ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಕೂಡಗಿ ಕೆಪಿಎಸ್ ಶಾಲೆಯ ಶಿಥಿಲಾವಸ್ಥೆಯಲ್ಲಿ ಇರುವ ಎಲ್ಲ ಕಟ್ಟಡಗಳನ್ನು ಬರುವ ದಿನಗಳಲ್ಲಿ ಸುಂದರವಾದ ಕಟ್ಟಡಗಳನ್ನಾಗಿ ನಿರ್ಮಿಸಲಾಗುವುದು. ಮೂಲಭೂತ ಸೌಲಭ್ಯಗಳಿಗಾಗಿ ಇರುವ ಅನುದಾನವನ್ನು ಸದುಪಯೋಗ ಮಾಡಿ, ಕಡಿಮೆ ಬಿದ್ದರೆ ಅದನ್ನು ಬೇರೆ ಮೂಲಗಳಿಂದ ಅನುದಾನ ಒದಗಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತ ವಿಜಯಪುರ, ಪಂಚಾಯತರಾಜ್ ಇಂಜನೀಯರಿಂಗ್ ಉಪವಿಭಾಗ ಬಸವನ ಬಾಗೇವಾಡಿ, 2022-23 ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ಕೂಡಗಿ ಕೆ ಪಿ ಎಸ್ ಶಾಲೆ ನಿರ್ಮಾಣ ಹಾಗೂ ರಿಪೇರಿ ಅಂದಾಜು ಮೊತ್ತ 174 ಲಕ್ಷ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಹೊಸ ಕಟ್ಟಡವನ್ನು 9 ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು. ಮುಂದಿನ ಭಾಗ ಶಾಲಾ ಕಟ್ಟಡ ಮಾಡಿಕೊಂಡು ಹಿಂದಿನ ಭಾಗವನ್ನು ಆಟದ ಮೈದಾನ ಮಾಡಿ ಒಂದು ಸುಸಜ್ಜಿತ ಶಾಲೆ ಮಾಡಿಕೊಡುವ ಭರವಸೆ ನೀಡಿದರು.
ಈ ವೇಳೆ ಕಾರ್ಯಕ್ರಮದ ಸಾನಿಧ್ಯವನ್ನು ಮೈರಾಜಪೀರಾ ವಹಿಸಿದ್ದರು. ಅತಿಥಿಗಳಾಗಿ ಕೂಡಗಿ ಗ್ರಾಪಂ ಅದ್ಯಕ್ಷೆ ಹುಸೇನಬಿ ಮಾಶ್ಯಾಳ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಮಾಜಿ ತಾಪಂ ಸದಸ್ಯ ಈಶ್ವರ ಜಾಧವ, ಚಂದ್ರಶೇಖರ ಜುಗುತಿ, ಸಂತೋಷ ಚನಗೊಂಡ, ಹನಮಂತ ಮಸೂತಿ, ಶಾಂತಪ್ಪ ತೊರವಿ ಸೇರಿದಂತೆ ಇತರರು ಇದ್ದರು.

