ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜನವಾಣಿ ಬೇರು ಕವಿವಾಣಿ ಹೂ. ಶಿಷ್ಯ ಸಾಹಿತ್ಯಕ್ಕೆ ಮೂಲ ಜನಪದ ಸಾಹಿತ್ಯ ಜನಪದ ಹಾಡು -ಕಥೆಗಳಲ್ಲಿ ಜೀವನಾನುಭವವಿದೆ. ಅನಕ್ಷರಸ್ಥರಿಂದ ರಚಿಸಲ್ಪಟ್ಟಿದ್ದರೂ ಅದು ಸಂಸ್ಕೃತಿಯ ವೈಭವವನ್ನು ಹೊಂದಿದೆಯೆಂದು ಜನಪದ ಕಲೆಗಾರ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಹೇಳಿದರು.
ಅವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಡಾ. ಎಂ.ಎನ್. ವಾಲಿ ಪ್ರತಿಷ್ಠಾನ ಮತ್ತು ಡಾ. ಸರಸ್ವತಿ ಚಿಮ್ಮಲಗಿ ಅವರ ಯುಗದರ್ಶಿನಿ ಪ್ರತಿಷ್ಠಾನಗಳ ದತ್ತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ವೀರಶೈವ ಲಿಂಗಾಯತ ಸಮುದಾಯ ಭವನದ ಜ್ಞಾನಜ್ಯೋತಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ, ಜನಪದ ಹಾಡಿಕೆ, ಸಾಧಕರಿಗೆ ಸನ್ಮಾನಗಳ ಕಾರ್ಯಕ್ರಮ ಜರುಗಿದವು. ಪ್ರೊ. ಲಕ್ಷ್ಮಿ ಅನುಭವ ಮಂಟಪದಲ್ಲಿ ಶಿವಶರಣೆಯರು ವಿಷಯ ಕುರಿತು ಉಪನ್ಯಾಸ ನೀಡಿದರು. ವೇದಕಾಲದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ವಿದ್ದಿದ್ದಿಲ್ಲ. ಹೆರಿಗೆ ಯಂತ್ರದಂತೆ ಯಾತನೆ ಅನುಭವಿಸುತ್ತಿದ್ದ ಹೆಣ್ಣಿಗೆ ಗಂಡಿಗೆ ಸಮಾನವಾದ ಸ್ಥಾನ ನೀಡಿ ದೈವತ್ವಕ್ಕೇರಿಸಿದ ಖ್ಯಾತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ಹೇಳಿದರು.
ತಾಳಿಕೋಟಿಯ ಶಿವಲೀಲಾ ಮುರಾಳ ಅವರು ಜಾನಪದಲ್ಲಿ ಗರತಿ ವಿಷಯ ಕುರಿತು ಉಪನ್ಯಾಸ ನೀಡಿದರು. ಇಂದು ತವರಿನ ಬುತ್ತಿ ಬದನೆಕಾಯಿ ಪಲ್ಲೆ, ಕಾರೆಳ್ಳು ಹಿಂಡಿ, ಕೆನೆಮೊಸರು ಮಾಯವಾಗಿ ಅವುಗಳ ಸ್ಥಾನದಲ್ಲಿ ಬ್ರೇಡ್ಡು, ಪಿಜ್ಜಾ, ನೋಡಲ್ಸ್ಗಳು ಸೇರಿಕೊಂಡಿವೆ. ಇದರಿಂದಾಗಿ ಹಳ್ಳಿಯ ಜಾನಪದ ಸಂಸ್ಕೃತಿಯ ಸೊಗಡು ಇಲ್ಲದಾಗಿದೆ ಎಂದು ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಡಾ. ಎಂ.ಎಸ್. ಮದಭಾವಿ ಕರ್ನಾಟಕದಲ್ಲಿ ಕಂಠಸ್ಥವಾದ ಜನಪದ ಸಾಹಿತ್ಯ ಗ್ರಂಥಸ್ಥವಾಗಿ ಪ್ರಕಟಗೊಳ್ಳಲು ಹಲಸಂಗಿ ಗೆಳೆಯರು ಕಾರಣವಾದರೆಂದು ಹೇಳಿದರು.
ದಾಸೋಹಿಗಳಾದ ಡಾ. ಅಶೋಕ ವಾಲಿ, ಡಾ. ಸರಸ್ವತಿ ಚಿಮ್ಮಲಗಿ, ಡಾ. ಉಷಾ ಹಿರೇಮಠ, ಮಾತನಾಡಿದರು. ತಿಕೋಟಾದ ಪೂ.ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ವಹಿಸಿದ್ದರು.
ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಡಿದರು. ಡಿ.ಕೆ. ರಾಠೋಡ ಶಿಕ್ಷಕರು ಸ್ವಾಗತಿಸಿದರು. ಈರಣ್ಣ ತೊಂಡಿಕಟ್ಟಿ ವಂದಿಸಿದರು. ಶಿಕ್ಷಕರಾದ ಮಹಾಂತೇಶ ಝಂಡೆ ಕಾರ್ಯಕ್ರಮ ನಿರೂಪಿಸಿದರು.
ಮುಗಳಖೋಡದ ಹೊನಕಟ್ಟಿ ಜಾನಪದ ಕಲಾ ವೃಂದದವರು ಜಾನಪದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ತಣಿಸಿ ರಂಜಿಸಿದರು.
ಸಮಾರಂಭದಲ್ಲಿ ಡಾ. ಸಂಗಮೇಶ ಮೇತ್ರಿ, ವಿ.ಸಿ. ನಾಗಠಾಣ, ಸಿದ್ರಾಮಪ್ಪ ಉಪ್ಪಿನ, ಡಾ. ವಿ.ಡಿ. ಐಹೊಳ್ಳಿ, ವಿದ್ಯಾವತಿ ಅಂಕಲಗಿ, ಗಾಯತ್ರಿ ಪತ್ತಾರ, ಬಿ.ಸಿ. ಸಾರವಾಡ, ಆರ್. ಆರ್. ಹಂಚನಾಳ, ಪ್ರೊ. ಬಿ.ಎನ್. ಪಾಟೀಲ, ಇಬ್ರಾಹಿಂಪೂರ, ಸೋಮನಗೌಡ ಪಾಟೀಲ, ಎ.ಎಸ್. ಕೋರಿ, ಕಾಶಿನಾಥ ಅಣೆಪ್ಪನವರ, ಎಸ್.ಬಿ. ದೊಡಮನಿ, ಈಶ್ವರಗೊಂಡ, ಎ.ಎಸ್. ಕಂಚ್ಯಾಣಿ, ಅಮರೇಶ ಸಾಲಕ್ಕಿ ಬಿ.ಎಂ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

