ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪ್ರತಿಯೊಬ್ಬರ ಜೀವನದಲ್ಲಿ ಬರುವ ವಿವಿಧ ಸಂಸ್ಕಾರಗಳಲ್ಲಿ ಮದುವೆ ಎಂಬ ಸಂಸ್ಕಾರವು ಪ್ರಮುಖ ಘಟ್ಟವಾಗಿದೆ. ಮಠ-ಮಾನ್ಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಅನೇಕ ಶ್ರೀಗಳ ಸಾನಿಧ್ಯದಲ್ಲಿ ಮದುವೆಯಾಗುವ ಸೌಭಾಗ್ಯ ಸಿಗುತ್ತದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ತಾಲೂಕಿನ ಮುತ್ತಗಿ ಗ್ರಾಮದ ಸಂಸ್ಥಾನ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ ೮೭ನೇ ಪುಣ್ಯಾರಾಧನೆಯ ಜಾತ್ರಾಮಹೋತ್ಸವದಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆ, ಸಾಮೂಹಿಕ ವಿವಾಹ ಹಾಗೂ ಪ್ರವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನ ಬದುಕಿನಲ್ಲಿ ನಾಮಕರಣ, ಲಿಂಗಧಾರಣೆ, ಜಡೆ ತೆಗೆಯುವ ಕಾರ್ಯ, ಸೀಮಂತ ಕಾರ್ಯ, ಅಂತಿಮ ಕಾರ್ಯ ಸೇರಿದಂತೆ ವಿವಿಧ ಸಂಸ್ಕಾರಗಳು ನಿರಂತರವಾಗಿ ನಡೆಯುತ್ತವೆ. ಇದರಲ್ಲಿ ಮದುವೆ ಸಂಸ್ಕಾರ ಬಹುಪ್ರಮುಖವಾಗಿದೆ. ಸಂಸ್ಕಾರಗಳು ಹಿಂದು ಪರಂಪರೆಯಲ್ಲಿ ಶ್ರೇಷ್ಠವಾಗಿದೆ ಎಂದರು.
ಹಿಂದುಗಳಿಗೆ ಮಠ-ಮಾನ್ಯಗಳು ಆತ್ಮವಿದ್ದಂತೆ. ಮಠ-ಮಾನ್ಯಗಳಿಂದ ಜನರಿಗೆ ಆಧ್ಯಾತ್ಮಿಕ ಸಿಗುವ ಮೂಲಕ ಜೀವನಕ್ಕೆ ನೆಮ್ಮದಿ-ಸುಖ ಸಿಗುತ್ತದೆ. ಯುಗಾದಿ ಹಬ್ಬದ ನಂತರ ಎಲ್ಲ ಊರಿನಲ್ಲಿ ಜಾತ್ರೆ ನಡೆಯುತ್ತವೆ. ಜಾತ್ರೆಗಳು ಎಲ್ಲರ ಬದುಕಿನ ಸ್ತಂಭವಾಗಿವೆ. ಎಲ್ಲ ಜನರಿಗೆ ಆನಂದ ತರುತ್ತವೆ ಎಂದರು.
ಸಾನಿಧ್ಯ ವಹಿಸಿದ್ದ ಜಾಲಹಳ್ಳಿಯ ಬ್ರಹ್ಮನ್ಮಠದ ವಿದ್ಯಾಮಾನ ಶಿವಭಿನವ ಜಗರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಹತ್ಯಾಗ ಮಾಡುವ ಮುನ್ನ ಯಾವ ರೀತಿಯಾಗಿ ಬದುಕುಬೇಕೆಂಬವದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಆಧ್ಯಾತ್ಮಿಕ ಅಂಶಗಳನ್ನು ಅರಿತುಕೊಂಡು ನಡೆದರೆ ಜೀವನ ಪಾವನವಾಗುತ್ತದೆ. ಮಹಾತ್ಮರ ಚರಿತೆಯನ್ನು ನೋಡಿದಾಗ ಮಹಾತ್ಮರು ದೇಹತ್ಯಾಗ ಮಾಡಿದರೂ ಅವರ ಆತ್ಮ ಯಾವಾಗಲು ಪ್ರಕಾಶಿಸುತ್ತಿರುತ್ತದೆ. ಈ ಮೂಲಕ ಭಕ್ತರಿಗೆ ಅವರ ಶುಭಾಶೀರ್ವಾದ ಸದಾ ಸಿಗುತ್ತದೆ. ಇಲ್ಲಿನ ಶ್ರೀಮಠದ ಲಿಂ.ರುದ್ರಮುನಿ ಶಿವಾಚಾರ್ಯರು ದೇಹತ್ಯಾಗ ಮಾಡಿ ೮೭ ವರ್ಷವಾದರೂ ಸಹ ಅವರ ಆತ್ಮ ಇಂದಿಗೂ ಭಕ್ತರಿಗೆ ಆಶೀರ್ವಾದ ನೀಡುತ್ತಿದೆ ಎಂದರು.
ನೇತೃತ್ವ ವಹಿಸಿದ್ದ ಶ್ರೀಮಠದ ರುದ್ರಮನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕ್ರತಿ, ಪರಂಪರೆ ಸನಾತನವಾಗಿದೆ. ಪ್ರತಿಯೊಬ್ಬರಿಗೆ ಸಂಸ್ಕಾರ ಬಹುಮುಖ್ಯವಾಗಿದೆ. ಧಾರ್ಮಿಕತೆಯಿಂದ ನಮಗೆ ಸಂಸ್ಕಾರ, ಧರ್ಮವಂತ-ನೀತಿವಂತರಾಗಲು ಪೂರಕವಾಗುತ್ತದೆ. ಇದರಿಂದಾಗಿ ಮನಸ್ಸು ಪರಿವರ್ತನೆಯಾಗಿ ಜೀವನ ಸುಂದರವಾಗುತ್ತದೆ. ಜೀವನದಲ್ಲಿ ಎಂದಿಗೂ ಬೇರೆಯವರ ಬಗ್ಗೆ ಮಾತನಾಡದೇ, ಕಾಲಹರಣ ಮಾಡದೇ ಮಹಾತ್ಮರ ಸಂದೇಶ ವಾಣಿ, ಪುಣ್ಯಕ್ಷೇತ್ರಗಳ ದರ್ಶನ ಮಾಡುವುದರಿಂದ ನಿಜವಾಗಿ ಸಂಸ್ಕಾರಯುತ ಜೀವನ ನಮ್ಮದಾಗುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಮುಖಂಡ ರಮೇಶ ಸೂಳಿಭಾವಿ ಇತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಿಕೋಟಾದ ಶಿವಬಸವ ಶಿವಾಚಾರ್ಯ ಸ್ವಾಮೀಜಿ, ಕೊಡೆಕಲ್ಲಮಠದ ಈರಸಂಗಯ್ಯ ಸ್ವಾಮೀಜಿ, ಪ್ರವಚನಕಾರ ತಾಳಿಕೋಟಿಯ ಮಹಾಂತದೇವರು, ಮುಖಂಡರಾದ ಸುರೇಶ ಹಾರಿವಾಳ, ಪ್ರೇಮಕುಮಾರ ಮ್ಯಾಗೇರಿ ಇತರರು ಇದ್ದರು. ವೈ.ಕೆ.ಪತ್ತಾರ ಪ್ರಾಸ್ತವಿಕವಾಗಿ ಮಾತನಾಡಿದರು. ಆರ್.ಬಿ.ಬ್ಯಾಕೋಡ ಸ್ವಾಗತಿಸಿ,ನಿರೂಪಿಸಿದರು. ಸಾಮೂಹಿಕ ವಿವಾಹದಲ್ಲಿ ಒಂದು ಜೋಡಿ ನವದಾಂಪತ್ಯಕ್ಕೆ ಕಾಲಿಟ್ಟಿತ್ತು. ಇದೇ ಸಂದರ್ಭದಲ್ಲಿ ಜಾತ್ರೆಗೆ ಸಹಕಾರ ನೀಡಿದವರನ್ನು ವಿವಿಧ ಮಹನೀಯರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.