ಮುದ್ದೇಬಿಹಾಳ ತಾಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜಾಗತೀಕರಣದ ಪ್ರಭಾವದಿಂದ ವಿಶ್ವದ ಎಲ್ಲ ಭಾಷೆಗಳು ನಶಿಸಿ ಹೋಗುವ ದಿನಮಾನಗಳಲ್ಲಿ ಉಳಿಯುವ ಮುನ್ನೂರು ಭಾಷೆಗಳ ಪೈಕಿ ಅತೀ ಗಟ್ಟಿಯಾಗಿ ನಿಲ್ಲುವ ಭಾಷೆ ಕನ್ನಡ ಮಾತ್ರ ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದಲ್ಲಿ ನಡೆದ ತಾಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕೆಲವರು ತಮ್ಮ ಮನೆಗಳಲ್ಲಿ ಇಂಗ್ಲೀಷ್ ಮಾತನಾಡುವದರಿಂದ ತಮ್ಮ ಯೋಗ್ಯತೆ ಹೆಚ್ಚಾಗುತ್ತದೆ ಅಂದುಕೊಂಡಿದ್ದಾರೆ. ಇಂಗ್ಲೀಷ್ ಮಾತನಾಡುವ ಮನೆಗಳಲ್ಲಿ ಹೆಚ್ಚು ವಿವಾಹ ವಿಚ್ಛೇದನಗಳು ನಡೆಯುತ್ತಿವೆ. ಕನ್ನಡ ಉಳಿಸಲು ನಾವು ನೀವು ಸಾಕಷ್ಟು ಪ್ರಯತ್ನಿಸುತ್ತಿರುವ ಮಧ್ಯೆ ಸರ್ಕಾರದ ಮಟ್ಟದಲ್ಲಿ ಕನ್ನಡ ಉಳಿಸುವ ಚಿಂತನೆ ನಡೆದಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಾತನಾಡಿ, ಹಿಂದೆ ನಮ್ಮನ್ನು ಆಳಿದ ಆದಿಲ್ ಶಾಹಿ ಅವರು ಉರ್ದುವನ್ನು ಆಳಿತಭಾಷೆಯನ್ನಾಗಿಸದೇ ಕನ್ನಡವನ್ನೇ ಆಡಳಿತ ಭಾಷೆಯನ್ನಾಗಿಸಿದ್ದರು. ಅಷ್ಟೊಂದು ಗಟ್ಟಿಯಾದ ಭಾಷೆ ಕನ್ನಡ. ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಸಾಹಿತ್ಯವನ್ನು ಶ್ರೀಮಂತವಾಗಿಸಲು ಎಲ್ಲ ಸಾಹಿತಿಗಳು ಶ್ರಮಿಸಬೇಕು ಎಂದರು.
ಸಮ್ಮೇಳನಾಧ್ಯಕ್ಷ ಅಶೋಕ ಮಣಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ, ಭಾಜಪಾ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಹಿರಿಯ ಸಾಹಿತಿ ಬಿ.ಎಂ.ಹಿರೇಮಠ, ಮಾತನಾಡಿದರು.
ಸಮಾರಂಭದಲ್ಲಿ ಡಾ.ಎಂ.ಎಂ.ಬೆಳಗಲ್ಲ ರಚಿತ ಜೀವನದಿ ಕವನ ಸಂಕಲನ, ಡಾ.ಪ್ರಕಾಶ ನರಗುಂದ ರಚಿತ ಸಾರ್ಥಕ ಬದುಕು ಅಭಿನಂದನಾ ಗ್ರಂಥ, ಶ್ರೀಮತಿ ಸುಮಲತಾ ಗಡಿಯಪ್ಪನವರ ರಚಿತ ನಾನಾಗಲಾರೆ ಬುದ್ಧ, ವೆಂಕಟೇಶ ಮಾಚಕನೂರ ರಚಿತ ಶಿಕ್ಷಣದಲ್ಲಿ ಮೌಲ್ಯಗಳು, ಹು.ಇ.ಬಳಬಟ್ಟಿ ರಚಿತ ಕಂಕಣಭಾಗ್ಯ ಮತ್ತು ಕೊನೆಯುಸಿರು, ಶಿವಪುತ್ರ ಅಜಮನಿ ರಚಿತ ಮಣ್ಣಿಗೂ ಮೈಲಿಗೆ, ಎಚ್.ಆರ್.ಬಾಗವಾನ ರಚಿತ ತತ್ವಪದಕಾರ ಬಸಪ್ಪ ಶರಣರ ಜೀವನಗಾಥೆ, ಸುರೇಶ ಹೂಗಾರ ರಚಿತ ಕೆಂಡದಲ್ಲಿ ಅರಳಿದ ಮಲ್ಲಿಗೆ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ತಾ.ಪಂ ಇಓ ನಿಂಗಪ್ಪ ಮಸಳಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮುದ್ನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಕಸಾಪ ಗೌರವಾಧ್ಯಕ್ಷ ಎಂ.ಬಿ.ನಾವದಗಿ ವೇದಿಕೆ ಮೇಲಿದ್ದರು.
ಎ.ಪಿ.ಎಂ.ಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಬಸವರಾಜ ಹಂಚಲಿ, ಹೇಮಾ ಬಿರಾದಾರ ನಿರೂಪಿಸಿದರು.
“ಎಲ್ಲ ಇಲಾಖೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿಸುವಂತೆ ಆದೇಶಿಸುವದು, ಗಡಿನಾಡ ಪ್ರದೇಶಗಳಲ್ಲಿರುವ ಕನ್ನಡ ಶಾಲೆಗಳನ್ನು ಹೆಚ್ಚು ಅಭಿವೃದ್ಧಿ ಪಡಿಸುವದು, ಸಾಹಿತಿಗಳು ಹಾಗೂ ಲೇಖಕರು ಪ್ರಕಟಿಸಿದ ಪುಸ್ತಕಗಳನ್ನು ಶೇ೫೦ ರಷ್ಟು ಕೊಂಡುಕೊಳ್ಳುವಂತೆ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ ಹಾಗೂ ಶಾಲಾ ಕಾಲೇಜುಗಳಿಗೆ ಸೂಚಿಸುವದು ಮತ್ತು ಬಡ ಬರಹಗಾರರಿಗೆ, ಸಾಹಿತಿಗಳಿಗೆ, ಸಾಹಿತ್ಯದ ಅಧ್ಯಯನಕ್ಕಾಗಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಉಚಿತವಾದ ಬಸ್ ಪಾಸುಗಳನ್ನು ನೀಡಿ ಕನ್ನಡ ಭಾಷೆ ಉಳಿಸಲು ಸರ್ಕಾರ ಮುಂದಾಗಬೇಕು.”
– ಅಶೋಕ ಮಣಿ
ಸಮ್ಮೇಳನದ ಸರ್ವಾಧ್ಯಕ್ಷರು.

“ಜಗಜ್ಯೋತಿ ಬಸವಣ್ಣನವರು ಹೊಳೆ ಹಾರಿ ಪ್ರಾಣ ಕೊಟ್ಟರು ಎಂದು ಕೆಲವೆಡೆ ಬರೆಯಲಾಗಿದೆ. ಅವರು ಕ್ರಾಂತಿಕಾರಿಯಾಗಿದ್ದರು. ಬಿಜ್ಜಳ ರಾಜನನ್ನೇ ವಿರುದ್ಧ ಕಟ್ಟಿಕೊಂಡು ಮೂಡನಂಬಿಕೆ ವಿರುದ್ಧ ಹೋರಾಡಿ, ಜಾತಿ ರಹಿತವಾದ ಸಮಾಜ ನಿರ್ಮಿಸಲು ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಅಂತಾ ಬದುಕು ನಡೆಸಿದ್ದರು. ಅವರು ಹೊಳೆ ಹಾರಿ ಹೇಡಿ ತರ ಜೀವ ಕೊಡಲು ಸಾಧ್ಯವಾ? ಸಾಹಿತಿಗಳು ನಮ್ಮ ಇತಿಹಾಸಗಳ ಬಗ್ಗೆ ಸಂಶೋಧನೆ ಮಾಡಬೇಕು. ಶಾಸನಗಳ ದೀರ್ಘವಾದ ಅಧ್ಯಯನ ಮಾಡಿ ಲೇಖನಗಳನ್ನು ಬರೆಯುವಂತಾಗಬೇಕು. ಹವ್ಯಾಸಕ್ಕಾಗಿ ಇತಿಹಾಸದ ಸತ್ಯಾಂಶಗಳನ್ನು ಮುಚ್ಚಿಟ್ಟು ಲೇಖನಗಳನ್ನು ಬರೆಯೋದು ತಪ್ಪು.”
– ಸಿ.ಎಸ್.ನಾಡಗೌಡ ಅಪ್ಪಾಜಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕರು.
“ವೈದ್ಯರು ಕಿಡ್ನಿ ಕದಿಯುತ್ತಿದ್ದಾರೆ, ಕೆಲವೆಡೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ. ಹರಾಜಿಗೆ ಹಾಕಲಾಗುತ್ತಿದೆ. ದಿನ ಬೆಳಗಿದರೆ ವಿವಿಧ ಸಮಸ್ಯೆಗಳಿಂದ ನೂರಾರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಅನೇಕ ಸಮಸ್ಯೆಗಳಿವೆ. ಬಡ್ಡಿ ದಂಧೆಗೆ ಜನತೆ ಬೇಸತ್ತಿದೆ ಇಂತಹ ಸಮಸ್ಯೆಗಳಿಗೆ ಸಾಹಿತ್ಯ ಧ್ವನಿಯಾಗಬೇಕು.”
– ಬಿ.ಎಂ.ಹಿರೇಮಠ
ಹಿರಿಯ ಸಾಹಿತಿ.
ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ
ಬೆಳಿಗ್ಗೆ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಬನಶಂಕರಿ ದೇವಸ್ಥಾನದಿಂದ ಶುರುವಾದ ಮೆರವಣಿಗೆ ದ್ಯಾಮವ್ವನ ಕಟ್ಟೆ, ಸಿದ್ರಾಮೇಶ್ವರ ವೃತ್ತ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಿದ್ದೇಶ್ವರ ವೇದಿಕೆಯತ್ತ ಶಾಲಾ ವಿದ್ಯಾರ್ಥಿಗಳು ಸಮವಸ್ತç ಧರಿಸಿ ಕೈಯಲ್ಲಿ ನಡಧ್ವಜ ಹಿಡಿದು ಬಿಸಿಲಿ ತಾಪ ಲೆಕ್ಕಿಸದೇ ಕನ್ನಡಾಭಿಮಾನ ತೋರಿಸರು. ಶೀವಕುಮಾರ ಶಾರದಳ್ಳಿಯ ಏಕಲವ್ಯ ಸ್ಟೆಟಿಂಗ್ ಅಕಾಡಮಿಯ ವಿದ್ಯಾರ್ಥಿಗಳು ಮೆರವಣಿಗೆಯ ಉದ್ದಕ್ಕೂ ಸ್ಕೆಟಿಂಗ್ ಪ್ರದರ್ಶನ ನೀಡಿದರು. ಡೊಳ್ಳು ಕುಣಿತ, ಕರಡಿ ಮಜಲು, ಕೋಲಾಟ, ವಿವಿಧ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದವು.

