ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ವಿಶೇಷ ತರಬೇತಿ ನೀಡಿ ಎಸ್ಎಸ್ಎಲ್ಸಿ ಮಕ್ಕಳ ಪರೀಕ್ಷಾ ಫಲಿತಾಂಶದ ಪ್ರಗತಿ ಸಾಧಿಸಿ, ನಕಲು ಮುಕ್ತ ಪರೀಕ್ಷಾ ವಾತಾವರಣ ನಿರ್ಮಿಸಬೇಕು ಎಂದು ಜಮಖಂಡಿಯ ಶಿಕ್ಷಕರ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಮಂಗಲಾ ನಾಯಕ ಹೇಳಿದರು.
ಪಟ್ಟಣದ ಶ್ರೀ ಶಾಂತವೀರ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ಗ್ರಾಮೀಣ ವಲಯದ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆ ಮಾಡಲು ಕೈಗೊಳ್ಳಬೇಕಾದ ಹಲವಾರು ಚಟುವಟಿಕೆಗಳಾದ ನಾವಿನ್ಯಯುತ ಬೋಧನೆ, ರಸಪ್ರಶ್ನೆ, ದಿನಕ್ಕೊಂದು ಪರೀಕ್ಷೆ, ಘಟಕ ಪರೀಕ್ಷೆ, ಟಿ.ಎಲ್.ಎಂ ಬಳಕೆ ಮಾಡಿ ಬೋಧನೆ, ಸರಣಿ ಪರೀಕ್ಷೆ, ಪಾಲಕರ ಸಭೆ ಮುಂತಾದ ಚಟುವಟಿಕೆಗಳನ್ನು ಮಾಡಿ ಪ್ರಗತಿ ಹೊಂದಲು ಕಿವಿ ಮಾತು ಹೇಳಿ ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಅವರ ಕನಸಿನ ಕೂಸಾದ ಟಾರ್ಗೆಟ್ -625 ಕಾರ್ಯಕ್ರಮದ ಪ್ರಗತಿ ಕಂಡು ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ನಕಲು ಮುಕ್ತ ಪರೀಕ್ಷೆ ನಡೆಸುವದು. 8 ನೇ ವರ್ಗದಿಂದ ಪರೀಕ್ಷೆ ಮಾರ್ಗದರ್ಶನ ನೀಡುವದು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಪ್ರಗತಿ ಸಾಧಿಸುವಂತೆ ಮಾಡುವದು. ಮುಖ್ಯ ಗುರುಗಳು ತಮ್ಮ ಸಿಬ್ಬಂದಿಗಳ ಸಹಕಾರದಿಂದ ಎಲ್ಲ ಮಕ್ಕಳಿಗೆ ಸ್ಪಷ್ಟ ಓದು, ಶುದ್ಧ ಬರಹ ಹಾಗೂ ಸರಳ ಲೆಕ್ಕಗಳನ್ನು ಬರುವಂತೆ ಮಾಡುವದು. ಎಲ್ಲ ಪರೀಕ್ಷೆ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡುವದು, ಕೊಠಡಿ ಮೇಲ್ವಿಚಾರಕರಿಗೂ ಕೂಡ ಸೂಕ್ತ ತರಬೇತಿ ನೀಡಿ ನಕಲು ಮುಕ್ತ ಪರೀಕ್ಷೆ ನಡೆಸುವಂತೆ ಮಾಡುವದು.
ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ 20 ಅಂಶಗಳ ಕಾರ್ಯಕ್ರಮ, ಘಟಕ ಪರೀಕ್ಷೆಗಳು, ಸಹಪಠ್ಯ ಚಟುವಟಿಕೆಗಳು, ಸರಣಿ ಪರೀಕ್ಷೆಗಳು, ವಿಷಯ ವೇದಿಕೆಗಳು, ಟಾರ್ಗೆಟ್ -625 ಅನುಷ್ಠಾನ, ಪಾಸಿಂಗ್ ಪ್ಯಾಕೇಜ್, ಸ್ಕೋರಿಂಗ್ ಪ್ಯಾಕೇಜ್ ಮುಂತಾದ ವಿಶೇಷ ಚಟುವಟಿಕೆಗಳ ಮೂಲಕ ವಿಶೇಷ ಫಲಿತಾಂಶ ಸುಧಾರಣೆ ಗೋಸ್ಕರ ಹಮ್ಮಿಕೊಂಡಿರುವಂತ ಹಲವಾರು ವಿಶೇಷ ಚಟುವಟಿಕೆಗಳ ಕುರಿತು ವಿವರಿಸಿದರು.
ಡಯಟ್ ಹಿರಿಯ ಉಪನ್ಯಾಸಕ ಎ. ಎಸ್ .ಹತ್ತಳ್ಳಿ ಮಾತನಾಡಿ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾಠ ಬೋಧನೆ ಮಾಡಿ ಫಲಿತಾಂಶ ಸುಧಾರಣೆ ಮಾಡಬೇಕು. ಮುಖ್ಯ ಗುರುಗಳು ಹೇಗಿರುತ್ತಾರೋ ಹಾಗೆ ಶಾಲೆ ಇರುತ್ತದೆ ಎನ್ನುವ ಮೂಲಕ ಸುಂದರವಾದ ಶೈಕ್ಷಣಿಕ ವಾತಾವರಣ ಹೊಂದಿರುವ ಕಲಿಕಾ ವಾತಾವರಣ ಹೊಂದಿರುವ ಶಾಲೆಯ ಪರಿಸರವನ್ನು ನಿರ್ಮಿಸಬೇಕು ಎಂದು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಎಸ್. ಡಿ.ಮೋಸಲಗಿ, ಪ್ರಭು ಬಿರಾದಾರ , ಹಣಮಂತ ಬಡಿಗೇರ, ಭೀಮನಗೌಡ ಬಿರಾದಾರ, ಸುರೇಶ ಕುಪ್ಪಿ, ರವೀಂದ್ರ ಯಲಡಗಿ, ಎಲ್. ಟಿ. ಮುಲ್ಲಾ, ಬಿ.ಸಿ.ಹತ್ತಿ, ರೇಣುಕಾ ಕೊಣ್ಣೂರ, ಆರ್.ಎಚ್. ಪುರೋಹಿತ, ಶಾಂತೇಶ ಅವಟಿ, ನಂದು ಲಮಾಣಿ ಇದ್ದರು.

