ವಿಜಯಪುರ: ಜಿಲ್ಲೆಯಲ್ಲಿ ನಡೆದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿ ಪ್ರತಿಭಟನೆ ಮಾಡಿದ ಪ್ರಸಂಗ ಜರುಗಿದೆ.
ಜ. 21 ರಂದು ಭಾನುವಾರ ನಡೆದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಪರೀಕ್ಷೆಯು ವಿಜಯಪುರ ಜಿಲ್ಲೆಯ ಎಸ್ ಎಸ್ ಪ್ರೌಢಶಾಲೆಯಲ್ಲಿ ನಡೆದಿದ್ದು, ಅದು ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆ ಅಡಿಯಲ್ಲಿ ಬರುವ ಶಿಕ್ಷಣ ಸಂಸ್ಥೆಯಾಗಿದೆ.
ಎಸ್ ಎಸ್ ಪ್ರೌಢಶಾಲೆಯ ಪರೀಕ್ಷಾ ಕೊಠಡಿ ಸಂಖ್ಯೆ 8 ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಕೊಠಡಿಗೆ ಬರುವ ಮುಂಚೆಯೇ ಪ್ರಶ್ನೆ ಪತ್ರಿಕೆಯ ಕವರ್ ತೆರೆಯಲಾಗಿದ್ದು ಇದು ವಿದ್ಯಾರ್ಥಿಗಳ ಗಮನಕ್ಕೆ ಬಂದಿದೆ. ಪರೀಕ್ಷಾ ಕೊಠಡಿಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಇದಕ್ಕೆ ವಿರೋಧಿಸಿದರೂ ಇದನ್ನು ಗಣನೆಗೆ ತೆಗೆದುಕೊಳ್ಳದ ಕೊಠಡಿ ಮೇಲ್ವಿಚಾರಕರು ಒತ್ತಾಯಪೂರ್ವಕ್ಕಾಗಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯ ಬಂಡಲ್ ಗೆ ಸಹಿ ಪಡೆಯಲು ಮುಂದಾದಾಗ ವಿದ್ಯಾರ್ಥಿಗಳು ಇದಕ್ಕೆ ನಿರಾಕರಿಸಿದ್ದಾರೆ. ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ವರ್ಗದವರು ಮತ್ತು ಕೆಪಿಎಸ್ಸಿ ನೋಡಲ್ ಅಧಿಕಾರಿಗಳು ಬಂದು ಸಹಿ ಪಡೆಯದೆ ಪರೀಕ್ಷೆಯನ್ನು ನಡೆಸಲು ಮುಂದಾಗಿದ್ದಾರೆ
ಅನಿವಾರ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾದಾಗ ಈ ಗೊಂದಲದಿಂದ ಪರೀಕ್ಷೆಯ ಸಮಯ ಮೀರಿದ್ದರಿಂದ ನಿಮಗೆ ಹೆಚ್ಚುವರಿ ಸಮಯವಕಾಶ ನೀಡುತ್ತೇವೆ, ಪರೀಕ್ಷೆ ಬರೆಯಿರಿ ಎಂದು ಅಧಿಕಾರಿಗಳು ವಿದ್ಯಾರ್ಥಿಗಳ ಮನವೊಲಿಸಿದ್ದಾರೆ. ಪರೀಕ್ಷೆ ಬರೆಯಲು ಪ್ರಾರಂಭಿಸಿದ ವಿದ್ಯಾರ್ಥಿಗಳ ಸಮಯ ಮುಗಿದಿದ್ದು, ಅಧಿಕಾರಿಗಳು ಮಾತು ಕೊಟ್ಟಂತೆ ನಡೆದುಕೊಳ್ಳದೆ ಬಲವಂತವಾಗಿ ಓ ಎಂ ಆರ್ ಪತ್ರಿಕೆಯನ್ನು ಹಿಂಪಡೆದಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಪರೀಕ್ಷಾ ಕೊಠಡಿಯಿಂದ ಹೊರಬಂದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಈ ಪರೀಕ್ಷೆಯಲ್ಲಿ ಬಾರಿ ಅಕ್ರಮವಾಗಿದೆ, ಇದಕ್ಕೆ ಎಲ್ಲಾ ಪರೀಕ್ಷಾ ಸಿಬ್ಬಂದಿ ವರ್ಗ ಮತ್ತು ಮುಖ್ಯಸ್ಥರು ಕಾರಣರಾಗಿದ್ದು ಅವರ ಮೇಲೆ ಸೂಕ್ತವಾದ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಶೋಯಬಅಕ್ತರ ಚೋಸಗಾಂವ, ಬಸವರಾಜ ಬೊಮ್ಮನಹಳ್ಳಿ, ಸಂತೋಷ್ ಸಿಂಗ್ ರಜಪೂತ, ಸತೀಶ್ ಎಸ್ ರಾಥೋಡ, ಶ್ರೀಕಾಂತ್ ಹಂಚಿನಾಳ, ಸಾಗರ ಕಟ್ಟಿ, ಮಹೇಶ್ ತಳವಾರ ಮುಂತಾದವರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

