ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಉತ್ತರ ಭಾರತದಲ್ಲಿ ಗಂಗಾನದಿಗೆ ಇರುವ ಪ್ರಾಮುಖ್ಯತೆ ದಕ್ಷಿಣ ಭಾರತದಲ್ಲಿ ಕೃಷ್ಣಾ ನದಿಗೂ ಇದೆ. ಗಂಗಾ ತೀರದಲ್ಲಿ ವಾರಾಣಸಿ, ತೀರ್ಥರಾಜ, ಪ್ರಯಾಗ ಮುಂತಾದವು ತೀರ್ಥಯಾತ್ರಾ ಸ್ಥಳಗಳಿರುವಂತೆ, ಕೃಷ್ಣಾ ತೀರದಲ್ಲಿಯೂ ಗೋಷ್ಟದ ತೀರ್ಥ, ಸಿದ್ಧ ತೀರ್ಥ, ಸೀತಾ ತೀರ್ಥ, ಕೃಷ್ಣ ತೀರ್ಥ, ರಾಮ ತೀರ್ಥ, ಆಂಜನೇಯ ತೀರ್ಥ- ಮುಂತಾದ ತೀರ್ಥಧಾಮಗಳಿವೆ. ಶ್ರೀ ಯಲಗೂರು ಕ್ಷೇತ್ರವು ಆಂಜನೇಯ ತೀರ್ಥ ಸನಿಹದ ಭಕ್ತಿ ಆಕರ್ಷಣೆ.

ಐತಿಹಾಸಿಕ ವಿಜಯಪುರ ಜಿಲ್ಲೆಯ ಸುಪ್ರಸಿದ್ಧ , ಪ್ರಾಣದೇವರ ಜಾಗೃತ ಸ್ಥಳಗಳಲ್ಲೋಂದಾಗಿರುವ ಸ್ಥಳ ಆಲಮಟ್ಟಿ ಸಮೀಪದ ಯಲಗೂರ ಹನುಮಾನ್.
ಯಲಗೂರು ಆಂಜನೇಯನ ದೇವಾಲಯ ಹೊಂದಿದ ಪುಣ್ಯಕ್ಷೇತ್ರ. ಇಲ್ಲಿ ಆಂಜನೇಯನನ್ನು ಯಲಗೂರೇಶ ಎಂತಲೂ ಕರೆಯಲಾಗುತ್ತದೆ. ಚಂದ್ರಗಿರಿ, ಅರಳದಿನ್ನಿ, ಯಲಗೂರು, ಕಾಗಿನಕುಂಟೆ, ಬೂದಿಹಾಳ, ಮಸೂತಿ, ನಾಗಸಂಪಿಗೆ… ಹೀಗೆ ಏಳು ಊರಿಗೆ ಒಡೆಯನಾಗಿ ನೆಲೆ ನಿಂತಿದ್ದಾನೆ ಈ ಯಲಗೂರೇಷ. ಸಾಮಾನ್ಯವಾಗಿ ಊರಿಗೊಂದು ಆಂಜನೇಯನ ದೇವಾಲಯವಿರುತ್ತದೆ. ಆದರೆ, ಇಲ್ಲಿ ಏಳೂ ಊರುಗಳಿಗೆ ಒಬ್ಬನೇ ಆಂಜನೇಯ ಎಂಬುದೇ ವಿಶೇಷ.
ದೇವಸ್ಥಾನ ಪ್ರವೇಶಿಸುವ ದ್ವಾರದ ಬಳಿ ವಿಶಾಲ ಜಾಗ, ನಾನಾ ಕಡೆಗಳಲ್ಲಿ ರಾರಾಜಿಸುತ್ತಿರುವ ಮಂತ್ರಾಲಯದ ಗುರು ಸಾರ್ವ ಭೌಮ ರಾಘವೇಂದ್ರ ಸ್ವಾಮೀಜಿ ಮತ್ತು ರಾಮ ದೇವರ ಕಣ್ಣನ ಸೆಳೆದು, ಭಕ್ತಿ ಭಾವ ಉಕ್ಕಿಸುವ ಚಿತ್ರಗಳು,
ಗರ್ಭಗುಡಿಯಲ್ಲಿ ಯಲಗೂರೇಶ ಹನುಮನ ವಿಗ್ರಹವು ೭ ಅಡಿ ಎತ್ತರವಿದೆ. ಎಡಗೈಯಲ್ಲಿ ಸೌಗಂಧಿಕಾ ಪುಷ್ಟವಿದ್ದು, ಎಡಪಾದವು ರಾಕ್ಷಸನನ್ನು ತುಳಿಯುತ್ತಿರುವುದನ್ನು ಇಲ್ಲಿ ನೋಡಬಹುದು. ದೊಡ್ಡದಾದ ಕಣ್ಣುಗಳಿಂದ ಗೋಚರಿಸುವ ಹನುಮ ದೇವರ ವಿಗ್ರಹವು ಸುಂದರವಾಗಿದ್ದು, ಶಾಂತ ಹಾಗೂ ಪ್ರಸನ್ನ ವದನನಾಗಿ ಸೆಳೆಯುತ್ತಾನೆ. ಹನುಮದೇವರ ಉದ್ದವಾದ ಬಾಲವು ತಲೆಯ ಮೇಲಿಂದ ಸಾಗಿ, ಎಡಗಡೆಯ ಪಾದದ ಸಮೀಪ ತಲುಪುತ್ತದೆ.
ಆರಾಧನೆಯ ವಿಶೇಷ: ಕೃಷ್ಣಾ ನದಿಯಲ್ಲಿ ಮಿಂದು, ಕೃಷ್ಣೆಯ ಪವಿತ್ರ ಜಲವನ್ನು ತಂದು ಶ್ರೀ ಯಲಗೂರೇಶನ ಪೂಜೆ ಮಾಡುವ ಪರಂಪರೆಯನ್ನು ಅರ್ಚಕರು ಈಗಲೂ ಅನುಸರಿಸುತ್ತಿದ್ದಾರೆ. ನಿತ್ಯವೂ ಮಹಾಭಿಷೇಕ ನಡೆಯುತ್ತದೆ. ಶನಿವಾರದಂದು ವಿಶೇಷ ಪೂಜೆ, ಕುಂಕುಮ ಪೂಜೆ, ಎಲೆ ಪೂಜೆಗಳು ನೆರವೇರುತ್ತವೆ. ಶ್ರಾವಣ, ಕಾರ್ತಿಕ ಮಾಸ, ರಾಮ ನವಮಿ, ವಿಜಯದಶಮಿಯಲ್ಲಿ ದೂರದೂರದ ಸ್ಥಳದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಹರಿಶಾವಿಗೆ ಸಂಪ್ರದಾಯ.
ಈ ಸರ್ವಧರ್ಮ ನ್ಯೆವೇದ್ದೆ ಯಲಗೂರೇಶನಿಗೆ ಅರ್ಪಿಸಿ, ಜಾತಿ ಧರ್ಮ ಎನ್ನದೇ ಎಲ್ಲ ಸಂಪ್ರದಾಯದ ಬಾಬುದಾರರು ಒಟ್ಟಿಗೆ ಕುಳಿತು ಪ್ರಸಾದ ಸ್ವೀಕರಿಸುವ ‘ಹರಿಶಾವಿಗೆ’ ಸಂಪ್ರದಾಯ ಇದೆ . ಇದೊಂದು ಸರ್ವಧರ್ಮ ನೇವೇದ್ಯ, ಅದನ್ನು ಭಿಕ್ಷೆ ರೀತಿಯಲ್ಲಿ ಭಕ್ತರು ಸ್ವೀಕರಿಸುವುದು ಸಂಪ್ರದಾಯ ಹಾಗೂ ಭಕ್ತಿಯ ಪರಾಕಾಷ್ಠೆ. ಸಹಸ್ರಾರು ಜನರು, ಎಲ್ಲಾ ಜಾತಿಯ ಜನರು ಕುಳಿತು ಪೂಜಾರಿಗಳು ಹಾಕುವ ನೇವೇದ್ಯೆಯನ್ನು ಸ್ವೀಕರಿಸಿದ್ದು ವಿಶೇಷ.
ಸ್ನಾನಘಟ್ಟ ನಿರ್ಮಾಣ.
ಭಕ್ತಾಧಿಗಳು ಕೃಷ್ಣಾ ನದಿಯಲ್ಲಿ ಸ್ನಾನ ಹಾಗೂ ಮತ್ತೀತರ ದೈವಿ ಕಾರ್ಯ ಕೈಗೊಳ್ಳಲು ಕೃಷ್ಣಾ ನದಿಗೆ ಬರುವುದು ವಾಡಿಕೆ. ಅವರ ಅನುಕೂಲಕ್ಕಾಗಿ ಸ್ನಾನ ಘಟ್ಟ ನಿರ್ಮಾಣ, ಮಹಿಳೆ, ಪುರುಷರಿಗೆ ಪ್ರತ್ಯೇಕ ಬಟ್ಟೆ ಬದಲಾವಣೆ ಕೋಣೆ ನಿರ್ಮಿಸಲಾಗಿದೆ . ಗ್ರಾಮ ಪಂಚಾಯತಿ ಕಟ್ಟಡದ ಹಿಂಭಾಗ ಮಹಿಳೆಯರಿಗೆ ಪ್ರತ್ಯೇಕ ಸ್ನಾನಗೃಹ ನಿರ್ಮಿಸಲಾಗಿದೆ.
ಸಮುದಾಯ ಭವನ . ಪ್ರವಾಸೋದ್ಯಮ ಸೇರಿದಂತೆ ನಾನಾ ಇಲಾಖೆಯಿಂದ ನಿರ್ಮಿಸಲಾದ ಧರ್ಮ ಶಾಲೆ (ಯಾತ್ರಿನಿವಾಸ) ಸದ್ಭಳಕೆಗಾಗಿ ಕೆಳಭಾಗವನ್ನು “ಪವನ ಪುತ್ರ ಮಂಗಲ ಕಾರ್ಯಾಲಯ’ವಾಗಿ ಪರಿವರ್ತಿಸಲಾಗಿದೆ. ಮೇಲ್ಬಾಗದಲ್ಲಿ ೧೯ ಕೋಣೆಗಳು, ಅದಕ್ಕೆ ತಕ್ಕಂತೆ ಅಗತ್ಯ ಶೌಚಾಲಯಗಳಿವೆ. ಭಕ್ತಾಧಿಗಳ ವಾಸಕ್ಕೆ, ಶೈಕ್ಷಣಿಕ ಪ್ರವಾಸಕ್ಕೆ ಬಂದ ಮಕ್ಕಳ ವಸತಿಗೂ ಒದಗಿಸಲಾಗ್ತಿದೆ .

