ವಿಜಯಪುರದಲ್ಲಿ ೨ದಿನಗಳ ಉದ್ಯೋಗ ಮೇಳ | ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಡ ಪ್ರತಿಭಾವಂತ ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಚಿವ ಎಂ.ಬಿ.ಪಾಟೀಲ ಅವರ ಆಶಯದಂತೆ ಟೊಯೊಟಾ ಕಂಪನಿ ವಿಜಯಪುರದಲ್ಲಿಯೇ ಎರಡು ದಿನಗಳ ಉದ್ಯೋಗ ಮೇಳ ಆಯೋಜಿಸಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ಉದ್ಯೋಗ ಮೇಳ ಏರ್ಪಡಿಸಲು ಸಚಿವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ ಎಂದು ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಪಾಲಿಟೆಕ್ನಿಕ್ ನಲ್ಲಿ ಇಂದು ಬುಧವಾರದಿಂದ ಆರಂಭವಾಗಿರುವ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಎಂಜನಿಯರಿಂಗ್ ಮತ್ತಿತರ ಕೋರ್ಸುಗಳಿಗೆ ಪ್ರವೇಶ ಪಡೆಯಲಾಗದೆ ಐಟಿಐ ಮತ್ತು ಡಿಪ್ಲೋಮಾ ಓದುತ್ತಾರೆ. ಈ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಇಂಥ ಉದ್ಯೋಗ ಮೇಳಗಳು ನೆರವಾಗಲಿವೆ. ಟೊಯೊಟಾ ಕಿರ್ಲೋಸ್ಕರ್ ಕಂಪನಿಯವರು ಮಾನವೀಯ ಮೌಲ್ಯಗಳೊಂದಿಗೆ ಸಿಬ್ಬಂದಿಯ ಹಿತ ಕಾಪಾಡುವ ಹೃದಯವಂತಿಕೆ ಹೊಂದಿದ್ದಾರೆ. ವೃತ್ತಿ ಕೌಶಲ್ಯಕ್ಕೆ ಆದ್ಯತೆ ನೀಡುವ ಜಪಾನ ಮೂಲದ ಈ ಕಂಪನಿಯಲ್ಲಿ ಕೆಲಸಕ್ಕೆ ಸೇರುವವರು ತಮ್ಮ ಸಾಮರ್ಥ್ಯದ ಮೂಲಕ ಯಾವುದೇ ಉನ್ನತ ಸ್ಥಾನ ಅಲಂಕರಿಸಲು ಅವಕಾಶಗಳಿವೆ. ಬಸವನಾಡಿನ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಸ್ವಂತ ಜಿಲ್ಲೆಯಲ್ಲಿಯೇ ಉದ್ಯೋಗ ಬಯಸುವ ಬದಲು ಮನೆ ಬಾಗಿಲಿಗೆ ಬಂದಿರುವ ಸದಾವಕಾಶವನ್ನು ಬಳಸಿಕೊಂಡು ಬೇರೆ ಊರುಗಳಿಗೆ ತೆರಳಿ ಕೆಲಸ ಮಾಡುವ ಮೂಲಕ ವೃತ್ತಿ ನೈಪುಣ್ಯಕ್ಕೆ ತಕ್ಕಂತೆ ವೇತನ, ಬಡ್ತಿ ಮತ್ತಿತರ ಸೌಲಭ್ಯಗಳನ್ನು ಪಡೆಯಬಹುದು. ಈ ಮೂಲಕ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸದೃಢಪಡಿಸಿಕೊಂಡು ತವರೂರಿನ ಕೀರ್ತಿಯನ್ನು ಎತ್ತಿ ಹಿಡಿಯಬಹುದು ಎಂದು ಅವರು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್.ವಿ ಕುಲಕರ್ಣಿ ಮಾತನಾಡಿ, ಮುಂಬರುವ ದಿನಗಳಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಸ್ಟಾರ್ಟ್ ಅಪ್ ಕಂಪನಿ ಪ್ರಾರಂಭಿಸಲಿದೆ. ಈ ಮೂಲಕ ಉದ್ಯಮಿಗಳಾಗಲು ಬಯಸುವ ಯುವಕರ ಸಬಲೀಕರಣಕ್ಕೆ ಕೈಜೋಡಿಸಲಿದೆ. ವೃತ್ತಿಪರ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳು ಕಾರ್ಯದಕ್ಷತೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಕಾರ್ಪೋರೇಟ್ ಕಂಪನಿಗಳಲ್ಲಿ ಉತ್ತಮ ಕೆಲಸ ಮತ್ತು ಸಂಬಳ ಹೊಂದಿರುವ ಹುದ್ದೆಗಳನ್ನು ಪಡೆಯಲು ನೆರವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೂಟರ್ಸ್ ಪ್ರೈವೇಟ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಾದ ದಯಾನಂದ ಮತ್ತು ರವಿ ದೊಡ್ಡಹಳ್ಳಿ, ಬಿ.ಎಲ್.ಡಿ.ಇ ಸಿಇಟಿ ನಿರ್ದೇಶಕ ಡಾ.ವಿ.ಜಿ.ಸಂಗಮ, ಬಿ.ಎಲ್.ಡಿ.ಇ ಐಟಿಐ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಡಿ.ಪಡಸಲಗಿ ಉಪಸ್ಥಿತರಿದ್ದರು.
ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಪ್ರಾಚಾರ್ಯ ಪಿ.ಬಿ.ಕಳಸಗೊಂಡ ಸ್ವಾಗತಿಸಿದರು. ಶಿಲ್ಪಾ ಜಗದಾಳೆ ನಿರೂಪಿಸಿದರು. ಪ್ರವೀಣ ತಮ್ಮಣ್ಣವರ ವಂದಿಸಿದರು.

