ನಿಜ ಶರಣ ಅಂಬಿಗರ ಚೌಡಯ್ಯ ಆಲ್ಬಂ ಗೀತೆ ಬಿಡುಗಡೆ ಮಾಡಿದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ. ಸಂಗಮೇಶ ಉಪಾಸೆ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಿಜ ಶರಣ ಅಂಬಿಗರ ಚೌಡಯ್ಯನವರು ೧೨ನೆಯಶತಮಾನದ ಶರಣರಲ್ಲಿ ಅಗ್ರಗಣ್ಯರಾಗಿ ಸಮಾಜದ ಉದ್ದಗಲಕ್ಕೂ ಆಳವಾಗಿ ಬೇರೂರಿದ್ದ ಮೌಢ್ಯಾಚಾರಣೆಯ ವಿರುದ್ಧ ಧ್ವನಿ ಎತ್ತಿದ ಕ್ರಾಂತಿ ವಚನಕಾರ ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ. ಸಂಗಮೇಶ ಉಪಾಸೆ ಹೇಳಿದರು.
ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಇವರ ಸಾಹಿತ್ಯ, ರಾಜು ಎಮ್ಮಿಗನೂರ ಇವರ ಸಂಯೋಜನೆ ಹಾಗೂ ಕನ್ನಡ ಕೋಗಿಲೆ ವಿಜೇತ ಖಾಸೀಂ ಅಲಿ ಇವರ ಗಾಯನದಲ್ಲಿ ಮೂಡಿ ಬಂದ ನಿಜ ಶರ ಅಂಬಿಗರ ಚೌಡಯ್ಯ ಆಲ್ಬಂ ಗೀತೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೌಡ್ಯತೆಯಲ್ಲಿ ದೇವರನ್ನು ಕಾಣದೆ, ಕಪಟತೆಯ ಜೀವನ ನಡೆಸದೇ ಅಂತರಂಗ ಮತ್ತು ಬಹಿರಂಗ ಶುದ್ಧೀಕರಣವಾಗಿರಿಸಿ, ಯಾರನ್ನು ಕಡೆಗಣಿಸದೆ ಸಾಮಾನ್ಯ ಜನರ ನಡುವೆ ಅಸಾಮಾನ್ಯರಂತೆ ಬದುಕಿ ಸನ್ಮಾರ್ಗದ ದಾರಿಯಲ್ಲಿ ಸಾಗಿದವನು ಮಾತ್ರ ಯೋಗಿಯಾಗಲು ಸಾಧ್ಯ ಎಂದು ಹೇಳಿದಲ್ಲದೆ ವಚನಗಳ ಉದ್ದಕ್ಕೂ ಸಾಮರಸ್ಯ ಸಹೋದರತೆ ಸಾರಿ, ಸಮಾನತೆ ಮತ್ತು ಕಾಯಕಕ್ಕೆ ಪ್ರಾಮುಖ್ಯತೆ ನೀಡಿ, ಇದ್ದದ್ದನ್ನು ಇದ್ದ ಹಾಗೇಯೆ ಕೆಚ್ಚೆದೆ ಮತ್ತು ದಿಟ್ಟತನದಿಂದ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ, ನೇರ ನುಡಿಯ ನಿಷ್ಠುರವಾದಿ ವಚನಕಾರ ಅಂಬಿಗರ ಚೌಡಯ್ಯ ಎಂದರು.
ಈ ವೇಳೆ ಡಾ.ಜ್ಯೋತಿರ್ಲಿಂಗ ಹೊನಕಟ್ಟಿ ಹಾಗೂ ಆರಕ್ಷಕ ಮೌಲಾಲಿ ಆಲಗೂರ ಮಾತನಾಡಿ ಅಂಬಿಗರ ಚೌಡಯ್ಯ ನವರು ಜನರಲ್ಲಿ ಸಮಾನತೆಯ ಬೀಜ ಬಿತ್ತಿ. ಅಸ್ಪೃಶ್ಯತೆ, ಅಸಮಾನತೆ, ಜಾತೀಯತೆ, ಲಿಂಗ ಭೇದ, ಮೇಲು ಕೀಳು, ದಬ್ಬಾಳಿಕೆ, ದೌರ್ಜನ್ಯಗಳಂತ ಹಿಂಸಾತ್ಮಕ ಕೃತ್ಯಗಳನ್ನು ತಮ್ಮ ಹರಿತವಾದ ವಚನ ಸಾಹಿತ್ಯದ ಮೂಲಕ ಕಟುವಾಗಿ ಖಂಡಿಸಿ, ಜನರಲ್ಲಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಆಚಾರ ವಿಚಾರಗಳ ಕುರಿತು ಅರಿವು ಮೂಡಿಸಿದಲ್ಲದೆ, ದೇವನೊಬ್ಬ ನಾಮ ಹಲವು ಎಂಬ ಸಂದೇಶವನ್ನು ಜಗಕ್ಕೆ ಸಾರಿದ್ದಾರೆ ಎಂದು ಹೇಳಿದರು.
ಆಲ್ಬಂ ಗೀತೆ ಬಿಡುಗಡೆಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ.ಸಂಗಮೇಶ ಉಪಾಸೆ, ಆರಕ್ಷಕ ಮೌಲಾಲಿ ಆಲಗೂರ ಬೋರಗಿ, ರಾಜು ಎಮ್ಮಿಗನೂರ ಖಾಸೀಂ ಅಲಿ ಇದ್ದರು.

