ಆಲಮಟ್ಟಿಯಲ್ಲಿ ಉರ್ದು ಭಾಷಾ ಕಲಿಕಾ ಹಬ್ಬಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಶೈಕ್ಷಣಿಕ ಬಲವರ್ಧನೆಗೆ ಕಲಿಕಾ ಹಬ್ಬ ಸಹಕಾರಿಯಾಗಿದೆ, ಸರ್ಕಾರಿ ಶಾಲೆಗಳಲ್ಲಿ ಬರುವ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಕರು ತನು ಮನದಿಂದ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.
ಆಲಮಟ್ಟಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ನಿಡಗುಂದಿ ಉರ್ದು ಕ್ಲಸ್ಟರ್ ನ ಕಲಿಕಾ ಹಬ್ಬವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾವಣೆ ಸಹಜ ನಿಯಮ, ಬದಲಾವಣೆಗೆ ತಕ್ಕಂತೆ ನಾವು ಕೂಡಾ ಸ್ಮಾರ್ಟ್ ಆಗಿ, ಜತೆಗೆ ಮಕ್ಕಳನ್ನು ಸ್ಮಾರ್ಟ್ ಮಾಡಬೇಕಿದೆ. ಈ ಕಲಿಕಾ ಹಬ್ಬಗಳಿಂದ ಸುತ್ತಮುತ್ತಲಿನ ಶಾಲೆಗಳ ಮಕ್ಕಳೊಂದಿಗೆ ಸ್ಪರ್ಧಿಸುವ ಮನೋಭಾವನೆ ಬೆಳೆಯುತ್ತದೆ, ಪೋಷಕರು ಕೂಡಾ ಮಕ್ಕಳ ಕಲಿಕೆಯ ಪ್ರಗತಿಯ ಮೇಲೆ ನಿರಂತರ ನಿಗಾ ಇಡಬೇಕು ಎಂದರು.
ಚಿಮ್ಮಲಗಿ ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಎಂ.ಆರ್. ಕಮತಗಿ ಮಾತನಾಡಿ, ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ, ಅದನ್ನು ಪೋಷಕರು ನಿಯಂತ್ರಣದಲ್ಲಿಡಬೇಕು, ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಮೊಬೈಲ್ ನೀಡಬೇಡಿ ಎಂದರು. ಪ್ರತಿ ವರ್ಷ, ೫ ರಿಂದ ೮ ನೇ ವರ್ಗದವರೆಗೆ ಪ್ರಥಮ ಬಂದ ಮಕ್ಕಳಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಎಸ್ ಡಿಎಂಸಿ ಅಧ್ಯಕ್ಷ ಹಾಜಿಲಾಲ್ ದಾವಲನಾಯಕ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಯು.ವೈ. ಬಶೆಟ್ಟಿ, ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ದಳವಾಯಿ, ಬಿ.ಜಿ. ಬನ್ನೂರ, ಬಿ.ಎಸ್. ಯರವಿನತೆಲಿಮಠ, ರಫೀಕ್ ಚಪ್ಪರಬಂದ್, ಕುತುಬುದ್ದೀನ್ ಒಂಟಿ, ಆಲಮಟ್ಟಿ ಜಾಮಿಯಾ ಮಸಿದಿ ಕಮಿಟಿ ಅಧ್ಯಕ್ಷ ಎ.ಡಿ. ಮಕಾನದಾರ್, ಉರ್ದು ಸಿಆರ್ ಪಿ ಖಾಜಿ, ಡಿ.ಎಸ್.ಚವ್ಹಾಣ, ಎಂ.ಎಸ್. ಭಂಡಾರಿ ಮತ್ತೀತರರು ಇದ್ದರು.

