ಭೂ ಪರಿಹಾರ ಬರದಿದ್ದರೂ ಕಾಮಗಾರಿ ಆರಂಭ | ಆತಂಕದಲ್ಲಿ ಭೂ ಮಾಲೀಕರು | ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ!
ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಹಾರಾಷ್ಟ್ರ ಕರ್ನಾಟಕ ಸಂಪರ್ಕಿಸುವ ೫೪೮ (ಬಿ) ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಭೂ ಮಾಲೀಕರಿಗೆ ಇದುವರೆಗೂ ಭೂ ಪರಿಹಾರವೇ ಜಮಾ ಮಾಡಿಲ್ಲ. ಆದರೆ ಕಾಮಗಾರಿ ಪ್ರಾರಂಭವಾಗಿದ್ದು ನಮಗೆ ಪರಿಹಾರ ಬರುತ್ತದೋ ಇಲ್ಲವೋ ಎಂಬ ಬಗ್ಗೆ ಭೂ ಮಾಲೀಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಮಹಾರಾಷ್ಟ್ರ ರಾಜ್ಯದ ಮುರಮ್ ಗ್ರಾಮದಿಂದ ಕರ್ನಾಟಕದ ವಿಜಯಪುರ ನಗರದವರೆಗೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಜಿಸಿಬಿ ಹಿಟಾಚಿ ಯಂತ್ರಗಳ ಮುಖಾಂತರ ಮಣ್ಣು ತೆಗೆದು ಅದಕ್ಕೆ ಗರಸು ತುಂಬುವ ಪ್ರಕ್ರಿಯೆ ನಡೆದಿದೆ. ಇನ್ನೂ ಹಲವೆಡೆ ಗರಸು ಸಿಗದೇ, ಮಣ್ಣು, ಗುಂಡುಕಲ್ಲುಗಳನ್ನು ತುಂಬಲಾಗುತ್ತಿದೆ.
ಭೂ ಮಾಲೀಕರಿಗೆ ಪರಿಹಾರ ನೀಡದೆ ಕಾಮಗಾರಿ ಪ್ರಾರಂಭಿಸಬಾರದು ಎಂದು ಸುಪ್ರೀಂ ಕೋರ್ಟ್ ಒಂದು ಪ್ರಕರಣದಲ್ಲಿ ಆದೇಶ ನೀಡಿದೆ. ಆದರೂ ಸಹಿತ ಈ ರಸ್ತೆ ಹಿಡಿದ ಗುತ್ತಿಗೆದಾರ ಭೂ ಮಾಲೀಕರಿಗೆ ಪರಿಹಾರ ಜಮಾ ಆಗದಿದ್ದರೂ ಸಹಿತ ಕಾಮಗಾರಿ ಪ್ರಾರಂಭಿಸಿದ್ದಾರೆ. ಕಾಮಗಾರಿ ಸಹ ಕಳಪೆ ಮಟ್ಟದಿಂದ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಂಬಂಧಪಟ್ಟಇಲಾಖೆಯ ಅಧಿಕಾರಿಗಳು ಪ್ರತೀ ದಿನ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕು. ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದರೆ ಅವರಿಗೆ ಉತ್ತಮ ರಸ್ತೆ ನಿರ್ಮಾಣ ಮಾಡುವಂತೆ ಸೂಚಿಸಬೇಕು. ಒಮ್ಮೆ ರಸ್ತೆ ನಿರ್ಮಾಣ ಮಾಡಿದರೆ ಕನಿಷ್ಠ ೫-೧೦ ವರ್ಷಗಳ ಅವಧಿಯವರೆಗಾದರೂ ರಸ್ತೆ ಕೆಡದ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಸಾರ್ವಜನಿಕ ಆಶಯವಾಗಿದ್ದು ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಬೇಕಿದೆ.
“ಭೂ ಮಾಲೀಕರಿಗೆ ಭೂ ಪರಿಹಾರ ನೀಡಿದ ಬಳಿಕವಷ್ಟೇ ಕಾಮಗಾರಿ ಪ್ರಾರಂಭಿಸಲು ಒಂದು ಕೇಸ್ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೂ ಸಹ ಈ ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರ ನಮಗೆ ಹಣ ಜಮಾ ಆಗಿಲ್ಲವಾದರೂ ಕಾಮಗಾರಿ ಪ್ರಾರಂಭಿಸಿದ್ದಾರೆ, ಕೂಡಲೇ ನಮಗೆ ಭೂ ಪರಿಹಾರ ನೀಡಬೇಕು.”
*- ಇಂಗಳಗಿ ಗ್ರಾಮದ ನೊಂದ ರೈತ
“ಈಗಾಗಲೇ ಪ್ರತಿಶತ ೮೦ರಷ್ಟು ಅವಾರ್ಡ್ ಆಗಿದೆ, ಪೂರ್ಣ ಪ್ರಮಾಣದಲ್ಲಿ ಅವಾರ್ಡ್ ಮಾಡಿದ ನಂತರ ಭೂಮಿ ಕಳೆದುಕೊಂಡವರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ. ಸುಪ್ರೀಂ ಕೋರ್ಟ ಆದೇಶದ ಬಗ್ಗೆ ನನಗೆ ಮಾಹಿತಿ ಇಲ್ಲ.”
– ಅಬಿದ್ ಗದ್ಯಾಳ
ಕಂದಾಯ ಉಪ ವಿಭಾಗಾಧಿಕಾರಿಗಳು, ಇಂಡಿ ಉಪವಿಭಾಗ

