ಆಲಮಟ್ಟಿ ಪ.ಪೂ.ಡಿಗ್ರಿ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭ
ಆಲಮಟ್ಟಿ: ಶಿಕ್ಷಣ ಜ್ಞಾನವೇ ಶ್ರೇಷ್ಠ. ಅದು ಎಲ್ಲಕ್ಕಿಂತಲೂ ಮಿಗಿಲು. ಸತತ ಓದು, ನಿರಂತರ ಅಧ್ಯಯನದಿಂದ ಭವಿಷ್ಯತ್ತಿನ ಕನಸನ್ನು ನನಸಾಗಿಸಿಕೊಳಬೇಕು. ಆಸಕ್ತಿದಾಯಕ ಕಲಿಕೆಯಿಂದ ಜ್ಞಾನದ ಬೆಳಕಿನಲ್ಲಿ ಹೆಜ್ಜೆ ಗುರುತು ಮೂಡಿಸಬೇಕು ಎಂದು ಕರ್ನಾಟಕ ಪ್ರದೇಶ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸಂಯುಕ್ತಾ ಪಾಟೀಲ ಯುವಜನತೆಗೆ ಸಲಹೆ ನೀಡಿದರು.
ಸ್ಥಳೀಯ ಎಸ್.ವ್ಹಿ.ವ್ಹಿ ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪ.ಪೂ ಹಾಗೂ ಪ್ರಥಮ ದರ್ಜೆ ಕಲಾ,ವಾಣಿಜ್ಯ ಮಹಾವಿದ್ಯಾಲಯದ ೨೦೨೪-೨೫ ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪುಸ್ತಕಗಳೇ ಒಡನಾಡಿಗಳಾಗಬೇಕು. ಅವೇ ನಿಜ ಸ್ನೇಹಿಗಳು. ಕಾರಣ ಪುಸ್ತಕ ಸಂಗಮದಲ್ಲಿ ಬೆಸೆದು ಮಿಂದೆಳಬೇಕು. ಜ್ಞಾನ ಸಂಪತ್ತಿನ ಗರಿಮೆಯಲ್ಲಿ ಮಿನುಗಬೇಕು ಎಂದರು.
ಇಂದಿನ ದಿನಗಳಲ್ಲಿ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಇವುಗಳಲ್ಲಿ ಬದುಕಿನ ಸಂತಸ ಹುದುಗಿದೆ. ಪಠ್ಯೇತರ ಚಟುವಟಿಕೆಗಳು ಅಪಾರ ಜ್ಞಾನ ವಿಸ್ತಾರ ವೃದ್ಧಿಸುತ್ತವೆ.ಆ ದಿಸೆಯಲ್ಲಿ ಓದಿನೊಂದಿಗೆ ಹಾಗೂ ಕ್ರೀಡಾ ಸಾಂಸ್ಕೃತಿಕ ಸಿರಿಯೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಹೆಚ್ಚು ಯುವಕರನ್ನು ಹೊಂದಿರುವ ದೇಶವೇ ಪ್ರಗತಿದತ್ತ ಸಾಗುತ್ತವೆ.ನಮ್ಮ ದೇಶದಲ್ಲಿ ಶೇ ೩೫ ಕ್ಕಿಂತಲೂ ಹೆಚ್ಚು ಯುವಜನತೆ ಇದ್ದಾರೆ. ಯುವಕರು ನವ ಇತಿಹಾಸ ಬರೆಯುವ ಕ್ಷಮತೆ ಹೊಂದಬೇಕು. ದೇಶದ ನಾಳೆಯ ಸುಂದರ ಭವಿಷ್ಯ ಯುವಜನತೆಯ ಕೈಯಲ್ಲಿದೆ. ಉತ್ಸುಕತೆಯ ಉತ್ತಮ ಆಲೋಚನೆಯುಳ್ಳ ಚೇತನಶೀಲ ಯುವಜನಾಂಗವೇ ದೇಶದ ಅಮೂಲ್ಯ ಸಂಪತ್ತು. ಇಡೀ ಭಾರತದೇಶ ವಿಶ್ವಗುರು ಪಟ್ಟಿ ಧರಿಸುವ ಕಾಲ ಸನ್ನಿಹಿತವಾಗುತ್ತಲಿದೆ ಎಂದರು.
ಯುವಜನತೆ ವಿದ್ಯೆಯ ಜ್ಞಾನ ಅಳವಡಿಸಿಕೊಳ್ಳಬೇಕು. ಆತ್ಮವಿಶ್ವಾಸದ ಪಯಣದಲ್ಲಿ ಸಾಗಬೇಕು. ಆ ದಿವ್ಯ ಆತ್ಮವಿಶ್ವಾಸ ಭರಿತ ಭಾವ ಮೊಗದಲ್ಲಿರಲಿ. ಎಲ್ಲರೂ ಹೇಳುವ ಮಾತು ಆಲಿಸಿ. ಬಳಿಕ ನಿಮ್ಮ ಮನಸ್ಸಿಗೆ ತೋಚುವ ಸಂಕಲ್ಪದ ಗಟ್ಟಿ ನಿರ್ಧಾರ ಸ್ವಂತಿಕೆಯಿಂದ ತೆಗೆದುಕೊಳ್ಳಿ. ಅದುವೇ ನಿಮ್ಮ ಜೀವನದಲ್ಲಿ ದೊಡ್ಡ ಶಕ್ತಿ ತುಂಬುವಂಥದ್ದು.ಆ ನಿಟ್ಟಿನಲ್ಲಿ ಪ್ರಯತ್ನವೆಂಬ ಆವಿಷ್ಕಾರದ ಜಗದಲ್ಲಿ ಕನಸು ಕಾಣಿ.ನನಸು ಮಾಡಿಕೊಳ್ಳಿ ಎಂದು ಯುವ ಸಮೂಹಕ್ಕೆ ಕಿವಿಮಾತು ಹೇಳಿದರು.
ಕಲಿಕಾಸಕ್ತಿ ಮೈಗೂಡಿಸಿಕೊಂಡು ಪ್ರಜ್ಞಾವಂತರಾಗಿ. ಪ್ರಜ್ಞಾವಂತ ಯುವಕರು ರಾಜಕೀಯ ಕ್ಷೇತ್ರದಲ್ಲಿಂದು ದಾಪುಗಾಲು ಹಾಕುವುದು ಅಗತ್ಯವಿದೆ. ಸಮಾಜದ ಕಾಳಜಿಯುತ ಅಭಿವೃದ್ಧಿಗೆ ಯುವಕರು ರಾಜಕೀಯ ರಂಗಕ್ಕೆ ಪ್ರವೇಶಿಸಲು ಮುಂದಾಗಬೇಕು ಎಂದು ಸಂಯುಕ್ತಾ ಪಾಟೀಲ ಅಭಿಪ್ರಾಯಿಸಿದರು. ಇಲ್ಲಿ ಮಹಾಶರಣ ಮಂಜಪ್ಪ ಹರ್ಡೇಕರ ಶಿಕ್ಷಣ ಸಂಸ್ಥೆ, ಪರಂಪರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯುವಜನತೆ ಮಂಜಪ್ಪನವರ ತತ್ವ,ಸಿದ್ದಾಂತ ಅಳವಡಿಸಿಕೊಂಡು ಉನ್ನತ ಚಿಂತನೆಗಳ ಮೂಲಕ ಬೆಳಕಿಗೆ ಬರಬೇಕು ಎಂದರು.
ಮುಖ್ಯ ಅತಿಥಿ ಮುದ್ದೇಬಿಹಾಳದ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಬಿ.ಎಮ್.ಹಿರೇಮಠ ಮಾತನಾಡಿ, ಹರ್ಡೇಕರ ಮಂಜಪ್ಪನವರು ತಪಸ್ಸು ಗೈದ ಪವಿತ್ರ ಸ್ಥಳಯಿದು.ಅವರು ಮರೆಯಾಗಿದ್ದರೂ ಅವರ ಆತ್ಮ ಇಲ್ಲಿಯೇ ಇದೆ. ಮಂಜಪ್ಪನವರು ಇಲ್ಲಿ ವೀರಶೈವ ವಿದ್ಯಾಲಯ ಸ್ಥಾಪಿಸಿದ ಪುಣ್ಯಾತ್ಮರು. ಅವರಲ್ಲಿ ಅಪಾರ ಮೌಲ್ಯಗಳಿದ್ದವು.ಆಕಾರ, ಮೌಲ್ಯಗಳಗಿಂತ ಮಂಜಪ್ಪನವರು ದೊಡ್ಡವರು. ಆದರೆ ಸಮಾಜದಲ್ಲಿ ಮಂಜಪ್ಪನವರಿಗೆ ಸರಿಯಾದ ನ್ಯಾಯ ದೊರೆಯದಿರುವುದು ವಿಷಾದ. ಸಿದ್ದಲಿಂಗ ಶ್ರೀ, ಎಂ.ಪಿ.ಪ್ರಕಾಶ, ಜಾಮದಾರ ಈ ಮೇಧಾವಿಗಳು ಮಂಜಪ್ಪನವರ ಆಚಾರ, ವಿಚಾರಗಳಿಗೆ ನ್ಯಾಯ ಒದಗಿಸಲು ಆತ್ಮಸಾಕ್ಷಿಯಾಗಿ ಕೆಲಸ ಮಾಡಿದ್ದಾರೆ. ಇಂಥ ಪುಣ್ಯ ಪುರುಷನನ್ನು ಎಂದಿಗೂ ಮರೆಯಲಾಗದು. ಈ ವಿದ್ಯಾಲಯದಲ್ಲಿ ಎಲ್ಲ ಜನಾಂಗದ ಮಕ್ಕಳು ಕಲಿಕಾಭ್ಯಾಸ ಮಾಡುತ್ತಿರುವುದು ವಿಶೇಷ. ಈ ಸಂಸ್ಥೆಗೆ ನ್ಯಾಯ,ನಿಷ್ಠುರ ಧಾರಣೆಯ ಗದುಗಿನ ತೋಂಟದ ಲಿಂ,ಸಿದ್ದಲಿಂಗ ಶ್ರೀಗಳವರು ಹೊಸ ಅಯಾಮ ನೀಡಿದ್ದಾರೆ ಎಂದರು.
ಮೌಲ್ಯಯುತ ಜೀವ ಹೊಂದಿದ್ದ ತೋಂಟದ ಸಿದ್ದಲಿಂಗ ಶ್ರೀಗಳ ಕೈಯಲ್ಲಿ ಸದಾ ಬಸವ ತತ್ವದ ಕೋಲಿತ್ತು. ವೈಚಾರಿಕ ಭಾವದ ಪೂಜ್ಯರು ಗೈದ ಅಕ್ಷರ ದಾಸೋಹದ ಕೈಂಕರ್ಯ ಸದಾಕಾಲವೂ ಸ್ಮರಣೀಯ ಎಂದ ಅವರು, ವಿದ್ಯಾರ್ಥಿಗಳಿಂದು ಒಳ್ಳೆಯ ವಿದ್ಯೆ,ಬುದ್ದಿ,ಸಂಸ್ಕಾರ,ಸಂಸ್ಕೃತಿಗಳ ಸ್ಪಷ್ಟತೆ ಗುರಿ ಹೊಂದಿ ಜೀವನದಲ್ಲಿ ಮೇಲೆ ಬರಬೇಕೆಂದರು.
ನಿವೃತ್ತ ಪ್ರಾಚಾರ್ಯ, ಬ.ಬಾಗೇವಾಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ತೋಂಟದ ಸಿದ್ದಲಿಂಗ ಶ್ರೀಗಳವರ ಸೇವೆ ಜ್ಞಾನ ದಾಸೋಹದ ಅವಿಭಾಜ್ಯ ಅಂಗ.ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿ,ಉನ್ನತಿಯೇ ಅವರ ಕನಸು, ಗುರಿಯಾಗಿತ್ತು. ಹೃದಯವಂತ ತೋಂಟದ ಸಿದ್ದಲಿಂಗ ಪೂಜ್ಯರ ಹಲ ವೈವಿಧ್ಯಮಯ ಸೇವಾ ಪಯಣ ಅಮೋಘ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ವ್ಹಿ. ವ್ಹಿ. ಸಂಸ್ಥೆ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ, ವಿದ್ಯಾರ್ಥಿ ಜೀವನ ತಪಸ್ಸಿದ್ದಂತೆ. ಕ್ರಿಯಾಶೀಲತೆವೆಂಬ ಮೂಲ ತತ್ವದ ಸಂಪ್ರದಾಯದಡಿ ಪರಿಶ್ರಮ ಮತ್ತು ಶ್ರದ್ಧೆಯಿಂದ ಕಲಿಕೆ ಸಾಗಿಸಿಕೊಂಡರೆ ಗುರಿ ತಲುಪಲು ಸಾಧ್ಯ. ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳು ಕಲಿಕಾಸಕ್ತಿಗೆ ಪ್ರೇರೇಪಿಸುತ್ತದೆ ಎಂದರು.
ಅರಳೆಲೆ ಕಟ್ಟಿಮನಿ ಹಿರೇಮಠದ ಸಿದ್ದರೇಣುಕ ಶಿವಾಚಾರ್ಯ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಮುಖ್ಯ ಅತಿಥಿಗಳಾಗಿ ಆಲಮಟ್ಟಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಕವಿತಾ ಬಡಿಗೇರ ವೇದಿಕೆಯಲ್ಲಿದ್ದರು.
ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ, ಎಚ್.ಎನ್.ಕೆಲೂರ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಉಪನ್ಯಾಸಕರಾದ ಪಿ.ವಾಯ್.ಧನಶೆಟ್ಟಿ, ಎಂ.ಎಸ್.ಸಜ್ಜನ, ಶ್ರೀಮತಿ ಮಮತಾ ಕರೇಮುರಗಿ, ಧನರಾಜ ಸಿಂಗಾರಿ, ಟಿ.ಎಫ್.ದಾಸರ, ಶಾಂತೂ ತಡಸಿ, ಕಾಲೇಜು ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಗುನ್ನಾಪೂರ, ಪ್ರತಿನಿಧಿ ಸ್ನೇಹಾ ಜಗತಾಪ ಸೇರಿದಂತೆ ಪದವಿ ಕಾಲೇಜು ಸಿಬ್ಬಂದಿಗಳು ಇತರರಿದ್ದರು. ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಸ್ವಾಗತಿಸಿದರು. ಟಿ.ಬಿ.ಕರದಾನಿ ನಿರೂಪಿಸಿದರು. ಎಚ್.ಎನ್.ಕೆಲೂರ ವಂದಿಸಿದರು

