ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಶುಕ್ರವಾರ ಬಬಲೇಶ್ವರ ತಾಲೂಕಿನ ಸಾರವಾಡ, ಹಲಗಣಿ ಮತ್ತು ಕಂಬಾಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಸಾರವಾಡ, ಹಲಗಣಿ ಹಾಗೂ ಕಂಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗಳ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಸಿಬ್ಬಂದಿ-ಮಕ್ಕಳ ಹಾಜರಾತಿ, ಮಕ್ಕಳ ಆರೋಗ್ಯ ತಪಾಸಣಾ ವರದಿಗಳನ್ನು ಪರಿಶೀಲಿಸಿ, ಅಂಗನವಾಡಿ ಕೇಂದ್ರಕ್ಕೆ ಪೇಂಟಿಂಗ್ ಮತ್ತು ಗೋಡೆ ಮೇಲೆ ಮಕ್ಕಳಿಗೆ ಆಕರ್ಷಣೀಯವಾಗುವಂತೆ ಕಾರ್ಟೂನ್ ಚಿತ್ರಗಳನ್ನು ಬರೆಯಿಸಬೇಕು, ವಿದ್ಯುತ್ ವ್ಯವಸ್ಥೆ, ೧೫ ನೇ ಹಣಕಾಸಿನ ಯೋಜನೆಯ ಅನುದಾನವನ್ನು ಬಳಸಿ ಕೇಂದ್ರದ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ಹಾಗೂ ಅಡುಗೆ ದಾಸ್ತಾನು ಸಂಗ್ರಹಿಸಲು ಕಂಟೇನರ್ ಖರೀದಿಸುವಂತೆ ಅವರು ಸೂಚನೆ ನೀಡಿದರು.
ಮದಗುಣಕಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಂಗನವಾಡಿ ಕೇಂದ್ರದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳು ಹಾಡಿದ ವಿವಿಧ ಬಗೆಯ ಹಾಡುಗಳನ್ನು ಆಲಿಸಿದ ಸಿಇಓರವರು ಮಕ್ಕಳ ಪ್ರತಿಭೆಗೆ ಹರ್ಷ ವ್ಯಕ್ತಪಡಿಸಿದರು.
ಸಾರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ವೀಕ್ಷಿಸಿ ಕಾಮಗಾರಿ ಕಡತದಲ್ಲಿರುವ ದಾಖಲಾತಿಗಳನ್ನು ಪರಿಶೀಲಿಸಿದರು.
ಕಂಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿಕಿತ್ಸೆಗೆ ಆಗಮಿಸಿದ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳ ಕುರಿತು ಚರ್ಚಿಸಿದರು. ಆಸ್ಪತ್ರೆಯ ಔಷಧ ಸಂಗ್ರಹಾಲಯವನ್ನು ವೀಕ್ಷಣೆ ಮಾಡಿ, ಪ್ರತಿ ತಿಂಗಳು ಸ್ಟಾಕ್ ರಿಜಿಸ್ಟರ್ ವಹಿಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಆಸ್ಪತ್ರೆಯ ಒಳಾಂಗಣ ಮತ್ತು ಹೊರಾಂಗಣ ಆವರಣಗಳನ್ನು ಪ್ರತಿನಿತ್ಯ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಡಾ. ವಿಜಯಕುಮಾರ ಅಜೂರ, ಬಬಲೇಶ್ವರ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೆ. ಎಸ್. ಪಠಾಣ, ಸಹಾಯಕ ನಿರ್ದೆಶಕರು(ಗ್ರಾ.ಉ) ವ್ಹಿ. ಎಸ್. ಹಿರೇಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಅನೀಲ ಹಳ್ಳಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪಿ. ಎಸ್. ಹೊಸಮನಿ, ಸಾರವಾಡ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಲ್ಲಣ್ಣಗೌಡ ಪಾಟೀಲ, ಚುನಾಯಿತ ಸದಸ್ಯರು, ಸಾರವಾಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೀತಾ ಕಲ್ಲವಗೋಳ, ಕಂಬಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಖಾ ಪಾಟೀಲ, ಹಲಗಣಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುಕ್ಕಣ್ಣ ನಾಯಕ, ನರೇಗಾ ತಾಂತ್ರಿಕ ಸಂಯೋಜಕ ಮಹೇಶ ಇಂಗಳೇಶ್ವರ, ಐಇಸಿ ಸಂಯೋಜಕರಾದ ಶಾಂತಪ್ಪ ಇಂಡಿ, ತಾಂತ್ರಿಕ ಸಹಾಯಕರಾದ ಶ್ರೀಧರ ರೆಡ್ಡಿ, ಮೋನಿಕಾ ಪೋಳ ಹಾಗೂ ಇತರರು ಉಪಸ್ಥಿತರಿದ್ದರು.

