ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಬೇನಾಳ ಗ್ರಾಮಸ್ಥರ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಹಳ್ಳಿಯ ಬಾಲಕಿಯರು ಖೋಖೋ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸಕರ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮತಕ್ಷೇತ್ರದ ಎಲ್ಲಾ ಕ್ರೀಡಾಪಟುಗಳಿಗೂ ಆರ್ಥಿಕ ನೆರವಿನ ಜತೆ ಅವರಿಗೆ ಎಲ್ಲಾ ರೀತಿಯ ಕ್ರೀಡಾಸಾಮಗ್ರಿ ಒದಗಿಸುವುದಾಗಿ ಸಕ್ಕರೆ, ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ರಾತ್ರಿ ಅಲ್ಲಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಗ್ರಾಮಸ್ಥರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದರು.
ರಾಜ್ಯ ಮಟ್ಟದ ಖೋಖೋ ಕ್ರೀಡೆಯನ್ನು ನಮ್ಮ ಬಸವನಾಡಿನಲ್ಲಿ ಯಶಸ್ವಿಯಾಗಿ ಸಂಘಟಿಸಿದ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅದಕ್ಕಾಗಿ ತಮ್ಮೆಲ್ಲಾ ಶಕ್ತಿ, ಪ್ರತಿಭೆಯನ್ನು ಪಣಕ್ಕೆ ಹಚ್ಚಿ ಸಂಯೋಜಿಸಿದ್ದಾರೆ. ಅವರ ಈ ಕಾರ್ಯ ಪ್ರಶಂಸನಾರ್ಯ ಎಂದರು. ಖೋಖೋ ಕ್ರೀಡಾಳುಗಳಿಗೆ ಮಾರ್ಗದರ್ಶನ ನೀಡಿದ ಶಿಕ್ಷಕ ಎನ್.ಬಿ. ದಾಸರ ಕಾರ್ಯವೂ ಶ್ಲಾಘನೀಯ ಎಂದರು.
ಸಂಘಟಕ ಚಂದ್ರಶೇಖರ ನುಗ್ಗಲಿ ಅವರ ಕಾರ್ಯವೈಖರಿಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು. ಶಿಗ್ಗಾವಿ ಉಪಚುನಾವಣೆ ಹಿನ್ನಲೆಯಲ್ಲಿ ಕ್ರೀಡಾಕೂಟಕ್ಕೆ ಬಾರದ್ದಕ್ಕೆ ಸಂಘಟಕರಲ್ಲಿ ಸಚಿವರು ಕ್ಷಮೆ ಕೋರಿದರು.
ಇದೇ ಸಂದರ್ಭದಲ್ಲಿ ಬೇನಾಳ ಗ್ರಾಮಸ್ಥರೂ ಕೂಡಾ ಸಂಗ್ರಹಿಸಿದ್ದ ಒಂದು ಲಕ್ಷ ರೂ ಕೊಕ್ಕೊ ಸಂಘಟಕ ಚಂದ್ರಶೇಖರ ನುಗ್ಗಲಿ ಅವರಿಗೆ ನೀಡಿದರು.
ರಾಜ್ಯ ಮಟ್ಟದ ಖೋಖೋ ಸಂಘಟಕ ಹಾಗೂ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಬರಗಾಲದಲ್ಲಿಯೇ ಬಿತ್ತಿ ಬೆಳೆಯುವ ಬೇನಾಳ ಗ್ರಾಮಸ್ಥರ ಒತ್ತಾಸೆಯ ಮೇರೆಗೆ ರಾಜ್ಯ ಮಟ್ಟದ ಕೊಕ್ಕೊ ಸಂಘಟಿಸಲಾಗಿದೆ ಎಂದರು. ಪ್ರವಾಸಿ ತಾಣವಾಗಿರುವ ಆಲಮಟ್ಟಿಯಲ್ಲಿ ಪ್ರವಾಸಿಗರು ಸೇರಿ ಪ್ರತಿಯೊಂದಕ್ಕೂ ವಾಸ್ತವ್ಯಕ್ಕೆ ತೊಂದರೆಯಾಗಿದ್ದು, ಯಾತ್ರಿ ನಿವಾಸ ನಿರ್ಮಿಸಿ ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು.
ಜಗತ್ತಿನಲ್ಲಿಯೇ ಕಬ್ಬಿಗೆ ಅತಿ ಹೆಚ್ಚು ಬೆಲೆ ನೀಡುತ್ತಿರುವ ರಾಷ್ಟ್ರಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ, ಸದ್ಯ ರಾಜ್ಯದಲ್ಲಿ 80 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ.
ಕಬ್ಬು ಹಾಗೂ ಮೆಕ್ಕೆಜೋಳಕ್ಕೆ ಮುಂದಿನ 10 ವರ್ಷಗಳವರೆಗೂ ಬೆಲೆ ಹೆಚ್ಚಿರುತ್ತದೆ, ಹೀಗಾಗಿ ಈ ಎರಡು ಬೆಳೆ ಬೆಳೆಯುವ ಕಡೆ ರೈತರು ಆದ್ಯತೆ ನೀಡಬೇಕು ಎಂದರು. ಈ ಬಾರಿ ಮೆಕ್ಕೆಜೋಳ ಕ್ವಿಂಟಲ್ ಗೆ 3200 ರೂ ದರವಿದೆ ಎಂದರು.
ಬಿಇಓ ವಸಂತ ರಾಠೋಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ, ಯುವ ಮುಖಂಡ ಸಂಗಮೇಶ ಬಳಿಗಾರ, ಎಸ್ಡಿಎಂಸಿ ಅಧ್ಯಕ್ಷ ಮುನ್ನಾ ಬೆಣ್ಣಿ, ಸುನಿಲ ನಾಯಕ, ಎಸ್.ಎಚ್. ಬಿರಾದಾರ, ಬಿ.ಎಚ್. ಗಣಿ, ಹನುಮಂತಪ್ಪ ಇಲ್ಯಾಳ, ಮಹೇಶ ಗಾಳಪ್ಪಗೋಳ, ಬಸವರಾಜ ಹಂಚಲಿ ಮತ್ತೀತರರು ಇದ್ದರು.
1 ಲಕ್ಷ ರೂ ಘೋಷಿಸಿದ ಸಚಿವರು
ಬಸವನಾಡಿನಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಕೊಕ್ಕೊ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಏರ್ಪಡಿಸಿದ ಸಂಘಟಕರಿಗೆ 1,00,001 ರೂ ವೈಯಕ್ತಿಕ ದೇಣಿಗೆ ನೀಡುವುದಾಗಿ ಹಾಗೂ ಡಿಸಿಸಿ ಬ್ಯಾಂಕ್ ವತಿಯಿಂದಲೂ ಪ್ರತ್ಯೇಕ ಸಹಾಯ ಧನವನ್ನು ಒದಗಿಸುವುದಾಗಿ ಸಚಿವ ಶಿವಾನಂದ ಪಾಟೀಲ ಘೋಷಿಸಿದರು.

