ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಂದಿನ ಅವಧಿಗೆ ಮೇಯರ್ ಮತ್ತು ಉಪಮೇಯರ್ ಭಾರತೀಯ ಜನತಾ ಪಾರ್ಟಿಯವರೆ ಆಗಬೇಕೆಂದು ಪಟ ತೊಟ್ಟಿದ್ದೇವೆ. ಹೀಗಾಗಿ ಸ್ವಾಭಿಮಾನದಿಂದ ಬಿಜೆಪಿಗೆ ಮತ ನೀಡಿ, ನಮ್ಮ ಅಭ್ಯರ್ಥಿ ಗೆಲ್ಲಿಸುವ ಶಪಥ ಮಾಡಬೇಕು ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಹಾನಗರ ಪಾಲಿಕೆ ವಾರ್ಡ್ ನಂ.29 ರ ಉಪಚುನಾವಣೆ ಪ್ರಚಾರಾರ್ಥವಾಗಿ ಸೋಮವಾರ ಸಂಜೆ ಬಿಜೆಪಿ ಅಭ್ಯರ್ಥಿ ಪರವಾಗಿ ರಾಜಾಜಿನಗರ ಮತ್ತಿತರೆ ಕಡೆ ಮತಯಾಚನೆ ಮಾಡಿ, ನಂತರ ಆಂಜನೇಯ ದೇವಸ್ಥಾನ ಹತ್ತಿರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಸದ್ಯ ಮಹಾನಗರ ಪಾಲಿಕೆಯಲ್ಲಿ ಲೂಟಿ ನಡೆದಿದ್ದು, ನಮ್ಮವರನ್ನು ಮೇಯರ್ ಮಾಡಿ, ಅದನ್ನು ತಡೆಯುತ್ತೇವೆ. ಸಾಕಷ್ಟು ಅನುದಾನ ಕೂಡ ಬರುವುದಿದೆ. ಉಳಿದ ಅಭಿವೃದ್ಧಿ ಕೆಲಸಗಳನ್ನು ಮುಗಿಸಿ ನಗರವನ್ನು ಮಾದರಿ ನಗರವನ್ನಾಗಿ ಮಾಡಲಾಗುವುದು. ಹೀಗಾಗಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಶೇ 100 ರಷ್ಟು ಮತದಾನ ಮಾಡಬೇಕು. ಕನಿಷ್ಠ 4 ಸಾವಿರ ಮತಗಳ ಲೀಡ್ ಕೊಡಬೇಕು. ತಾವುಗಳು ನಿರಂತರವಾಗಿ ಮತ ನೀಡಿದರೆ, ನಾನು ಮತ್ತು ನಮ್ಮ ತಂಡ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ನೀಡುತ್ತೇವೆ ಎಂದು ಹೇಳಿದರು.
ನಾವು ಒಂದಾಗದಿದ್ದರೆ, ಅವರು ಶೇ 30 ರಿಂದ 40 ರಷ್ಟು ಆದರೆ, ಹಿಂದೂಗಳು ಗ್ರಾಮ ಪಂಚಾಯಿತಿ ಸದಸ್ಯರಾಗುವುದು ಕಷ್ಟವಾಗುತ್ತದೆ. ಸಿದ್ದರಾಮಯ್ಯನವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಿತ್ತೇನೆ ಎಂದು ಹೇಳಿದರೂ, ಅವರಿಗೆ ಒಂದು ಮತ ನೀಡುವುದಿಲ್ಲ. ಅವರ ಅಭ್ಯರ್ಥಿಗೆ ಮತ ನೀಡುವರು. ನಮ್ಮ ವಿಜಯಪುರದ ಜನ ಜಾಗೃತರಿದ್ದಾರಂತ ನಾನು ಗೆದ್ದಿದ್ದೇನೆ ಎಂದರು.
ರೈತರ, ಮಠ-ಮಾನ್ಯಗಳು, ಸರ್ಕಾರಿ ಆಸ್ತಿಗಳನ್ನು ವಕ್ಫ್ ಮಾಡುವ ಹುನ್ನಾರದ ವಿರುದ್ಧ ನಡೆಸಿದ ಹೋರಾಟದಿಂದ ಕಾಂಗ್ರೆಸ್ ದವರ ಬಾಯಲ್ಲಿ ಹಿಂದೂ ಶಬ್ದ ಬರುವಂತೆ ಮಾಡಿದೇವು. ವಕ್ಫ್ ಅದಾಲತ್ ನಡೆಸಲು ಬಂದಿದ್ದ ಜಮೀರ್ ಅಹ್ಮದ್ ಖಾನ್ ರಾಜ್ಯದಲ್ಲಿ ಓಡಾದಂತೆ ಮಾಡಿದೇವು. ಇವರ ದೂರಾಡಳಿತ ತಡೆಯಲು ಹೊಡೆದಾಟ ಮಾಡುವ ಅವಶ್ಯಕತೆಯಿಲ್ಲ. ತಪ್ಪದೆ ಮತ ನೀಡಿದರೆ ಸಾಕು ಎಂದು ಹೇಳಿದರು.
ನಗರದಲ್ಲಿ ಸಾಕಷ್ಟು ಹಸುಗಳಿದ್ದು, ಅವುಗಳ ಜನರು ಎಸೆಯುವ ಪ್ಲಾಸ್ಟಿಕ್ ತಿಂದು ಸಾಯುತ್ತಿದ್ದಾವೆ. ಹೀಗಾಗಿ ಪ್ಲಾಸ್ಟಿಕ್ ಎಸೆಯದೆ ಸಂಗ್ರಹಿಸಿಟ್ಟು ಕಸದ ವಾಹನಗಳಿಗೆ ಹಾಕಿ. ಪ್ರಾಣಿಗಳಿಗೆ ಒಂದು ರೊಟ್ಟಿ ಹಾಕಿ ಪಣ್ಯ ಪಡೆದುಕೊಳ್ಳಿ ಎಂದು ಹೇಳಿದರು.
ಅಭ್ಯರ್ಥಿ ಗಿರೀಶ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಕುಮಾರ ಗಡಗಿ, ಮಳುಗೌಡ ಪಾಟೀಲ, ರಾಹುಲ್ ಜಾಧವ, ವಿಠ್ಠಲ ಹೊಸಪೇಟ, ಜವಾಹರ ಗೋಸಾವಿ, ಮುಖಂಡರಾದ ಚಂದ್ರಶೇಖರ ಕವಟಗಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಪಾಂಡು ಸಾಹುಕಾರ ದೊಡಮನಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಮಹಿಳೆಯರು, ನಾಗರಿಕರು ಭಾಗವಹಿಸಿದ್ದರು.

