ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇವರ ಒಲುಮೆ ಪಡೆದುಕೊಳ್ಳಲು ಹಲವಾರು ಮಾರ್ಗಗಳಿದ್ದು, ಅವುಗಳಲ್ಲಿ ತ್ಯಾಗ ಮತ್ತು ಕರುಣೆ ಉತ್ತಮವಾದದ್ದು ಎಂದು ಶಿರಹಟ್ಟಿ ಭಾವೈಕ್ಯತೆ ಸಂಸ್ಥಾನಮಠದ ಶ್ರೀಫಕೀರ ದಿಂಗಾಲೇಶ್ವರ ಜಗದ್ಗುರು ಹೇಳಿದರು.
ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀಮಡಿವಾಳೇಶ್ವರ ಗದ್ದಿಗಿಮಠದಲ್ಲಿ ಲಿಂ.ಸಿದ್ದಲಿಂಗ ಮಹಾಶಿವಯೋಗಿಗಳ ೩೧ನೇ ಪುಣ್ಯ ಸ್ಮರಣೋತ್ಸವ ಹಾಗೂ ಮಡಿವಾಳೇಶ್ವರ ಮಹಾಸ್ವಾಮಿಗಳವರ ೧೭ನೆಯ ಪಟ್ಟಾಧಿಕಾರದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಬಸವ ಪುರಾಣ ಕಾರ್ಯಕ್ರಮದಲ್ಲಿ ಶಿರಹಟ್ಟಿ ಭಾವೈಕ್ಯತೆ ಸಂಸ್ಥಾನಮಠದ ಶ್ರೀಫಕೀರ ದಿಂಗಾಲೇಶ್ವರ ಜಗದ್ಗುರು ಆಶೀರ್ವಚನ ನೀಡಿ ಮಾತನಾಡಿದ ಅವರು, ಮಹಾತ್ಮರ ಚರಿತ್ರೆಗಳನ್ನು ಆಲಿಸುವುದರ ಮೂಲಕ ಜೀವನದಲ್ಲಿ ಆದ್ಯಾತ್ಮಿಕ ಮತ್ತು ನೈತಿಕ ಚಿಂತನೆ ಅಳವಡಿಸಿಕೊಳ್ಳಬೇಕು. ಮಾನವ ಜನ್ಮ ಶಾಶ್ವತವಲ್ಲ. ಆದರೆ ಜೀವ ಸಂಕುಲದಲ್ಲಿ ಮಾನವ ಜನ್ಮಕ್ಕೆ ಶ್ರೇಷ್ಠ ಸ್ಥಾನವಿದೆ. ದುಡಿಮೆಯಲ್ಲಿ ಸಾಧ್ಯವಾದಷ್ಟು ದಾನ, ಧರ್ಮ ಮಾಡಿ ಸಮೃದ್ಧಿಯ ಬದುಕು ಸಾಗಿಸಬೇಕು. ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರುವಿನ ಸ್ಮರಣೆ ಮಾಡಬೇಕು ಎಂದರು.
ಈ ವೇಳೆ ಮಸಬಿನಾಳ ದಾಸೋಹಮಠದ ಸಿದ್ದರಾಮ ಮಹಾಸ್ವಾಮಿಗಳು, ಮಮದಾಪುರ ವಿರಕ್ತಮಠದ ಮುರುಗೇಂದ್ರ ಮಹಾಸ್ವಾಮಿಗಳು, ಶ್ರೀಮಠದ ಮಡಿವಾಳೇಶ್ವರ ಮಹಾಸ್ವಾಮಿಗಳು, ಬಿಳಗಿಯ ಸಂಗನಬಸವ ದೇವರು ಸಮ್ಮುಖ ವಹಿಸಿದ್ದರು. ಸುಂಟನೂರಿನ ಪ್ರವಚನಕಾರ ಬಂಡಯ್ಯ ಶಾಸ್ತ್ರಿಗಳು ಬಸವ ಪುರಾಣ ಹೇಳಿದರು. ಕಲಾವಿದ ಶಿವರುದ್ರಯ್ಯ ಗವಾಯಿಗಳು ಗೌಡಗಾವ, ಮಲ್ಲಿಕಾರ್ಜುನ ನರಸಲಗಿ, ರಮೇಶ ಕಟ್ಟಿ ಸಂಗಾವಿ, ಸಿದ್ದು ಲಿಂಗನಬಂಡಿ ಸಂಗೀತ ನೀಡಿದರು. ಪುರಾಣದಲ್ಲಿ ಕಡಕೋಳ, ಇಬ್ರಾಹಿಂಪುರ, ಕೋರವಾರ ಸೇರಿದಂತೆ ಗ್ರಾಮಸ್ಥರು ಇದ್ದರು.

