ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ | ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಐತಿಹಾಸಿಕ ಪ್ರವಾಸಿ ತಾಣ, ಸ್ಮಾರಕಗಳ ದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳು ಇತಿಹಾಸ, ಕಲೆ, ಸಂಸ್ಕೃತಿ, ಐತಿಹಾಸಿಕ ಸ್ಥಳಗಳ ಮಹತ್ವ ತಿಳಿದುಕೊಳ್ಳಲು ಹಾಗೂ ಜ್ಞಾನದ ಹರವು ಹೆಚ್ಚಿಸಿಕೊಳ್ಳಲು ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವು ಸಹಾಯಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ಅವರು ಶನಿವಾರ ಪ್ರವಾಸೋದ್ಯಮ ಇಲಾಖೆ ಹಾಗೂ ಕೆ.ಎಸ್.ಟಿ.ಡಿ.ಸಿ ವತಿಯಿಂದ ೨೦೨೪-೨೫ನೇ ಸಾಲಿನ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ನಗರದ ಕೆಎಸ್ಟಿಡಿಸಿ ಹೊಟೇಲ್ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ತಾವು ಭೇಟಿ ನೀಡುವ ಸ್ಥಳಗಳ ಮಹತ್ವ, ಅಲ್ಲಿನ ಐತಿಹ್ಯ ತಿಳಿದುಕೊಂಡು, ತಮ್ಮಗಾದ ಪ್ರವಾಸ ಅನುಭವದ ಪ್ರವಾಸ ಪ್ರಬಂಧ ಬರೆದು ತಮ್ಮ ಶಾಲಾ ಮುಖ್ಯೋಪಾಧ್ಯಯರಿಗೆ ಸಲ್ಲಿಸುವಂತೆಯೂ, ಅತ್ಯುತ್ತಮ ಮೂರು ಪ್ರವಾಸ ಕಥನದ ಪ್ರಬಂಧಗಳನ್ನು ಆಯ್ಕೆ ಮಾಡಿ, ಬಹುಮಾನ ವಿತರಿಸಲಾಗುವುದೆಂದು ಮಕ್ಕಳಿಗೆ ಸ್ಫೂರ್ತಿ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ಓದಿಗೆ ಮಹತ್ವ ನೀಡಬೇಕು. ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಹೇಳಿದರು.
ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ಹಾಗೂ ಕ್ರೈಸ್ ವಸತಿ ಶಾಲೆಗಳಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಬದಾಮಿ, ಐಹೊಳೆ, ಪಟ್ಟದಕಲ್ಲ, ಟಿಬಿ ಡ್ಯಾಂ, ಹಂಪಿ, ಚಿತ್ರದುರ್ಗ, ಕೆಳದಿ, ಇಕ್ಕೇರಿ, ಜೋಗಫಾಲ್ಸ್,,ಗೋಕರ್ಣ,ಮಿರ್ಜಾನ್ ಫೋರ್ಟ್,ಇಡಗುಂಜಿ, ಮುರುಡೇಶ್ವರ ಹಾಗೂ ಶಿರಸಿ ಪ್ರವಾಸಿ ತಾಣಗಳಿಗೆ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾಲ್ಕು ದಿವಸದ ಪ್ರವಾಸ ಇದಾಗಿದೆ ಎಂದರು. ಪ್ರವಾಸದಲ್ಲಿ ಮಕ್ಕಳ ಆರೋಗ್ಯ, ಊಟ, ಉಪಹಾರ, ವಸತಿ, ಬಸ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ಪ್ರವಾಸದಲ್ಲಿ ಶಿಕ್ಷಕರು ಹಾಗೂ ಶಿಕ್ಷಕಿಯರು ಮಕಕಳ ನೇತೃತ್ವ ವಹಿಸಿದ್ದಾರೆ. ಮಕ್ಕಳ ಸುರಕ್ಷತೆ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕೆಂದು ಮಕ್ಕಳ ನೇತೃತ್ವ ವಹಿಸಿರುವ ಶಿಕ್ಷಕರಿಗೆ ಸೂಚನೆ ನೀಡಿದರು.
ಪ್ರವಾಸ ಹೊರಡುವ ವಿದ್ಯಾರ್ಥಿಗಳಿಗೆ ಪ್ರವಾಸಿ ಕಿಟ್ಗಳಾದ ಟೀ ಶರ್ಟ್, ಕ್ಯಾಪ್, ಬ್ಯಾಗ್, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಬೆಂಗಳೂರ ಕೆ.ಎಸ್.ಟಿ.ಡಿ.ಸಿ ಸಹಾಯಕ ವ್ಯವಸ್ಥಾಪಕರಾದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಯಶವಂತರಾಯ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ ಬಿರಾದಾರ,ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಸಿ.ಎಂ.ಕೋರೆ, ಹೊಟೇಲ ಮಯೂರ್ ಆದಿಲ್ ಶಾಹಿ ವ್ಯವಸ್ಥಾಪಕರಾದ ಜಗದೇವಿ ಕೆಂಬಾವಿ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ಅನಿಲಕುಮಾರ ಬಣಜಿಗೇರ, ಕೆಕೆಆರ್ಟಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿ,ಸಿಬ್ಬಂದಿ ಇದ್ದರು.

