ದೇವರಹಿಪ್ಪರಗಿ: ಸಕಲ ಜೀವಿಗಳಿಗೆ ಲೇಸನ್ನು ಬಯಸುವವನೇ ಪರಮಾತ್ಮ ಎನ್ನುವಂತೆ ಈ ನಾಡಿನ ಒಳಿತಿಗೆ ಈ ಭೂಲೋಕದಲ್ಲಿ ಉದಯಿಸಿದ ದೇವಾನುದೇವತೆಗಳಲ್ಲಿ ಅಫಜಲಪುರ ತಾಲ್ಲೂಕಿನ ಘತ್ತರಗಿಯ ಪುರದೊಡತಿ ಭಾಗ್ಯವಂತಿ ಮಾತೆಯು ಕೂಡಾ ಅಗ್ರಗಣ್ಯಳಾಗಿದ್ದಾಳೆ ಎಂದು ಚಿಣಮಗೇರಾ ಮಹಾಮಠದ ಶ್ರೀ ಶಿವಶರಣಯ್ಯ ಪೂಜ್ಯರು ಹೇಳಿದರು.
ಅವರು ದೇವರಹಿಪ್ಪರಗಿ ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಐದೇಶಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಘತ್ತರಗಿ ಭಾಗ್ಯವಂತಿ ದೇವಿಯ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭೀಮಾ ನದಿ ತೀರದಲ್ಲಿ ನೆಲೆಸಿ ನಾಡಿನ ಭಕ್ತರ ಹರಕೆ ಆಶೋತ್ತರಗಳನ್ನು ಈಡೇರಿಸುವಲ್ಲಿ ಘತ್ತರಗಿ ಭಾಗ್ಯವಂತಿ ದೇವಿಯು ನಿರತರಾಗಿದ್ದಾಳೆ. ಜೊತೆಗೆ ನಾವೆಲ್ಲರೂ ಸಂಸ್ಕಾರವAತರಾಗಿ ಬಾಳಿ ಸಂಸ್ಕಾರಯುತ ಸಮಾಜವನ್ನು ಕಟ್ಟಬೇಕಾಗಿದೆ. ಮೊಬೈಲ್ ಹಾವಳಿಯಿಂದಾಗಿ ಇಂದು ಸಂಸ್ಕಾರ ಕಡಿಮೆಯಾಗಿದೆ. ಹಿರಿಯರು ಮಕ್ಕಳಿಗೆ ಸಂಸ್ಕಾರ ನೀಡಲು ತಮ್ಮ ಸಮಯವನ್ನು ಮೀಸಲಿಡಬೇಕು. ಸಂಪ್ರದಾಯಗಳನ್ನು ಕಾಟಾಚಾರಕ್ಕಾಗಿ ಪಾಲಿಸದೇ ಆಚಾರ ವಿಚಾರಗಳ ಉನ್ನತೀಕರಣಕ್ಕಾಗಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿ ಈ ನಾಡಿನ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಾಗಿದೆ ಎಂದು ಶಿವಶರಣಯ್ಯ ಶ್ರೀಗಳು ಹಿತವಚನ ಹೇಳಿದರು.
ಈ ಸಂದರ್ಭದಲ್ಲಿ ಗವಾಯಿಗಳಾದ ಸಿದ್ದರಾಮ ಕುಳೇಕುಮಟಗಿ, ತಬಲಾಜಿ ರೇವಣಸಿದ್ದ ಕೆ ಶಿವಣಗಿ ಸೇರಿದಂತೆ ಮುಳಸಾವಳಗಿ ಗ್ರಾಮದ ನೂರಾರು ಭಕ್ತರು ಇದ್ದರು.
Related Posts
Add A Comment