ಹೆದ್ದಾರಿ ತಡೆ | ಟೈರುಗಳಿಗೆ ಬೆಂಕಿ | ಸಂಚಾರ ಅಸ್ತವ್ಯಸ್ತ | ರೈತರ ಆಕ್ರೋಶ
ಕೊಲ್ಹಾರ: ತಾಲುಕಿನ ಮಟ್ಟಿಹಾಳ ಗ್ರಾಮದಲ್ಲಿರುವ ಕೃಷ್ಣಾ ಭಾಗ್ಯ ಜಲನಿಗಮದ ಕಾರ್ಯಾಲಯಗಳ ಮುಂದೆ ಮುಳವಾಡ ಏತ ನೀರಾವರಿಯ ಯೋಜನೆಯ ಮೂಲಕ ಪಶ್ಚಿಮ ಮತ್ತು ಪೂರ್ವ ಕಾಲುವೆಗಳಿಗೆ ತಕ್ಷಣವೇ ನೀರು ಹರಿಯಬಿಡಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ, ರೈತ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯವರು ಮಂಗಳವಾರ ಧರಣಿ ಕೈಗೊಂಡರು.
ಬೀಳಗಿ ಬಾರಕೇಡ ರಾಜ್ಯ ಹೆದ್ದಾರಿಯ ಮಟ್ಟಿಹಾಳ ವೃತ್ತದಲ್ಲಿ ನೂರಾರು ರೈತರು ಸೇರಿ ಟೈರಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು. ಸುಮಾರು ೧೨ಘಂಟೆಯಿಂದ ಸಂಜೆ ೫ ಘಂಟೆಯವರೆಗೆ ಹೆದ್ದಾರಿಯನ್ನು ನಾಲ್ಕು ಕಡೆ ಪೂರ್ಣಪ್ರಮಾಣದಲ್ಲಿ ಬಂದ್ ಮಾಡಿ, ಕಾಲುವೆಗಳಿಗೆ ನೀರು ಹರಿಸುವ ತನಕ ನಾವುಗಳು ಸುಮ್ಮನಿರುವದಿಲ್ಲ, ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಬಿಡುವ ತನಕ ನಮ್ಮ ಹೋರಾಟ ನಿಲ್ಲುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ತುಳಸೀಗೇರಿ ಹಗೇದಾಳ ಮಾತನಾಡಿದರು.
ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ತಮ್ಮ ಮತಕ್ಷೇತ್ರದ ಭಾಗದಲ್ಲಿ ಬರುವ ಕಾಲುವೆಗಳಿಗೆ ಕವಟಗಿ ಮತ್ತು ಕಾರಜೋಳ ಏತನೀರಾವರಿ ಮೂಲಕ ನೀರನ್ನು ಬಳಸಿಕೊಳ್ಳುತ್ತಿದ್ದು, ವಿಜಯಪೂರ ಜಿಲ್ಲೆಯಲ್ಲಿಯೇ ಬರುವ ಬಸವನ ಬಾಗೇವಾಡಿ ಮತಕ್ಷೇತ್ರದ ರೈತರಿಗೆ ಏಕೆ ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದು ತಿಳಿಯದಾಗಿದೆ ಎಂದ ಅವರು, ಹಿಂಗಾರು ಮತ್ತು ಮುಂಗಾರು ಬೆಳೆಗಳಿಗೆ ನೀರು ಹರಿಸಬೇಕು ಎನ್ನುವ ಸರಕಾರದ ಆದೇಶವಿದ್ದರೂ ಪಾಲನೆ ಮಾಡದೇ ಇರುವದು ಜನಪ್ರತಿನಿಧಿಗಳ, ಅಧಿಕಾರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
ಸ್ಥಳಕ್ಕೆ ಕೊಲ್ಹಾರ ತಹಶೀಲ್ದಾರ ಎಸ್.ಎಸ್.ನಾಯ್ಕಲಮಠ, ಸಿಪಿಐ ಅಶೋಕ ಚವ್ಹಾಣ, ಪಿಎಸ್ಐ ಶ್ರೀಮತಿ ಎಸ.ಸಿ.ಗುರದಟ್ಟಿ, ಎಎಸ್ಐ ಎಚ್.ಎಸ್.ಗೌಡರ ಮತ್ತು ರೈತ ಮುಖಂಡರಾದ ಸೋಮು ಬಿರಾದಾರ. ಹಣಮಾಪೂರ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಕಾಂತ ಗಣಿ, ಹಣಮಂತಗೌಡ ಬಿರಾದಾರ, ನಿಂಗನಗೌಡ ಪಾಟೀಲ, ಶ್ರೀಶೈಲ ನಾ ಗಿಡ್ಡಪ್ಪಗೋಳ, ಅಪ್ಪಸಿ ಮಟ್ಯಾಳ, ಮುತ್ತು ಕೊಟಬಾಗಿ, ದಶರಥ ಈಟಿ, ಸಗರೆಪ್ಪ ಮುರನಾಳ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.


