ಉದಯರಶ್ಮಿ ದಿನಪತ್ರಿಕೆ
ಇಂಡಿ: ಬಾಯಿಯ ಆರೋಗ್ಯ ನಿಮ್ಮ ಇತರೆ ಸಾಮಾನ್ಯ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಬ್ಯಾಕ್ಟೀರಿಯಾ ಸೋಂಕಿನಿಂದ ಬಾಯಿಯಲ್ಲಿ ಒಸಡಿನ ರೋಗ ಉಂಟಾಗಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಇದು ರಕ್ತದ ಮೂಲಕ ದೇಹದ ಇತರೆ ಭಾಗಗಳಿಗೆ ಹಾನಿ ಉಂಟು ಮಾಡುತ್ತದೆ. ಶರೀರಕ್ಕೆ ದಂತ ಅತೀ ಮುಖ್ಯವಾಗಿದೆ ಎಂದು ದಂತ ವೈದ್ಯ ಡಾ. ರವಿ ಭತಗುಣಕಿ ಹೇಳಿದರು.
ಅವರು ಗುರುವಾರ ತಾಲೂಕಿನ ಲಚ್ಯಾಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.
ಬೆಳಿಗ್ಗೆ ಎದ್ದಾಗ ಮತ್ತು ಒಮ್ಮೆ ಮಲಗುವ ಮುನ್ನ ಕಡ್ಡಾಯವಾಗಿ ಎರಡು ಬಾರಿ ಬ್ರಷ್ ಮಾಡಬೇಕು. ಮಧುಮೇಹ ಹೊಂದಿದ್ದರೆ ಅದನ್ನು ನಿರ್ವಹಿಸಿ, ಧೂಮಪಾನ ಮಾಡಬೇಡಿ ಅಥವಾ ತಂಬಾಕು ಉತ್ಪನ್ನಗಳನ್ನು ಬಳಸಬೇಡಿ ಎಂದು ಸಲಹೆ ನೀಡಿದರು.
ಹಲ್ಲುಗಳ ನಡುವಿನ ಬ್ಯಾಕ್ಟಿರಿಯಾವನ್ನು ತೆಗೆದು ಹಾಕಲು ಪ್ರತಿದಿನ ಎರಡು ಬಾರಿ ಬ್ರೇಶ್ ಮಾಡಿ, ಆಲ್ಕೋಹಾಲ ಮತ್ತು ಹೆಚ್ಚುವರಿ ಸಕ್ಕರೆ ಹೊಂದಿರುವ ಆಹಾರ ಮತ್ತು ಪಾನೀಯಗಳನ್ನು ಮಿತಿಗೊಳಿಸಿ. ತಪಾಸಣೆಗಾಗಿ ೬ ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡಿ ದಂತ ಪರೀಕ್ಷೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಅನೀಲ ರಾಥೋಡ. ಡಾ. ಶೃತಿ ಮಾನಕೊಂಡ. ಡಾ. ಚೈತ್ರಾ ಭಜಂತ್ರಿ. ಡಾ. ಎಸ್.ಹೆಚ್. ಚವ್ಹಾಣ, ಡಾ. ಅರುಣಕುಮಾರ ಕುಂಬಾರ, ಗುರುರಾಜ ಪಾಟೀಲ, ಚಂದ್ರಾಮ ಮೇಡೇದಾರ, ಮೊಬಶಿರ್ ದರ್ಗಾ, ಬಸವರಾಜ ಅಹಿರಸಂಗ, ವಿದ್ಯಾ ಹಳಗುಣಕಿ, ವಿಜಯಲಕ್ಷ್ಮಿ ಕುಂಬಾರ, ಎಲ್ಲಾ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ರೋಗಿಗಳು ಉಪಸ್ಥಿತರಿದ್ದರು.

