– ಚೇತನ ಶಿವಶಿಂಪಿ
ಮುದ್ದೇಬಿಹಾಳ: ಸರಿಸುಮಾರು ೫ ದಶಕಗಳ ನಂತರ ಅಯೋಧ್ಯೆ ನಗರಿಯಲ್ಲಿ ನಿರ್ಮಾಣವಾದ ರಾಮ ಮಂದಿರದಲ್ಲಿ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು.
ಪಟ್ಟಣದ ಪ್ರಮುಖ ರಸ್ತೆಗಳ ಬೀದಿ ದೀಪಗಳು ಕೇಸರಿ ಬಟ್ಟೆಯಿಂದ ಅಲಂಕೃತಗೊಂಡಿದ್ದವು. ಎಲ್ಲ ದೇವಸ್ಥಾನಗಳಲ್ಲಿ ಶ್ರೀರಾಮರಿಗೆ ವಿಶೇಷ ಪೂಜೆ, ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು. ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಶ್ರೀ ರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ, ಪಾನಕ ಹಂಚಿ ಭಕ್ತಿ ಸಮರ್ಪಿಸಿದರು. ಕೆಲವರು ತಮ್ಮ ಮಕ್ಕಳಿಗೆ ಶ್ರೀ ರಾಮರ ಹಾಗೂ ಸೀತಾ ಮಾತೆಯ ಉಡುಗೆ ತೊಡಿಸುವ ಮೂಲಕ ಶ್ರೀ ರಾಮಚಂದ್ರನ ದರ್ಶನ ಪಡೆದರು. ಯುವಕರು ಶುಭ್ರವಾದ ಬಿಳಿ ಬಟ್ಟೆ ತೊಟ್ಟು ಕೊರಳಿಗೆ ಕೇಸರಿ ಶಾಲು ಹಾಕಿ ತಮ್ಮ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಶ್ರೀರಾಮನಿರುವ ಕೇಸರಿ ಬಾವುಟವನ್ನು ಅಂಟಿಸಿ ಜೈ ಶ್ರೀರಾಮ ಜೈರಾಮ ಅಂತಾ ಜಯಘೋಷ ಹಾಕುತ್ತ ಊರೆಲ್ಲ ಸುತ್ತಿದರು. ಒಟ್ಟಾರೆ ಸೋಮುವಾರದಂದು ಪಟ್ಟಣ ಸೇರಿದಂತೆ ಹಲವು ಹಳ್ಳಿಗಳಲ್ಲಿ ಹಬ್ಬದಂತೆ ಸಂಭ್ರಮವನ್ನು ಆಚರಿಸಿದರು.
ಶ್ರೀ ರಾಘವೇಂದ್ರ ರಾಯರ ಮಠವನ್ನು ವಿಶೇಷ ದೀಪಗಳ ಮೂಲಕ ಅಲಂಕೃತಗೊಳಿಸಲಾಗಿತ್ತು. ವೆಂಕಟೇಶ ಅಚಾರ್ಯರು ಹಾಗೂ ಪಂಡಿತ ನರಹರಿ ಆಚಾರ್ಯ ಜೋಶಿ ಇವರಿಂದ ಜ.೧೩ ರಿಂದ ಸಂಪೂರ್ಣ ರಾಮಾಯಣ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜ.೨೨ ರಂದು ಬೆಳಿಗ್ಗೆಯಿಂದಲೇ ವಿಷ್ಣು ಸಹಸ್ರನಾಮ ಪಾರಾಯಣ, ಸುದರ್ಶನ ಹೋಮ, ಸುವರ್ಣ ಮಂತ್ರಾಕ್ಷತೆಯ ಪೂಜೆ, ಪುಷ್ಪಾರ್ಚನೆ, ತೀರ್ಥ ಪ್ರಸಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅಯೋಧ್ಯೆಯ ಶ್ರೀ ರಾಮ ಮಂದಿರದ ವಿಶೇಷತೆಯನ್ನು ಹಿಂದೂ ಪ್ರಮುಖ ಬಸವರಾಜ ನಂದಿಕೇಶ್ವರಮಠ ಅವರು ತಿಳಿಸಿಕೊಟ್ಟರು. ಸಂಜೆ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಗಣೇಶ, ಬಜಾರ ನ ದ್ಯಾಮವ್ವ ದೇವಿ, ಕುಂಬಾರ ಗಲ್ಲಿಯ ಗ್ರಾಮ ದೇವತೆ, ಶಾರದಾ ದೇವಿ, ಲಕ್ಷ್ಮೀ ವೆಂಕಟೇಶ್ವರ, ಬಜಾರ, ಮಾರುತಿ ನಗರ, ವಿದ್ಯಾ ನಗರ, ಕಿಲ್ಲಾ ಗಲ್ಲಿಯ, ಎಪಿಎಂಸಿಯಲ್ಲಿರುವ, ಹುಡ್ಕೋ ಬಡಾವಣೆಗಳ ಹನುಮಾನ ದೇವಸ್ಥಾನಗಳಲ್ಲಿ ಶ್ರೀ ರಾಮರಿಗೆ ಮತ್ತು ಪವಿತ್ರ ಮಂತ್ರಾಕ್ಷತೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಜಾರ ನ ಹನುಮಾನ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಬಾಂಧವರಿಂದ ಶ್ರೀರಾಮರಿಗೆ ವಿಶೇಷ ಪೂಜೆ ನೆರವೇರಿಸಿ ಭಜನೆ ನಡೆಸಿದರು. ಹುಡ್ಕೋ ಬಡಾವಣೆಯ ಗಾರ್ಡನ್ ಜಾಗೆಯಲ್ಲಿ, ವಾಲ್ಮೀಕಿ ವೃತ್ತದಲ್ಲಿ, ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಪ್ರಮುಖರು ಸ್ವಯಂ ಪ್ರೇರಿತರಾಗಿ ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದರು. ಕಾಳಿಕಾ ದ್ವಿಚಕ್ರ ವಾಹನ ಸರ್ವೀಸ್ ಸೆಂಟರ್ ನ ಮುಖ್ಯಸ್ಥ ಸಂತೋಷ ಅವರು ೧೦೦ ಲೀಟರ್ ಪಾನಕದ ಸೇವೆ ಕಲ್ಪಿಸಿದ್ದರು. ಫಕೀರೇಶ್ವರ ಡೈಗ್ನೋಸ್ಟಿಕ್ ನ ಮಾಲೀಕರು ಕರ ಸೇವಕರನ್ನು ದಂಪತಿಗಳ ಸಮೇತ ಸನ್ಮಾನಿಸಿ ಗೌರವಿಸಿದರು. ಈಶ್ವರ ಮತ್ತು ಬಸವ ಫ್ಲೆಕ್ಸ್ ಮಾಲೀಕರು ತಮ್ಮ ಅಂಗಡಿಯ ಎದುರು ಶ್ರೀರಾಮರ ಕಟೌಟ್ ನಿಲ್ಲಿಸಿ ಸಾರ್ವಜನಿಕರಿಗೆ ಸೆಲ್ಫಿಗಾಗಿ ಅವಕಾಶ ಕಲ್ಪಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

