ಡಿಎಸ್ಸೆಸ್ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದಲ್ಲಿ ಹೆಣ್ಣೂರ ಶ್ರೀನಿವಾಸ ಅಭಿಮತ
ಆಲಮಟ್ಟಿ: ಒಳಮೀಸಲಾತಿ ಜಾರಿ ಮಾಡುವುದು ಕೇಂದ್ರದ ಕರ್ತವ್ಯ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದನ್ನು ತಪ್ಪು ಎನ್ನುತ್ತಿರುವ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಹೇಳಿಕೆ ದಲಿತರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರ ಶ್ರೀನಿವಾಸ ಹೇಳಿದರು.
ಇಲ್ಲಿಯ ಕರ್ನಾಟಕ ಗಾಂದಿ ಮಂಜಪ್ಪ ಹರ್ಡೇಕರ ಸ್ಮಾರಕದಲ್ಲಿ ಶನಿವಾರ ನಡೆದ ಎರಡು ದಿನದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವೇ ಸಂವಿಧಾನದ ೩೪೧(೩) ಕ್ಕೆ ತಿದ್ದುಪಡಿ ತಂದು ಒಳಮೀಸಲಾತಿ ಜಾರಿಗೆ ತಂದರೆ ಅದಕ್ಕೆ ಕಾನೂನು ಮಾನ್ಯತೆ ಸಿಗುತ್ತದೆ, ಇದು ನಮ್ಮ ಹಲವು ದಶಕಗಳ ಬೇಡಿಕೆ ಎಂದರು. ಯಾವುದೇ ಅರ್ಜಿಯನ್ನು ಹಾಕದೇ ಕೇಂದ್ರ ಸರ್ಕಾರ ಶೇ ೧೦ ರಷ್ಟು ಇಡಬ್ಲುಎಸ್ ಮೀಸಲಾತಿ ಜಾರಿಗೆ ತಂದಿತು. ಒಳಮೀಸಲಾತಿಗಾಗಿ ನಿರಂತರ ಹೋರಾಟ ನಡೆಸಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಪಾದಿಸಿದರು. ಒಳಮೀಸಲಾತಿ ಜಾರಿಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸರಿಯಾಗಿದೆ, ಕೇಂದ್ರವೇ ಇದನ್ನು ಅನುಷ್ಠನಕ್ಕೆ ತರಬೇಕು ಎಂದರು.
“ಮಾದಿಗ ಮುನ್ನಡೆ”, ಭೀಮ ಮುನ್ನಡೆ ಕಾರ್ಯಕ್ರಮ ಸಂಘಟಿಸಿ, ಮಾದಿಗ-ಚಲವಾದಿ ಅವರಲ್ಲಿಯೇ ಜಗಳ ಹಚ್ಚುವ ಕಾರ್ಯ ಆರ್ ಎಸ್ ಎಸ್ ಬೆಂಬಲದಿಂದ ಬಿಜೆಪಿಯವರು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಜಾತಿಗಳಲ್ಲಿಯೇ ವೈಷಮ್ಯ ಬೆಳೆಸುತ್ತಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಎಚ್.ಪಿ. ಸುಧಾಮದಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿಂದಗಿಯ ಸಂಗಪಾಲ ಬಂತೇಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ವಿಜಯನರಸಿಂಹ, ಸೂಲಿಕುಂಟೆ ರಮೇಶ, ಎಸ್. ವಿಘ್ನೇಶ್, ಸತ್ಯಭದ್ರಾವತಿ, ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಧಾನ ಸಂಚಾಲಕ ಬಸವರಾಜ ಕೌತಾಳ್, ಅಂಬಣ್ಣ ಅರೋಳಿಕರ್, ದಲಿತ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸಲು, ದಲಿತಾ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ರೇಣುಕಾ ಮಾದರ, ಪ್ರೊ ಸಿ.ಕೆ. ಮಹೇಶ್, ಭೀಮಸೇನ ಶ್ರೀನಿವಾಸ, ಜಿಲ್ಲಾ ಸಂಚಾಲಕ ಅಶೋಕ ಚಲವಾಧಿ, ಲಕ್ಕಪ್ಪ ಬಡಿಗೇರ, ಮಲ್ಲೇಶಿ ಸಜ್ಜನ, ವಿನಾಯಕ ಗುಣಸಾಗರ, ಗಣೇಶ ಮೇತ್ರಿ, ಫಕೀರಪ್ಪ ಮಾದರ, ಪರಶುರಾಮ ದಿಂಡವಾರ, ಪ್ರಕಾಶ ಗುಡಿಮನಿ, ರಾಜೀವ ತೊರವಿ, ಲಕ್ಷ್ಮಣ ಹಾಲಿಹಾಳ, ರವಿ ಮ್ಯಾಗೇರಿ, ಶರಣು ಶಿಂಧೆ ಇನ್ನಿತರರು ಇದ್ದರು.

