ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಶನಿವಾರ ನಡೆದ ಶೂಟೌಟ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಋಷಿಕೇಶ ಸೋನಾವಣೆ, ಈ ಪ್ರಕರಣ ಸಂಬಂಧ ಚಡಚಣ ಪಟ್ಟಣದವರೇ ಆದ ಆರೋಪಿ ಇಸ್ಮಾಯಿಲ್ ಗುಲಾಬಸಾಬ ಶೇಖ(29) ಮತ್ತು ಜಾಫರ್ ಲಾಲಸಾಬ ಮಸಳಿ(36) ಎಂಬುವರನ್ನು ಇಂದು ಮಧ್ಯಾಹ್ನ 12.10ರಕ್ಕೆ ಮಹಾರಾಷ್ಟ್ರದ ಸೋಲಾಪೂರದಲ್ಲಿ ಬಂಧಿಸಲಾಗಿದೆ. ಅಲ್ಲದೇ ಅವರ ಬಳಿಯಿದ್ದ ಒಂದು ಕಂಟ್ರಿ ಪಿಸ್ತೂಲು ಮತ್ತು ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.
ಅಲ್ಲದೇ, ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸಿದ ಪಿಎಸ್ಐ ಗಳಾದ ಸಂಜಯ ಕಲ್ಲೂರ, ಎಸ್. ವಿ. ಗೊಳಸಂಗಿ, ಎಎಸ್ಐ ರಂಗೂ ರಾಠೋಡ, ಪೇದೆಗಳಾದ ಎಂ. ಎನ್. ಹೊನ್ನಾಕಟ್ಟಿ, ಎಂ. ಜಿ. ಪವಾರ, ಆರ್. ಎಚ್. ಡೊಣಗಿ, ಮಲ್ಲು ದ್ಯಾಮಗೋಳ, ಶೇಖರ ಲಮಾಣಿ, ಎಸ್. ಜಿ. ನಾವಿ, ತನಿಖಾ ಸಹಾಯಕ ಎ. ಆರ್. ಮಕಾನದಾರ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಎಸ್ಪಿ ಋಷಿಕೇಶ ಸೋನಾವಣೆ ಶ್ಲಾಘಿಸಿದ್ದಾರೆ.
ಘಟನೆಯ ಹಿನ್ನೆಲೆ
ಚಡಚಣ ಪಟ್ಟಣದ ನೀವರಗಿ ಕ್ರಾಸ್ ಬಳಿ ಅವಜಿ ಎಂಬುವರ ಮನೆಯ ಹತ್ತಿರ ಜೂ. 16 ರಂದು ಶನಿವಾರ ಮಧ್ಯಾಹ್ನ 12.15 ಸುಮಾರಿಗೆ ಅಶೋಕ ಮಲ್ಲಪ್ಪ ಗಂಟಗಲ್ ಎಂಬುವರ ಮೇಲೆ ಯಾರೋ ಆರೋಪಿತರು ಯಾವುದೋ ಉದ್ದೇಶಕ್ಕಾಗಿ, ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಆತನ ಪತ್ನಿ ಮತ್ತು ಚಡಚಣ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯೆ ಸೋನಾಬಾಯಿ ಅಶೋಕ ಗಂಟಗಲ್ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಳಿಕ ಎಸ್ಪಿ ಋಷಿಕೇಶ ಸೋನಾವಣೆ ಅವರು ಈ ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಎಸ್ಪಿ ಶಂಕರ, ಮರಿಹಾಳ ಮತ್ತು ರಾಮನಗೌಡ, ಹಟ್ಟಿ ಅವರ ಮಾರ್ಗದರ್ಶನದಲ್ಲಿ ಇಂಡಿ ಡಿವೈಎಸ್ಪಿ ಜಗದೀಶ ಎಚ್. ಎಸ್, ಚಡಚಣ ಸಿಪಿಐ ಸುರೇಶ ಬೆಂಡೆಗುಂಬಳ ಪಿಎಸ್ಐ ಸಂಜಯ ಕಲ್ಲೂರ ಮತ್ತು ಸಿಬ್ಬಂದಿಯ ನೇತೃತ್ವದಲ್ಲಿ ತಂಡ ರಚಿಸಿದ್ದರು. ರೌಡಿಶೀಟರ್ ಆಗಿದ್ದ ಅಶೋಕ ಗಣಗಲ್ ಇತ್ತೀಚೆಗೆ ಜೈಲಿನಿಂದ ಪೆರೋಲ್ ಮೇಲೆ ಹೊರ ಬಂದಿದ್ದ. ತನ್ನ ಆತ ತನ್ನ ಹೊಲಕ್ಕೆ ಬೈಕಿನಲ್ಲಿ ಹೊರಡುವಾಗ ಗುಂಡಿನ ದಾಳಿ ನಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದ.
ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

