ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ 11 ಸರ್ಕಾರಿ ಶಾಲೆಗಳಿಗೆ ಪೀಠೋಪಕರಣಗಳು ಹಾಗೂ ಕಲಿಕಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿರುವ ಮುಂಬೈನ ತಪತಿದಾಸ್ ಮತ್ತು ತುಳಸಿದಾಸ್ ವಜ್ರದಾಸ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಸಂದೀಪ ಮರ್ಚಂಟ್ಸ್ ದಂಪತಿಗಳನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಬುಧವಾರ ಸನ್ಮಾನಿಸಿ, ಅಭಿನಂದನಾ ಪತ್ರ ನೀಡಿದರು.
ವಿಜಯಪುರ ನಗರಾದ್ಯಂತ ಸಂಚರಿಸಿದ ಮರ್ಚಂಟ್ಸ್ ದಂಪತಿಗಳು, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಅಭಿವೃದ್ಧಿಪಡಿಸಿರುವ ರಸ್ತೆಗಳು, ಉದ್ಯಾನವನಗಳು, ಓಪನ್ ಜಿಮ್, ಸುಂದರ ಬೀದಿ ದೀಪಗಳು, ಪುತ್ಥಳಿಗಳ ಸ್ಥಾಪನೆ ಸೇರಿದಂತೆ ಮತ್ತಿತರೆ ಅಭಿವೃದ್ಧಿ ಕಾರ್ಯಗಳ ಕುರಿತು ಹಾಗೂ ಶಾಸಕರ ಅಧ್ಯಕ್ಷತೆಯ ಸಿದ್ದೇಶ್ವರ ಸಂಸ್ಥೆಯ ರಾಮನಗೌಡ ಬಾ.ಪಾಟೀಲ ಯತ್ನಾಳ ಗೋ ರಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಮಾಡಿರುವ ಅತ್ಯುತ್ತಮ ವ್ಯವಸ್ಥೆ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದರು.
ಟ್ರಸ್ಟ್ನ ವಿಜಯಪುರ ಸಂಯೋಜಕ ವಿಶ್ವನಾಥ ಸಿಂದಗಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರಾಜಶೇಖರ ಕುರಿಯವರ, ಯುವ ಮುಖಂಡ ಯೋಗೀಶ ನಡುವಿನಕೇರಿ ಸೇರಿದಂತೆ ಮತ್ತಿತರರು ಇದ್ದರು.

