ಕೊಳಚೆ ಗುಂಡಿ ಖಾಲಿ: ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿದ ಪಪಂ

ದೇವರಹಿಪ್ಪರಗಿ: ಬಸ್ ನಿಲ್ದಾಣ ಕಂಪೌಂಡಿಗೆ ಹೊಂದಿಕೊಂಡಿರುವ ಕೊಳಚೆ ಗುಂಡಿ ತ್ಯಾಜ್ಯದ ಸಮಸ್ಯೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಜಾಗೆಯ ಮಾಲೀಕ ಸ್ಪಂದಿಸಿ ಮಲೀನ ನೀರು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿದರು.
ಪಟ್ಟಣದ ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು ಭಾನುವಾರ “ಉದಯರಶ್ಮಿ” ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಸುದ್ದಿ ಹಾಗೂ ಸಮಸ್ಯೆಗೆ ಸ್ಪಂದಿಸಿದ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಕೂಡಲೇ ಕಾರ್ಯಪ್ರವೃತ್ತರಾಗಿ ಜಾಗೆಯ ಮಾಲೀಕರಿಗೆ ನಿರ್ದೇಶನ ನೀಡಿದ ಪರಿಣಾಮ ಜಾಗೆಯ ಮಾಲೀಕರು ಸಹ ಕೂಡಲೇ ಸ್ಪಂದಿಸಿ ಭಾನುವಾರ ಮಲೀನ ನೀರನ್ನು ತೆರವುಗೊಳಿಸಿದರು.
ನಂತರ ಪಟ್ಟಣ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿ ಜೆಸಿಬಿಯೊಂದಿಗೆ ಆಗಮಿಸಿ ಗುಂಡಿಯಲ್ಲಿ ತುಂಬಿದ್ದ ತ್ಯಾಜ್ಯವನ್ನು ಬೇರೆಡೆ ಸಾಗಿಸಿ ಗುಂಡಿಯನ್ನು ಸ್ವಚ್ಛಗೊಳಿಸಿದರು.
ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ತಕ್ಷಣವೇ ಕಾರ್ಯ ನೆರವೇರಿಸಿದ ಮುಖ್ಯಾಧಿಕಾರಿ, ಜಾಗೆಯ ಮಾಲೀಕ ಹಾಗೂ ಪಟ್ಟಣ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿಗೆ ಸ್ಥಳೀಯ ಅಂಗಡಿ ಮಾಲೀಕರು ಹಾಗೂ ಎಲ್ಲ ವ್ಯಾಪಾರಸ್ಥರು ಅಭಿನಂದಿಸಿದ್ದಾರೆ.

