾಗರಿಕತೆಗಳ ಬೆಳವಣಿಗೆಯಿಂದ ತಿಳಿದುಬರುತ್ತದೆ. ಗಂಗೆಯನ್ನು, ವೃಕ್ಷವನ್ನು ದೇವರಂತೆ ಆರಾಧಿಸುತ್ತಿದ್ದ ಮಾನವನು ತನ್ನ ಸ್ವಾರ್ಥ ಬದುಕಿಗಾಗಿ ಇಡೀ ಪರಿಸರವನ್ನೇ ಹಾಳು ಮಾಡಿದನು. ಇದರಿಂದಾಗಿ ದೇವರ ಸ್ವರೂಪದಲ್ಲಿರುವ ಪೃಥ್ವಿ, ಗಂಗೆ, ವಾಯುಗಳೇ ಪಡುವ ವ್ಯಥೆಯನ್ನು ಬಿಂಬಿಸುವ ದೃಶ್ಯಗಳನ್ನು ನೋಡಿದಾಗ ಪರಿಸರದಲ್ಲಾದ ಕಲುಶಿತತೆ ಮತ್ತು ಅದರಿಂದ ಉದ್ಭವಿಸುವ ರೋಗಗಳ ಕಲ್ಪನೆ ಅದ್ಭುತವಾಗಿ ಮೂಡಿಬಂದಿದೆ.
ಪ್ರಕೃತಿಯು ನಮ್ಮ ಎರಡನೇ ತಾಯಿ ಭೂತಾಯಿ ಪಾತ್ರದಲ್ಲಿ ಮಾತೃಹೃದಯತೆಯನ್ನು ಎತ್ತಿ ತೋರುತ್ತದೆ. ಮಾನವನು ಜೀವಿತಾವಧಿಯಲ್ಲಿ ಎಷ್ಟೇಲ್ಲಾ ಅನಾಚಾರ, ಅನ್ಯಾಯ ಮಾಡಿದರೂ ಅವನ ಸಾವಿನ ನಂತರ ಅವನನ್ನು ತನ್ನ ಮಗನಂತೆ ಭಾವಿಸಿ ಅವನ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಾಳೆ. ಇದು ತಾಯಿಯ ವಿಶಾಲ ಹೃದಯತೆಯನ್ನು ಪ್ರೇಕ್ಷಕ ವರ್ಗಕ್ಕೆ ಮನಮುಟ್ಟುವಂತೆ ತಿಳಿಸುತ್ತದೆ. ನಾಟಕದ ಕೊನೆಗೆ ಶಿವ-ಪಾರ್ವತಿಯರೆದರು ದೇವತೆಗಳ ತಪ್ಪನ್ನು ಎತ್ತಿ ತೋರಿಸುತ್ತಾ, ತಪ್ಪನ್ನು ಎಲ್ಲರು ಮಾಡುತ್ತಾರೆ ಅದನ್ನು ತಿದ್ದಿಕೊಳ್ಳುವವನೆ ಉತ್ತಮನಾಗುತ್ತಾನೆ ಎಂಬ ಸಂದೇಶವನ್ನು ಆ ತಾಯಿಯ ಪಾತ್ರವು ಪ್ರತಿನಿಧಿಸುತ್ತದೆ. ಕೊನೆಗೆ ತನ್ನ ಕೋಪದ ಕುರಿತು ಹೇಳುತ್ತಾ, ಆತ್ಮವಿಮರ್ಶೆ ಮಾಡಿಕೊಳ್ಳುವುದು ನಾಟಕಕ್ಕೆ ಕಳಸವಿಟ್ಟಂತಿದೆ. ಒಟ್ಟಿನಲ್ಲಿ ನಾಟಕವು ಪ್ರಕೃತಿಯ ಕಾಳಜಿಯನ್ನು ಮನಮುಟ್ಟುವಂತಿದೆ. ನಾಟಕಕಾರರು ಸೂಕ್ಷ್ಮಸಂವೇದನೆಗಳು ನಾಟಕದುದ್ದಕ್ಕೂ ಕಂಡುಬರುತ್ತದೆ. ಸಂಭಾಷಣೆಗಳಲ್ಲಿ ವೈಚಾರಿಕತೆ ಎದ್ದು ತೋರುತ್ತದೆ. ಪ್ರತಿಯೊಂದು ಸನ್ನಿವೇಶವೂ ಚನ್ನಾಗಿ ಮೂಡಿಬಂದಿದೆ.
ನಾಟಕ ರಚನಾ ತಂತ್ರವೂ ಕೂಡ ವೈಶಿಷ್ಟ್ಯವಾಗಿದೆ, ನಾಟಕ ಆರಂಭವಾಗುವುದು ದೇವಲೋಕದ ಶಿವನ ಸನ್ನಿಧಿಯಲ್ಲಿ ಪಾರ್ವತಿಯು ಭೂಲೋಕ ನೋಡಬೇಕೆಂಬ ಆಸೆಯನ್ನು ಶಿವನ ಮುಂದೆ ವ್ಯಕ್ತಪಡಿಸುವ ಮೂಲಕ ನಾಟಕ ಪ್ರಾರಂಭವಾಗುತ್ತದೆ. ದೇವರುಗಳ ಪಾತ್ರದ ಮೂಲಕ ಭೂಲೋಕದಲ್ಲಿ ನಡೆಯುವ ಅನ್ಯಾಯ, ಮೋಸ, ಸ್ವಾರ್ಥ ಬದುಕಿನ ಚಿತ್ರವನ್ನು ಎತ್ತಿ ತೋರಿಸುವ ತಂತ್ರ ನವೀನವಾಗಿದೆ. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಪ್ರಕಥಿ ವಿನಾಶಗೊಳಿಸುತ್ತಿದ್ದಾನೆ ಎಂಬುದನ್ನು ಮಾರ್ಮಿಕವಾಗಿ ತೋರಿಸಿದ್ದಾರೆ.ಒಟ್ಟಾರೆಯಾಗಿ ನಾಟಕದ ಸ್ವರೂಪವು, ಏಕಾಂಕ ನಾಟಕದಂತೆ ರಚನೆಯಾಗಿದ್ದು, ಕಂಪನಿ ನಾಟಕಗಳ ತಂತ್ರಗಳನ್ನು ಇದರಲ್ಲಿ ಬಳಸಿಕೊಂಡಿದ್ದಾರೆ. ಶಿಷ್ಟ ಭಾಷಾ ಶೈಲಿ ಬಳಕೆಯಿದ್ದು, ಸರಳ ಸಂಭಾಷಣೆಗಳಿಂದ ಕೂಡಿದೆ. ಒಟ್ಟಿನಲ್ಲಿ ‘ಭೂತಾಯಿ’ ನಾಟಕವು ಚೆನ್ನಾಗಿ ಮೂಡಿಬಂದಿದ್ದು, .ಸಮಾಜದಲ್ಲಿನ ಪ್ರತಿಯೊಬ್ಬರಲ್ಲಿಯೂ ಪ್ರಕೃತಿಯ ಪ್ರೇಮವನ್ನು ಮೈಗೊಡಿಸಿಕೊಳ್ಳಬೇಕು. ಹಾಗೂ ಇದು ರಂಗಭೂಮಿಯ ಮೇಲೂ ಪ್ರದರ್ಶನಗೊಂಡು ಸಮಾಜದಲ್ಲಿನ ಜನರನ್ನು ಜಾಗೃತಗೊಳಿಸಲಿ ಎಂದು ಆಶಿಸುತ್ತೇನೆ.ಡಾ.ಶ್ರೀನಿವಾಸ ದೊಡ್ಡಮನಿಯವರಿಂದ ಇಂಥಹ ಹಲವಾರು ಸಮಾಜವನ್ನು ಜಾಗೃತಗೊಳಿಸುವ ಮೌಲ್ಯಯುತ ಕೃತಿಗಳು ರಚನೆಯಾಗಲಿ ಎಂದು ನಾನು ಮನಪೂರ್ವಕವಾಗಿ ಶುಭಹಾರೈಸುತ್ತೇನೆ.
ಲೇಖಕರ ಪರಿಚಯ
ಡಾ.ಶ್ರೀನಿವಾಸ ದೊಡ್ಡಮನಿ ಕನ್ನಡ ಸಹಾಯಕ ಪ್ರಾಧ್ಯಾಪಕರು
ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ