ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ಮಿನಿವಿಧಾನಸೌಧದವರೆಗೂ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು, ಕಾರ್ಯಕರ್ತರು ಶುಕ್ರವಾರ ಪಾದಯಾತ್ರೆ ಮೂಲಕ ತೆರಳಿ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ, ಕಂದಾಯ ಸಚಿವರಿಗೆ, ಜಲಸಂಪನ್ಮೂಲ ಸಚಿವರಿಗೆ ಪ್ರತ್ಯೇಕವಾಗಿ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಸಂಘದ ನೂತನ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ ಮಾತನಾಡಿ, ರಾಜ್ಯದ ರೈತ ಬಾಂಧವರು ತಮ್ಮ ಜಮಿನುಗಳಿಗೆ ಹೋಗಲು ದಾರಿ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮೀನಿನ ರೈತ ಒಳಗಡೆ ಇರುವ ಜಮೀನುಗಳಿಗೆ ಹಾಯ್ದು ಹೋಗಲು ತಮ್ಮ ಜಮೀನಿನಲ್ಲಿ ಅವಕಾಶ ನೀಡುತ್ತಿಲ್ಲ. ಕೇಳಲು ಹೋದರೆ ನಕ್ಷೆಯಲ್ಲಿ ದಾರಿ ಗುರುತು ಇದ್ದರೆ ಮಾತ್ರ ಹಾಯ್ದ ಹೋಗಬಹುದು. ಇದರಿಂದಾಗಿ ರೈತರಲ್ಲಿ ಕಲಹ ಉಂಟಾಗುತ್ತಿವೆ. ಜಮೀನುಗಳ ದಾರಿ ಸಮಸ್ಯೆಯಿಂದಾಗಿ ಕೆಲವರು ಬಿತ್ತನೆ ಮಾಡದೇ ಇರುವ ಪರಿಸ್ಥಿತಿ ಇದೆ. ಇಂತಹ ಗಂಭೀರ ಸಮಸ್ಯೆಯ ಬಗ್ಗೆ ರೈತ ಸಂಘವು ಹಲವಾರು ಸಲ ಪ್ರತಿಭಟನೆ, ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕೆಂದ ಅವರು, ಆಲಮಟ್ಟಿಯ ಜಲಾಶಯ, ನಾರಾಯಣಪುರ ಜಲಾಶಯದ ನೀರನ್ನು ಮರು ಹಂಚಿಕೆ ಮಾಡಿ ವಿಜಯಪುರ ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಬೇಕು. ಪಂಚನದಿಗಳ ನಾಡು ಎಂದು ವಿಜಯಪುರ ಜಿಲ್ಲೆಗೆ ಕರೆದರೂ ಜಿಲ್ಲೆಯ ರೈತರ ಕೃಷಿಗೆ ನೀರು ಕೊಡುವದು ಕನಸಿನ ಮಾತಾಗಿದೆ. ಆಲಮಟ್ಟಿ ಜಲಾಶಯಕ್ಕೆ ಸಾಕಷ್ಟು ರೈತರು ತಮ್ಮ ಜಮೀನು-ಮನೆ ಕಳೆದುಕೊಂಡಿದ್ದರೂ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಎಂದರು.
ನಾರಾಯಣಪುರ ಜಲಾಶಯಕ್ಕೆ ಮುಂಗಾರು ಹಂಗಾಮಿಗೆ ೬೦ ಟಿಎಂಸಿ ನೀರು, ಹಿಂಗಾರು ಹಂಗಾಮಿಗೆ ೭೨ ಟಿಎಂಸಿ ನೀರು ಹರಿಸಲಾಗುತ್ತಿದೆ. ನಮ್ಮ ಜಿಲ್ಲೆಯ ರೈತಿರಿಗೆ ಇಡೀ ವರ್ಷ ಪೂರ್ತಿ ಮುಂಗಾರು ಹಂಗಾಮಿಗೆ ಕೇವಲ ೬ ಟಿಎಂಸಿ, ಹಿಂಗಾರು ಹಂಗಾಮಿಗೆ ೯ ಟಿಎಂಸಿ ನೀರು ಕೊಡಲಾಗುತ್ತಿದೆ. ಒಟ್ಟು ಒಂದು ವರ್ಷಕ್ಕೆ ೧೫ ಟಿಎಂಸಿ ಮಾತ್ರ ನೀರನ್ನು ಕೊಡಲಾಗುತ್ತಿದೆ. ಎಲ್ಲ ತ್ಯಾಗ ಮಾಡಿದ ನಮ್ಮ ಜಿಲ್ಲೆಯ ರೈತರಿಗೆ ಸರ್ಕಾರ ಮೋಸ ಮಾಡಿದೆ. ಮುಂಬರುವ ದಿನಗಳಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ನಮ್ಮ ಜಿಲ್ಲೆಯ ಎಂಟು ಜನ ಶಾಸಕರು ಇದರ ಬಗ್ಗೆ ಧ್ವನಿ ಎತ್ತಿ ಜಿಲ್ಲೆಯ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎರಡು ಜಲಾಶಯಗಳ ನೀರು ಮರುಹಂಚಿಕೆ ಮಾಡಿ ಸಮಾನಾಂತರ ನ್ಯಾಯ ದೊರಕಿಸಬೇಕೆಂದರು.
ಸಂಘದ ನೂತನ ಗೌರವಾಧ್ಯಕ್ಷ ವಿಠ್ಠಲ ಬಿರಾದಾರ ಮಾತನಾಡಿ, ತೋಟದಲ್ಲಿ ವಸ್ತಿ ಇರುವ ರೈತ ಬಾಂಧವರಿಗೆ ಸಂಜೆ ೬ ಗಂಟೆಯಿಂದ ರಾತ್ರಿಯವರೆಗೂ ವಿದ್ಯುತ್ ಸರಬರಾಜು ಇಲ್ಲದೇ ಇರುವದರಿಂದಾಗಿ ಅವರು ಕತ್ತಲೆಯಲ್ಲಿ ಇರುವ ಸ್ಥಿತಿಯಿದೆ. ಅಲ್ಲದೇ ಅವರ ಮಕ್ಕಳ ಓದಿಗೂ ತೊಂದರೆಯಾಗುತ್ತಿದೆ. ಪರೀಕ್ಷೆ ಹತ್ತಿರ ಬರುತ್ತಿರುವದರಿಂದಾಗಿ ರಾತ್ರಿ ಹೊತ್ತು ವಿದ್ಯುತ್ ಈ ಭಾಗಕ್ಕೆ ಪೂರೈಕೆಯಾಗುವಂತೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು. ವಿದ್ಯುತ್ ಪೂರೈಕೆ ಮಾಡುವದರಿಂದಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಉಪಾಧ್ಯಕ್ಷ ಹೊನಕೆರಪ್ಪ ತೆಲಗಿ, ಶಿವಪ್ಪ ಇಂಗಳೇಶ್ವರ, ಈರಣ್ಣ ದೇವರಗುಡಿ, ಚಂದ್ರಾಮ ತೆಗ್ಗಿ, ರಾಜೇಸಾಬ ವಾಲೀಕಾರ, ದಾವಲಸಾಬ ನದಾಫ, ಚನ್ನಬಸಪ್ಪ ಸಿಂಧೂರ, ಚನ್ನಪ್ಪ ಗುಢೂರ,ಪರಶುರಾಮ ಮುತ್ತಗಿ, ಸೋಮೇಶ ನಾಗರೆಡ್ಡಿ, ಯಮನಪ್ಪಗೌಡ ಹೊಸೂರ, ಸಾಹೇಬಗೌಡ ಹೊಸೂರ, ಸಿದ್ದಯ್ಯ ಹಿರೇಮಠ, ರಾಮನಗೌಡ ಹಾದಿಮನಿ, ಸಂಗನಗೌಡ ಕೋಳೂರ, ಹಣಮಂತ್ರಾಯ ಕಲಬುರ್ಗಿ,ಮಡಿವಾಳಪ್ಪ ನಾಗರೆಡ್ಡಿ, ಬಸವರಾಜ ನಾಗರೆಡ್ಡಿ, ಶೆಟ್ಟೆಪ್ಪ ಲಮಾಣಿ ಇತರರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಬಸವೇಶ್ವರ ದೇವಸ್ಥಾನದ ಉದ್ಯಾನವನದಲ್ಲಿ ಜಿಲ್ಲಾ ಮಟ್ಟದ ರೈತ ಸಂಘದ ಸಭೆ ಜರುಗಿತು.

