ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತಿ ಮತ್ತು ಡೆಲ್ ಟೆಕ್ನಾಲಜಿ ಮತ್ತು ಶಿಕ್ಷಣ ಪೌಂಡೇಶನ್ ಇವರ ಸಹಯೋಗದಲ್ಲಿ ನ.೧೩ರಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅರಿವು ಕೇಂದ್ರಗಳ ಗ್ರಂಥಾಲಯ ಮೇಲ್ವಿಚಾರಕರಿಗೆ “ನಾಯಕತ್ವ ಹಾಗೂ ಕೌಶಲ್ಯಾಭಿವೃದ್ಧಿ” ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಬಿ. ಎಸ್. ರಾಠೋಡ ಅವರು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಬಡ ಮಕ್ಕಳ ಇಚ್ಛಾ ಶಕ್ತಿಗೆ ಅನುಗುಣವಾಗಿ ಗ್ರಾಮೀಣ ಮಕ್ಕಳ ಶಿಕ್ಷಣದ ಗುಣಮಟ್ಟ ಉತ್ತಮಗೊಳಿಸುವ ನಿಟ್ಟಿನಲ್ಲಿ ಪಠ್ಯದಲ್ಲಿರುವ ವಿಷಯಗಳನ್ನು ಮಾತ್ರ ತಿಳಿಯದೆ ಸ್ಪರ್ಧಾತ್ಮಕ ಜ್ಞಾನದ ಬಗ್ಗೆಯೂ ಕೂಡ ಗಮನ ಹರಿಸುವಂತೆ ಅವರನ್ನು ಜಾಗೃತಗೊಳಿಸಬೇಕು. ಇದಕ್ಕೆ ಪೂರಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಐ.ಎ.ಎಸ್, ಐ.ಪಿ.ಎಸ್, ಇಂಜಿನಿಯರಿಂಗ್ ಹೀಗೆ ಅನೇಕ ಪರೀಕ್ಷೆಗಳಿಗೆ ಓದಲು ಸಹಾಯಕವಾಗುವಂತೆ ಗ್ರಾಮ ಪಂಚಾಯತಿ ವತಿಯಿಂದ ವಿವಿಧ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇರಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗ್ರಂಥಾಲಯಗಳಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಡಿಜಿಟಲ್ ಪರಿಕರಗಳಾದ ಟಿವ್ಹಿ, ಮೊಬೈಲ್ ಗಳನ್ನು ಪೂರೈಸಲಾಗಿದೆ. ಈ ಕುರಿತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗ್ರಂಥಾಲಯಗಳತ್ತ ಆಕರ್ಷಿಸಲು ಶ್ರಮವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ ಅವರು ಮಾತನಾಡಿ, ಗ್ರಂಥಾಲಯಗಳ ಮೇಲ್ವಿಚಾರಕರು ಗ್ರಂಥಾಲಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸೇವೆಗಳನ್ನು ಒದಗಿಸಬೇಕು. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಉತ್ತಮ ಗಾಳಿ, ಬೆಳಕು ಹಾಗೂ ಓದುಗರಿಗೆ ಆಸನದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಪ್ರತಿ ದಿನ ಕಡ್ಡಾಯವಾಗಿ ಇ-ಹಾಜರಾತಿ ಮೂಲಕ ಹಾಜರಾತಿ ಸಲ್ಲಿಸಬೇಕು. ಗ್ರಂಥಾಲಯಗಳಲ್ಲಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಾರ್ವಜನಿಕರು ಸಮರ್ಪಕವಾಗಿ ಗ್ರಂಥಾಲಯಗಳಿಗೆ ಭೇಟಿ ನೀಡಿ ಸದುಪಯೋಗಪಡಿಸುವಂತೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಆಡಳಿತ ಶಾಖೆಯ ಅಧೀಕ್ಷಕರಾದ ತಹಸೀನ ಗುಣಕಿ, ಜಿ.ಪಂ ನ ಆಡಳಿತ ಶಾಖೆಯ ಪ್ರಥಮ ದರ್ಜೆ ಸಹಾಯಕರಾದ ಗೌರಮ್ಮ ಪಾಟೀಲ, ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಅರವಿಂದ ಬಿರಾದಾರ, ತರಬೇತುದಾರರಾದ ಮಲ್ಲಿಕಾರ್ಜುನ ಪಕೀರಪ್ಪಗೋಳ, ಗ್ರಂಥಾಲಯದ ಹಿರಿಯ ಮೇಲ್ವಿಚಾರಕರಾದ ಶಿವಾನಂದ ದೇಸಾಯಿ, ಗ್ರಾಮ ಡಿಜಿ ವಿಕಾಸನ ಜಿಲ್ಲಾ ಸಂಯೋಜಕಿ ಇಂದು ಬಿ., ಸಂಯೋಜಕರಾದ ನಾಗೇಶ ಅಂಬುರೆ, ಯಲಗೂರ ಗ್ರಾ.ಪಂ. ಗ್ರಂಥಾಲಯದ ಮೇಲ್ವಿಚಾರಕರಾದ ಯಲಗೂರೇಶ ಬಿ ಪಾತ್ರದ ಹಾಗೂ ಬಸವನ ಬಾಗೇವಾಡಿ, ವಿಜಯಪುರ ಮತ್ತು ನಿಡಗುಂದಿ ತಾಲೂಕುಗಳ ಎಲ್ಲ ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

